ಭೂತಾನ್ ಪ್ರವಾಸ ಮುಗಿಸಿ ತಕ್ಷಣ ಲೋಕನಾಯಕ ಆಸ್ಪತ್ರೆಗೆ ಪ್ರಧಾನಿ ಮೋದಿ ಭೇಟಿ; ಗಾಯಾಳುಗಳ ಆರೋಗ್ಯ ವಿಚಾರಣೆ!

ನವದೆಹಲಿ: ಭೂತಾನ್ ಪ್ರವಾಸ ಮುಗಿಸಿದ ಪ್ರಧಾನಿ ನರೇಂದ್ರ ಮೋದಿ (Narendra Modi) ನೇರವಾಗಿ ದೆಹಲಿಯ ಲೋಕನಾಯಕ ಆಸ್ಪತ್ರೆಗೆ (Lok Nayak Hospital) ಭೇಟಿ ನೀಡಿ ದೆಹಲಿ ಕಾರು ಸ್ಫೋಟದಲ್ಲಿ (Delhi Blast) ಗಾಯಗೊಂಡವರ ಆರೋಗ್ಯ ವಿಚಾರಿಸಿದ್ದಾರೆ.

ಗಾಯಾಳುಗಳನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ ಬಳಿಕ ಶೀಘ್ರ ಗುಣಮುಖರಾಗುವಂತೆ ಮೋದಿ ಹಾರೈಸಿದರು. ಅಲ್ಲದೇ ಆಸ್ಪತ್ರೆಯ ವೈದ್ಯರು ಗಾಯಾಳುಗಳ ಆರೋಗ್ಯದ ಕುರಿತು ಪ್ರಧಾನಿ ಮೋದಿಗೆ ಮಾಹಿತಿ ನೀಡಿದ್ದಾರೆ
ಗಾಯಾಳುಗಳ ಭೇಟಿ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಸಂಜೆ ಉನ್ನತ ಮಟ್ಟದ ಭದ್ರತಾ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ. ದಾಳಿಯ ಗಂಭೀರತೆಯನ್ನು ಗಮನದಲ್ಲಿಟ್ಟುಕೊಂಡು ಈ ಸಭೆಯನ್ನು ಕರೆಯಲಾಗಿದೆ ಮತ್ತು ಮುಂದಿನ ಕ್ರಮ ಮತ್ತು ಭದ್ರತಾ ಕ್ರಮಗಳನ್ನು ವಿವರವಾಗಿ ಚರ್ಚಿಸಲಿದ್ದಾರೆ. ಸಂಜೆ 5:30ಕ್ಕೆ ಮೋದಿ ಎರಡು ಪ್ರಮುಖ ಸಭೆಗಳ ಅಧ್ಯಕ್ಷತೆ ವಹಿಸಲಿದ್ದಾರೆ.
ಭದ್ರತಾ ಸಚಿವ ಸಂಪುಟ ಸಮಿತಿ ಸಭೆಯಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ, ರಕ್ಷಣಾ ಸಚಿವರು, ಗೃಹ ಸಚಿವರು ಮತ್ತು ವಿದೇಶಾಂಗ ಸಚಿವರಂತಹ ಪ್ರಮುಖ ಸದಸ್ಯರು ಭಾಗವಹಿಸಲಿದ್ದಾರೆ. ಸ್ಫೋಟದ ತನಿಖೆಯ ಪ್ರಗತಿ, ಭದ್ರತಾ ಲೋಪಗಳ ಪರಿಶೀಲನೆ ಮತ್ತು ಭವಿಷ್ಯದ ಭಯೋತ್ಪಾದನಾ ನಿಗ್ರಹ ಕಾರ್ಯತಂತ್ರಗಳ ಕುರಿತು ಸಭೆಯಲ್ಲಿ ಚರ್ಚಿಸುವ ನಿರೀಕ್ಷೆಯಿದೆ