ಭಿಕ್ಷುಕನ ವೇಷದಲ್ಲಿ ಪಾಕಿಸ್ತಾನದ ಅಣು ರಹಸ್ಯ ಬಯಲಿಗೆಳೆದ ಅಜಿತ್ ದೋವಲ್

ನವದೆಹಲಿ: ಡಿ ದೇವದತ್ರವರ ‘ಅಜಿತ್ ದೋವಲ್ – ಆನ್ ಎ ಮಿಷನ್’ಪುಸ್ತಕದ ಓದಿದರೆ, ಭಾರತ ಎಂತೆಂಥಾ ಯೋಧರನ್ನು ಕಂಡಿದೆ ಅನ್ನೋದು ಗೊತ್ತಾಗುತ್ತೆ.1980 ರ ದಶಕದಲ್ಲಿ ಹಾಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ (Ajit Doval) ಪಾಕಿಸ್ತಾನದ (Pakistan) ಪರಮಾಣು ಕಾರ್ಯಕ್ರಮದ ಮೇಲೆ ಕಣ್ಣಿಡಲು ಭಿಕ್ಷುಕನಂತೆ ವೇಷ ಧರಿಸಿದ್ದ ಮಿಷನ್ಅನ್ನು ಬಹಿರಂಗಪಡಿಸಿದ್ದಾರೆ.1980 ರ ದಶಕದಲ್ಲಿ, ದೋವಲ್ರನ್ನು ಪಾಕಿಸ್ತಾನದ ಇಸ್ಲಾಮಾಬಾದ್ಗೆ (Islamabad) ನಿಯೋಜಿಸಲಾಗಿತ್ತು.ಆ ನಿಯೋಜನೆಯು ಅಪಾರ ಅಪಾಯಗಳನ್ನು ಹೊಂದಿತ್ತು ಎಂದು ಪುಸ್ತಕದಲ್ಲಿ ಬರೆದಿದ್ದಾರೆ.

ಅಜಿತ್ ದೋವಲ್,ಪಾಕಿಸ್ತಾನದ ರಾವಲ್ಪಿಂಡಿಯ ಕಹುತಾದ ಬೀದಿಗಳಲ್ಲಿ ಭಿಕ್ಷೆಯನ್ನು ಬೇಡುತ್ತಿದ್ದರು. ಇವರನ್ನು ನಿಜವಾಗಿಯೂ ಭಿಕ್ಷುಕನೆಂದು ಹಣವನ್ನೂ ನೀಡಿದವರು ಇದ್ದಾರೆ ಎಂದು, ಡಿ.ದೇವದತ್ ಅವರ, ‘ಅಜಿತ್ ದೋವಲ್ – ಆನ್ ಎ ಮಿಷನ್’ ಪುಸ್ತಕದಲ್ಲಿ ಉಲ್ಲೇಖವಾಗಿದೆ.2023 ರಲ್ಲಿ ಪ್ರಕಟವಾದ ಈ ಪುಸ್ತಕವು, ಪಾಕಿಸ್ತಾನವು ಯಾವುದೇ ರೀತಿಯಿಂದಲಾದರೂ ಪರಮಾಣು ಶಸ್ತ್ರಾಸ್ತ್ರಗಳನ್ನು ಪಡೆಯಲು ದೃಢನಿಶ್ಚಯ ಮಾಡಿತ್ತು.
1974 ರಲ್ಲಿ ಭಾರತವು ತನ್ನ ಮೊದಲ ಯಶಸ್ವಿ ಪರಮಾಣು ಪರೀಕ್ಷೆಯೊಂದಿಗೆ ಜಗತ್ತನ್ನು ಬೆಚ್ಚಿ ಬೀಳಿಸಿದ್ದರಿಂದ ಇದಕ್ಕೆ ಪ್ರತಿಕ್ರಿಯೆಯಾಗಿ, ಪಾಕಿಸ್ತಾನವು ಪರಮಾಣು ಸಾಮರ್ಥ್ಯದ ಆಕ್ರಮಣಕಾರಿ ಅನ್ವೇಷಣೆಯನ್ನು ಪ್ರಾರಂಭಿಸಿತು. ಇದಕ್ಕೆ ಚೀನಾದಂತಹ ದೇಶಗಳು ಸಹಾಯ ಮಾಡಿದವು.ಈ ರಹಸ್ಯ ಪ್ರಯತ್ನಗಳಿಗೆ ಭಾರತಕ್ಕೆ ಪುರಾವೆ ಬೇಕಾಗಿತ್ತು ಮತ್ತು “ಸೂಪರ್ ಕಾಪ್” ಎಂದು ಕರೆಯಲ್ಪಟ್ಟಿದ್ದ ದೋವಲ್ ಅವರಿಗೆ ಈ ಕಾರ್ಯಾಚರಣೆಯ ಜವಾಬ್ದಾರಿಯನ್ನು ವಹಿಸಲಾಯಿತು ಎಂದು ವರದಿ ತಿಳಿಸಿದೆ.
1980ರ ದಶಕದಲ್ಲಿ ಅಜಿತ್ ದೋವಲ್ ಭಿಕ್ಷಕನ ರೂಪದಲ್ಲಿ ಅಣು ಕಾರ್ಯಕ್ರಮದ ಮಾಹಿತಿಯನ್ನು ಭಾರತಕ್ಕೆ ಕಳುಹಿಸುತ್ತಿದ್ದರು. ಇವರು ಕ್ಷೌರಿಕನ ಅಂಗಡಿಯ ಮುಂದೆ ಕೂರುತ್ತಿದ್ದರು, ಯಾಕೆಂದರೆ, ಅಣುಸ್ಥಾವರದಲ್ಲಿ ಕೆಲಸ ಮಾಡುವ ವಿಜ್ಞಾನಿಗಳು ಅಲ್ಲಿ ಹೇರ್ ಕಟ್ಟಿಂಗಿಗೆ ಬರುತ್ತಿದ್ದರು.ಗುಪ್ತಚರ ಅಧಿಕಾರಿ ದೋವಲ್, ಅಂಗಡಿಯಲ್ಲಿ ಬಿದ್ದಿದ್ದ ಕೂದಲನ್ನು ಸದ್ದಿಲ್ಲದೆ ಸಂಗ್ರಹಿಸಿ ಭಾರತಕ್ಕೆ ಮರಳಿ ಸಾಗಿಸಿದರು. ಮಾದರಿಗಳ ಮೇಲೆ ನಡೆಸಲಾದ ಪರೀಕ್ಷೆಗಳಲ್ಲಿ ವಿಕಿರಣ ಮತ್ತು ಯುರೇನಿಯಂನ ಕುರುಹುಗಳು ಕಂಡುಬಂದವು, ಇದು ಪಾಕಿಸ್ತಾನದ ರಹಸ್ಯ ಪರಮಾಣು ಕಾರ್ಯಕ್ರಮವನ್ನು ದೃಢಪಡಿಸಿತು.
ಈ ಪುರಾವೆಗಳೊಂದಿಗೆ, ಭಾರತವು ಪಾಕಿಸ್ತಾನದ ಪರಮಾಣು ಮಹತ್ವಾಕಾಂಕ್ಷೆಗಳ ನೀಲನಕ್ಷೆಯನ್ನು ಬಹಿರಂಗಪಡಿಸಲು ಸಾಧ್ಯವಾಗಿತ್ತು.
ರಾವಲ್ಪಿಂಡಿ, ಪಾಕಿಸ್ತಾನದ ಸೇನಾ ಪ್ರಧಾನ ಕಚೇರಿಯಲ್ಲಿ ಹೊಂದಿರುವಂತಹ ನಗರ. ಅಲ್ಲಿ ಬಿಗಿ ಭದ್ರತೆಯಿತ್ತು, ಭದ್ರತೆಯನ್ನು ಭೇದಿಸಿ ಮಾಹಿತಿಯನ್ನು ಕಲೆಹಾಕುವುದು ಸವಾಲಿನ ಕೆಲಸವಾಗಿತ್ತು. ಆದರೆ, ಅಜಿತ್ ದೋವಲ್, ತಮ್ಮ ಹದ್ದಿನ ಕಣ್ಣಿನಿಂದ, ಪರಮಾಣು ಸಂಶೋಧನೆಯ ಸಾಕ್ಷಿಯನ್ನು ಕಲೆಹಾಕಿದ್ದರು.
ವಿಜ್ಞಾನಿಗಳ ಕೂದಲಿನ ಎಳೆಗಳನ್ನು ಸಂಗ್ರಹಿಸಿ ಯುರೇನಿಯಂ ಇರುವಿಕೆಯನ್ನು ಸಾಬೀತುಪಡಿಸುವ ಮೂಲಕ, ಪಾಕಿಸ್ತಾನದ ಪರಮಾಣು ಪರೀಕ್ಷೆಯನ್ನು ನಡೆಸುವ ಸಾಮರ್ಥ್ಯವನ್ನು ಸುಮಾರು 15 ವರ್ಷಗಳ ಕಾಲ ತಡ ಮಾಡಿದ್ದರು. ಅದನ್ನೂ ಪುಸ್ತಕದಲ್ಲಿ ಬರೆಯಲಾಗಿದೆ. ಈ ಕಾರ್ಯಾಚರಣೆಯು ಅಲ್ಪಾವಧಿಯದ್ದಾಗಿರಲಿಲ್ಲ. ಬರೋಬ್ಬರಿ 6 ವರ್ಷಗಳ ಕಾಲ ದೋವಲ್ ನಿರಂತರವಾಗಿ ಪಾಕಿಸ್ತಾನಲ್ಲಿ ಬೇಹುಗಾರಿಕೆ ನಡೆಸಿದರು. ಈ ಕಾರ್ಯಾಚರಣೆ ಭಾರತದ ರಾಷ್ಟ್ರೀಯ ಭದ್ರತೆಗೆ ಅಪಾಯವನ್ನುಂಟು ಮಾಡಬಹುದಾದ ಅಪಾಯವನ್ನು ಹೊಂದಿತ್ತು. ಆದರೂ ದೋವಲ್ ಎದೆಗುಂದಿರಲಿಲ್ಲ.
ಈ ಕಾರ್ಯಾಚರಣೆಯನ್ನು ದೋವಲ್ರ ಚತುರ ಗುಪ್ತಚರ ಕಾರ್ಯಾಚರಣೆಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ.ಅಜಿತ್ ದೋವಲ್ ತಂದೆ ಸೈನ್ಯದಲ್ಲಿ ಅಧಿಕಾರಿಯಾಗಿದ್ದವರು. ಉತ್ತರಾಖಂಡದಲ್ಲಿ 1945ರಲ್ಲಿ ಜನಿಸಿದ ಅಜಿತ್ ದೋವಲ್, ಅಜ್ಮೀರ್ನ ರಾಷ್ಟ್ರೀಯ ಸೈನಿಕ್ ಸ್ಕೂಲ್ನಲ್ಲಿ ಓದಿ, ನಂತರ ಆಗ್ರಾ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.