ಅಂಜನಾದ್ರಿ ಪೂಜಾ ವಿವಾದ: ಸುಪ್ರೀಂಕೋರ್ಟ್ ಆದೇಶ ಪಾಲನೆ ವಿಳಂಬ – ಡಿಸಿ ವಿಚಾರಣೆಗೆ ಹಾಜರಾಗುವಂತೆ ಸೂಚನೆ

ಕೊಪ್ಪಳ: ಆಂಜನೇಯನ ಜನ್ಮಸ್ಥಳ ಅಂಜನಾದ್ರಿ ಬೆಟ್ಟದಲ್ಲಿ ಪೂಜಾ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ಆದೇಶವನ್ನು ಜಿಲ್ಲಾಡಳಿತ ಪಾಲಿಸದ ಹಿನ್ನೆಲೆ ಆನ್ಲೈನ್ನಲ್ಲಿ ಖುದ್ದು ವಿಚಾರಣೆಗೆ ಹಾಜರಾಗಲು ಜಿಲ್ಲಾಧಿಕಾರಿ ಸುರೇಶ್ ಇಟ್ನಾಳ್ಗೆ ಸುಪ್ರೀಂಕೋರ್ಟ್ ತಾಕೀತು ಮಾಡಿದೆ. ಇತ್ತೀಚೆಗೆ ವಿದ್ಯಾದಾಸ್ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದರು. ವಾದ ಆಲಿಸಿದ ಸುಪ್ರೀಂಕೋರ್ಟ್ ಡಿಸಿಗೆ ಆ.11ರಂದು ವಿಚಾರಣೆಗೆ ಹಾಜರಾಗಲು ಸೂಚಿಸಿದೆ.

ಬೇರೋಬ್ಬ ಅರ್ಚಕರಿಂದ ಪೂಜೆ
ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟದ ಮೇಲೆ ಆಂಜನೇಯ ದೇಗುಲವಿದೆ. ಸುಪ್ರೀಂಕೋರ್ಟ್ ತನ್ನ ಮಧ್ಯಂತರ ಆದೇಶದಲ್ಲಿ, ಅರ್ಚಕ ವಿದ್ಯಾದಾಸ್ ಬಾಬಾರಿಗೆ ಪೂಜೆಗೆ ಅವಕಾಶ ನೀಡಬೇಕೆಂದು ತಿಳಿಸಿತ್ತು. ಜೊತೆಗೆ ಬೆಟ್ಟದ ಮೇಲೆ ಅವರಿಗೆ ಮೂಲ ಸೌಲಭ್ಯ ಇರುವ ಕೊಠಡಿ ನೀಡಬೇಕು ಎಂದು ಸೂಚಿಸಿತ್ತು. ಆದರೆ ಇತ್ತೀಚಿಗೆ ಡಿಸಿ ಸುರೇಶ್ ಇಟ್ನಾಳ್ ಅಂಜನಾದ್ರಿಗೆ ಭೇಟಿ ನೀಡಿದ್ದ ವೇಳೆ ಬೇರೋಬ್ಬ ಅರ್ಚಕರು ಪೂಜೆ ಸಲ್ಲಿಸಿದ್ದರು. ಇದಕ್ಕೆ ವಿದ್ಯಾದಾಸ್ ಬಾಬಾ ವಿರೋಧ ವ್ಯಕ್ಯಪಡಿಸಿದ್ದರು.
ಇದಾದ ಬಳಿಕ ಹುಂಡಿ ವಿಚಾರವಾಗಿಯೂ ವಿದ್ಯಾದಾಸ್ ಬಾಬಾ ಮತ್ತು ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಾಶರಾವ್ ಮಧ್ಯೆ ಮಾತಿನ ಚಕಮಕಿ ಸಹ ನಡೆದಿತ್ತು. ಈ ಎಲ್ಲಾ ಬೆಳವಣಿಗೆ ಹಿನ್ನಲೆಯಲ್ಲಿ ಸುಪ್ರೀಂಕೋರ್ಟ್ನಲ್ಲಿ ವಿದ್ಯಾದಾಸ್ ಬಾಬಾ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದ.
ದೇವಾಲಯದ ಅರ್ಚಕರ ಪರವಾಗಿ ವಕೀಲ ವಿಷ್ಣು ಶಂಕರ್ ಜೈನ್ ವಾದಿಸಿದ್ದರು. ವಾದ ಆಲಿಸಿದ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಜೋಯ್ಮಲ್ಯ ಬಾಗ್ಚಿ ಅವರಿದ್ದ ಪೀಠ ಆಗಸ್ಟ 11ರಂದು ಡಿಸಿ ಸುರೇಶ ಇಟ್ನಾಳ್ಗೆ ಆನ್ಲೈನ್ನಲ್ಲಿ ಖುದ್ದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ.
