ಅಹಮದಾಬಾದ್ ವಿಮಾನ ದುರಂತ: ಟಾಟಾದಿಂದ ಹಾಸ್ಟೆಲ್ ಮೃತರಿಗೂ ₹1 ಕೋಟಿ ಪರಿಹಾರ

ಅಹಮದಾಬಾದ್: ಅಹಮದಾಬಾದ್ನಲ್ಲಿ ಸಂಭವಿಸಿದ ಏರ್ ಇಂಡಿಯಾ ಡ್ರೀಮ್ಲೈನರ್ ಅಪಘಾತದಲ್ಲಿ ಶನಿವಾರದ ವೇಳೆಗೆ ಸಾವನ್ನಪ್ಪಿದವರ 275ಕ್ಕೆ ತಲುಪಿದೆ. 241 ಮಂದಿ ಏರ್ ಇಂಡಿಯಾ ಪ್ರಯಾಣಿಕರಿಗೆ ಕೋಟಿ ರೂಪಾಯಿ ಪರಿಹಾರವನ್ನು ಟಾಟಾ ಗ್ರೂಪ್ ಘೋಷಣೆ ಮಾಡಿತ್ತು. ಈಗ ಬಿಜೆ ಹಾಸ್ಟೆಲ್ನಲ್ಲಿ ಮೃತರಾದ 33 ವ್ಯಕ್ತಿಗಳಿಗೂ ಕೂಡ 1 ಕೋಟಿ ರೂಪಾಯಿ ಪರಿಹಾರವನ್ನು ಘೋಷಣೆ ಮಾಡಿದೆ.
ಟಾಟಾ ಗ್ರೂಪ್ ಪ್ರಕಾರ, ಏರ್ ಇಂಡಿಯಾ ವಿಮಾನ ಬಿದ್ದ ಸಾವು ಕಂಡ ವ್ಯಕ್ತಿಗಳು ಕೂಡ ಒಂದು ಕೋಟಿ ರೂಪಾಯಿ ಪರಿಹಾರಕ್ಕೆ ಅರ್ಹರಾಗಿರುತ್ತಾರೆ ಮತ್ತು ಅಪಘಾತದಲ್ಲಿ ಗಾಯಗೊಂಡವರ ವೈದ್ಯಕೀಯ ವೆಚ್ಚವನ್ನು ಟಾಟಾ ಗ್ರೂಪ್ ಭರಿಸಲಿದೆ. ಗಾಯಗೊಂಡ ವ್ಯಕ್ತಿಗಳಿಗೆ ಅಗತ್ಯವಿರುವ ಎಲ್ಲಾ ಆರೈಕೆ ಮತ್ತು ಬೆಂಬಲವನ್ನು ಗ್ರೂಪ್ ನೀಡಲಿದೆ ಎಂದು ತಿಳಿಸಿದೆ.
ಅಪಘಾತದಲ್ಲಿ ನೆಲದಲ್ಲಿ ಸಾವನ್ನಪ್ಪಿದ ಮತ್ತು ಗಾಯಗೊಂಡವರಲ್ಲಿ ವೈದ್ಯರು, ವಿದ್ಯಾರ್ಥಿಗಳು, ಆಸ್ಪತ್ರೆ ಸಿಬ್ಬಂದಿ ಮತ್ತು ವಿಮಾನ ನಿಲ್ದಾಣಕ್ಕೆ ಹತ್ತಿರದಲ್ಲಿರುವ ಮೇಘನಿನಗರ ಪ್ರದೇಶದ ಸ್ಥಳೀಯ ನಿವಾಸಿಗಳು ಸೇರಿದ್ದಾರೆ. ಡ್ರೀಮ್ಲೈನರ್ ಅಪಘಾತದಲ್ಲಿ ಡಿಕ್ಕಿ ಹೊಡೆದು ತೀವ್ರವಾಗಿ ಹಾನಿಗೊಳಗಾದ ಬಿ ಜೆ ಮೆಡಿಕಲ್ನ ಹಾಸ್ಟೆಲ್ನ ಪುನರ್ನಿರ್ಮಾಣವನ್ನು ಕೂಡ ಟಾಟಾ ಗ್ರೂಪ್ ಮಾಡಲಿದೆ.
ವಿಮಾನದಲ್ಲಿದ್ದ 241 ಪ್ರಯಾಣಿಕರು ಮತ್ತು ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಲಾಗಿದೆ. ಅಪಘಾತದಲ್ಲಿ ಒಬ್ಬರು ಬದುಕುಳಿದಿದ್ದಾರೆ. ಉಳಿದ 33 ಸಂತ್ರಸ್ಥರು ಅಪಘಾತದ ಸಮಯದಲ್ಲಿ ಅಹಮದಾಬಾದ್ನ ಬಿಜೆ ಮೆಡಿಕಲ್ ಕಾಲೇಜಿನ ಆವರಣದಲ್ಲಿದ್ದ ವ್ಯಕ್ತಿಗಳಾಗಿರಬಹುದು ಎನ್ನಲಾಗಿದೆ.
ಆರ್ಥಿಕ ಪರಿಹಾರವನ್ನು ಹೊರತುಪಡಿಸಿ ಮೃತರ ಹತ್ತಿರದ ಸಂಬಂಧಿಕರಿಗೆ ಉದ್ಯೋಗ ನೀಡುವಂತಹ ಯೋಚನೆಗಳು ಟಾಟಾ ಗ್ರೂಪ್ನ ಮುಂದಿದೆಯೇ ಎನ್ನುವ ಪ್ರಶ್ನೆಗೆ ಅಧಿಕಾರಿಯೊಬ್ಬರು, “ಸದ್ಯಕ್ಕೆ ಏನನ್ನೂ ನಿರ್ಧರಿಸಲಾಗಿಲ್ಲ. ನಾವು ಇನ್ನೂ ಪರಿಸ್ಥಿತಿಯನ್ನು ನಿರ್ಣಯಿಸುತ್ತಿದ್ದೇವೆ ಮತ್ತು ತನಿಖೆ ಪ್ರಾರಂಭವಾಗಿದೆ” ಎಂದು ಹೇಳಿದರು.
ಟಾಟಾ ಗ್ರೂಪ್ ಘೋಷಿಸಿದ ಒಂದು ಕೋಟಿ ರೂಪಾಯಿಗಳಲ್ಲದೆ, ಅಪಘಾತದಲ್ಲಿ ಸಾವನ್ನಪ್ಪಿದ ಪ್ರಯಾಣಿಕರಿಗೆ ವಿಮಾ ಕಂಪನಿಗಳಿಂದ ಸುಮಾರು 1.5 ಕೋಟಿ ರೂಪಾಯಿಗಳ ಪರಿಹಾರವೂ ಸಿಗಲಿದೆ. ಏರ್ ಇಂಡಿಯಾ ಪಾಲಿಸಿಯ ಪ್ರಾಥಮಿಕ ವಿಮಾದಾರರು: ಟಾಟಾ ಎಐಜಿ ಜನರಲ್ ಇನ್ಶುರೆನ್ಸ್ (ಶೇಕಡಾ 40 ಕ್ಕಿಂತ ಹೆಚ್ಚು ಪಾಲನ್ನು ಹೊಂದಿರುವ ಪ್ರಮುಖ ವಿಮಾದಾರರು), ಐಸಿಐಸಿಐ ಲೊಂಬಾರ್ಡ್ ಜನರಲ್ ಇನ್ಶುರೆನ್ಸ್, ನ್ಯೂ ಇಂಡಿಯಾ ಅಶ್ಯೂರೆನ್ಸ್ ಮತ್ತು ಇತರ ಪಿಎಸ್ಯು ಸಾಮಾನ್ಯ ವಿಮಾದಾರರು. ಅಂತಿಮ ಬಿಲ್ ಅನ್ನು ಎಐಜಿ ನೇತೃತ್ವದ ಮರುವಿಮಾದಾರರು ತೆಗೆದುಕೊಳ್ಳುತ್ತಾರೆ.