ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ಕಳ್ಳತನ

ನಟ ದರ್ಶನ್ ಅವರು ಸದ್ಯ ಜೈಲಿನಲ್ಲಿ ಇದ್ದಾರೆ. ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಅವರು ಮತ್ತೆ ಜೈಲು ವಾಸ ಅನುಭವಿಸುವಂತೆ ಆಗಿದೆ. ಹೀಗಿರುವಾಗಲೇ ವಿಜಯಲಕ್ಷ್ಮೀ ಮನೆಯಲ್ಲಿ ಕಳ್ಳತನ ನಡೆದಿದೆ. ಬರೋಬ್ಬರಿ 3 ಲಕ್ಷ ರೂಪಾಯಿ ಹಣವನ್ನು ದೋಚಲಾಗಿದೆ. ಈ ವಿಚಾರ ಶಾಕಿಂಗ್ ಎನಿಸಿದೆ. ಇದಕ್ಕೆ ಸಂಬಂಧಿಸಿದಂತೆ ದೂರು ಕೂಡ ದಾಖಲಾಗಿದೆ. ಯಾರ ಮೇಲೆ ಅನುಮಾನ ಇದೆ ಎಂಬುದನ್ನು ವಿಜಯಲಕ್ಷ್ಮೀ ಅವರು ವಿವರಿಸಿದ್ದಾರೆ.

ವಿಜಯಲಕ್ಷ್ಮೀ ಅವರು ಹೊಸಕೆರೆಹಳ್ಳಿಯ ಪ್ರೆಸ್ಟೀಜ್ ಅಪಾರ್ಟ್ಮೆಂಟ್ನಲ್ಲಿ ವಾಸವಾಗಿದ್ದಾರೆ. ಅವರ ಮನೆಯಿಂದ 3 ಲಕ್ಷ ರೂಪಾಯಿ ಕದ್ದುಕೊಂಡು ಹೋಗಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ವಿಜಯಲಕ್ಷ್ಮೀ ಮ್ಯಾನೇಜರ್ ನಾಗರಾಜ್ ಬೆಂಗಳೂರಿನ ಚೆನ್ನಮ್ಮನಕೆರೆ ಅಚ್ಚುಕಟ್ಟು ಠಾಣೆಗೆ ದೂರು ದಾಖಲು ಮಾಡಿದ್ದಾರೆ.
ಅನುಮಾನ ಯಾರ ಮೇಲೆ?
ಸದ್ಯ ವಿಜಯಲಕ್ಷ್ಮೀ ಅವರು ಮನೆ ಕೆಲಸದವರ ಮೇಲೆ ಅನುಮಾನ ಹೊರಹಾಕಿದ್ದಾರೆ. ಮನೆ ಕೆಲಸದವರ ಮೇಲೆ ದೂರು ದಾಖಲು ಮಾಡಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಪೊಲೀಸರು ಎಫ್ಐಆರ್ ದಾಖಲು ಮಾಡಿಕೊಂಡಿದ್ದಾರೆ.
ನೋವಿನಲ್ಲಿ ವಿಜಯಲಕ್ಷ್ಮೀ
ವಿಜಯಲಕ್ಷ್ಮೀ ಅವರು ಸದ್ಯ ನೋವಿನಲ್ಲಿ ಇದ್ದಾರೆ. ದರ್ಶನ್ ಬಿಡುಗಡೆ ಕಾಣಬೇಕು ಎಂದು ಅವರು ಈ ಮೊದಲು ಸಾಕಷ್ಟು ಪ್ರಯತ್ನ ಮಾಡಿದ್ದರು. ಹಲವು ದೇವಸ್ಥಾನಗಳಿಗೆ ಭೇಟಿ ನೀಡಿ ಅವರು ಪೂಜೆ ಸಲ್ಲಿಕೆ ಮಾಡಿದ್ದರು. ಆ ಬಳಿಕ ದರ್ಶನ್ ಅವರು ಬಿಡುಗಡೆ ಕಂಡಿದ್ದರು. ಆದರೆ, ಕರ್ನಾಟಕ ಹೈಕೋರ್ಟ್ ನೀಡಿದ ಜಾಮೀನನ್ನು ಸುಪ್ರೀಂ ಕೋರ್ಟ್ ರದ್ದು ಮಾಡಿದೆ. ಹೀಗಾಗಿ, ದರ್ಶನ್ ಮತ್ತೆ ಜೈಲು ಸೇರಿದ್ದಾರೆ. ಇದರಿಂದ ವಿಜಯಲಕ್ಷ್ಮೀ ಬೇಸರಗೊಂಡಿದ್ದಾರೆ.
