ಗೃಹ ಪ್ರವೇಶದ ಕನಸುಗಳ ನಡುವೆ – ಬೂದಿಯಾದ ಇಡೀ ಕುಟುಂಬ

ಹೈದರಾಬಾದ್: ಇಲ್ಲಿನ ಹಳೆಯ ನಗರ ಗುಲ್ಜಾರ್ ಹೌಸ್ ಪ್ರದೇಶದಲ್ಲಿ ಭಾನುವಾರ ನಸುಕಿನಲ್ಲಿ ನಡೆದ ಬೆಂಕಿ ದುರಂತದಲ್ಲಿ 17 ಮಂದಿ ಬಲಿಯಾಗಿರುವ ಆಭರಣ ವ್ಯಾಪಾರಿ ಪ್ರಹ್ಲಾದ್ ಮೋದಿಯವರ ಕುಟುಂಬವು ಸದ್ಯದಲ್ಲೇ ಹೊಸ ಮನೆಗಳಿಗೆ ವಾಸ್ತವ್ಯ ಬದಲಿಸುವ ಯೋಜನೆಯಲ್ಲಿತ್ತು.
ಉಪನಗರ ಅಟ್ಟಾಪುರದ ಉಪ್ಪಾರಪಲ್ಲಿಯಲ್ಲಿ ಹೊಸದಾಗಿ ನಿರ್ಮಿಸಿರುವ ಎರಡು ಮನೆಗಳ ಗೃಹಪ್ರವೇಶ ಸಮಾರಂಭವನ್ನು ಆರು ತಿಂಗಳ ಹಿಂದಷ್ಟೇ ಈ ಕುಟುಂಬ ಏರ್ಪಡಿಸಿತ್ತು. ಹೊಸ ಮನೆಗಳ ಒಳಾಂಗಣ ವಿನ್ಯಾಸದ ಕೆಲಸ ಇನ್ನೂ ನಡೆಯುತ್ತಿದ್ದು, ಎರಡು ತಿಂಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇತ್ತು. ಪ್ರಹ್ಲಾದ್ ಮೋದಿಯವರ ನಾಲ್ವರು ಮಕ್ಕಳ ಪೈಕಿ ಅವರ ಹಿರಿಯ ಮಗ ಈಗಾಗಲೇ ಅಟ್ಟಾಪುರದ ಹೊಸ ಮನೆಗೆ ಸ್ಥಳಾಂತರಗೊಂಡಿದ್ದರೆ, ಇಡೀ ಕುಟುಂಬ ಸದ್ಯದಲ್ಲೇ ಸ್ಥಳಾಂತರವಾಗುವ ತಯಾರಿಯಲ್ಲಿತ್ತು ಎಂದು ಪ್ರಹ್ಲಾದ್ ಅವರ ನೆರೆಹೊರೆಯವರು ನೆನಪಿಸಿಕೊಂಡರು.
ಪ್ರಹ್ಲಾದ್ ಅವರ ಇಬ್ಬರು ವಿವಾಹಿತ ಪುತ್ರಿಯರು ರಾಜೀವ್ ನಗರ ಮತ್ತು ಸನತ್ನಗರದಲ್ಲಿ ವಾಸಿಸುತ್ತಿದ್ದರು. ಪ್ರಹ್ಲಾದ್ ಅವರ ಕಿರಿಯ ಮಗ ಪಂಕಜ್ ಮೋದಿ ಅವರು ತಮ್ಮ ಪತ್ನಿ ಮತ್ತು ಮೂವರು ಮಕ್ಕಳೊಂದಿಗೆ ತಂದೆಯೊಂದಿಗೆ ನೆಲಸಿದ್ದರು. ಪ್ರಹ್ಲಾದ್ ಅವರು ಅಟ್ಟಾಪುರದ ಸಂಬಂಧಿಕರರೊಬ್ಬರ ಮನೆಯಲ್ಲಿನ ಸಂಭ್ರಮಾಚರಣೆಗೆ ತಮ್ಮ ಪುತ್ರಿಯರು ಮತ್ತು ಮೊಮ್ಮಕ್ಕಳನ್ನು ಆಹ್ವಾನಿಸಿದ್ದರು. ಬೇಸಿಗೆ ರಜೆ ಇರುವುದರಿಂದ ಅವರ ಇಬ್ಬರು ಪುತ್ರಿಯರು ತಮ್ಮ ಮಕ್ಕಳೊಂದಿಗೆ ಗುಲ್ಜಾರ್ ಹೌಸ್ ಪ್ರದೇಶದ ನಿವಾಸಕ್ಕೆ ಬಂದಿದ್ದರು.
ಈ ಕುಟುಂಬವು ಸಮಾರಂಭದಲ್ಲಿ ಭಾಗವಹಿಸಿ ಶನಿವಾರ ರಾತ್ರಿ 10 ಗಂಟೆ ಸುಮಾರಿಗೆ ಅಟ್ಟಾಪುರದಿಂದ ಮನೆಗೆ ವಾಪಸಾಗಿತ್ತು. ಭಾನುವಾರ ನಸುಕಿನಲ್ಲಿ ಸಂಭವಿಸಿದ ಈ ದುರಂತದಲ್ಲಿ ಪ್ರಹ್ಲಾದ್ ಮೋದಿ ಮತ್ತು ಅವರ ಪತ್ನಿ, ಅವರ ಮಗ, ಇಬ್ಬರು ಪುತ್ರಿಯರು ಮತ್ತು ಮೊಮ್ಮಕ್ಕಳು ಮೃತಪಟ್ಟಿದ್ದಾರೆ.