ಕೊನೆಯ ಸಿನಿಮಾ ಆಗಬಹುದು ಎಂದ ಆಮಿರ್ ಖಾನ್ – ಅಭಿಮಾನಿಗಳಲ್ಲಿ ಆತಂಕ

ತಮ್ಮ ಚಿತ್ರ ಮತ್ತು ಪಾತ್ರಗಳ ಮೂಲಕವೇ ಹೆಸರುವಾಸಿಯಾದವರು ಆಮಿರ್ ಖಾನ್.ತಮ್ಮ ಪ್ರತಿ ಚಿತ್ರಕ್ಕೂ ಅದಕ್ಕೇ ಬೇಕಾದ ತಯಾರಿಯನ್ನೆಲ್ಲ ಮಾಡಿಕೊಂಡೇ ಅಖಾಡಕ್ಕೆ ಇಳಿಯುವ ಆಮಿರ್ ಖಾನ್ ಕೇವಲ ಮಿಸ್ಟರ್ ಪರ್ಫೆಕ್ಷನಿಸ್ಟ್ ಮಾತ್ರ ಅಲ್ಲ ಬಾಲಿವುಡ್ನ ಗೇಮ್ ಚೇಂಜರ್ ಕೂಡ ಹೌದು.

ಬಹುಶಃ ತಮ್ಮ ಪಾಡಿಗೆ ತಾವೂ ಇದ್ದು,ಕೇವಲ ಒಂದು ಚಿತ್ರದ ಮೂಲಕ ಸುದ್ದಿಯಾಗುವ ಕಲೆ ಆಮಿರ್ ಖಾನ್ಗಷ್ಟೇ ಗೊತ್ತು.
ಯಾಕೆಂದರೆ, ಬಾಲಿವುಡ್ ಒಂದು ಸಿದ್ಧ ಮಾದರಿಯ ಹಿಂದೆ ಬಿದ್ದಾಗ ಭಿನ್ನವಾದ ಹಾದಿಯನ್ನು ತುಳಿದವರು ಆಮಿರ್ ಖಾನ್. ಕೇವಲ ಕಮರ್ಷಿಯಲ್ ಚಿತ್ರಗಳನ್ನಷ್ಟೇ ಮಾಡದೇ ಹತ್ತು ಹಲವು ಪ್ರಯತ್ನ ಮತ್ತು ಪ್ರಯೋಗಗಳನ್ನು ಮಾಡಿದರು.
ಇಂಥಾ ಆಮಿರ್ ಖಾನ್ ಸದ್ಯ ನಿವೃತ್ತಿಯ ಬಗ್ಗೆ ಮಾತನಾಡಿದ್ದಾರೆ. ಹೌದು, ಸದ್ಯ ಆಮಿರ್ ಖಾನ್ ಅಭಿನಯದ ಸಿತಾರೆ ಜಮೀನ್ ಪರ್ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಈ ತಿಂಗಳ ಅಂತ್ಯಕ್ಕೆ ಈ ಚಿತ್ರ ತೆರೆಗೆ ಬರಲಿದೆ. ಈ ಹಿನ್ನೆಲೆ ಚಿತ್ರದ ಕುರಿತು ಪ್ರಚಾರ ಮಾಡುತ್ತಿರುವ ಆಮಿರ್ ಖಾನ್ ಸಂದರ್ಶನಗಳನ್ನು ಕೊಡುತ್ತಿದ್ದಾರೆ.
ಹೀಗೆ ‘ರಾಜ್ ಶಮಾನಿ’ ಅವರಿಗೆ ನೀಡಿದ ಸಂದರ್ಶನದಲ್ಲಿ ಆಮಿರ್ ಖಾನ್ ತಮ್ಮ ನಿವೃತ್ತಿಯ ಕುರಿತು ಮಾತನಾಡಿದ್ದಾರೆ. ನನ್ನ ಕನಸಿನ ಯೋಜನೆಯಾದ ಮಹಾಭಾರತ ಬೆಳ್ಳಿ ಪರದೆಯ ಮೇಲೆ ಅನಾವರಣವಾದ ದಿನ ನಾನು ಚಿತ್ರರಂಗಕ್ಕೆ ಗುಡ್ ಬೈ ಹೇಳಬಹುದು ಎಂದು ಹೇಳಿದ್ದಾರೆ.
ಈ ಕುರಿತು ಮಾತನಾಡಿರುವ ಆಮಿರ್ ಖಾನ್ ಮಹಾಭಾರತ ತುಂಬಾನೇ ಆಳವಾದದ್ದು. ಹಲವು ಪದರಗಳಿಂದ ಕೂಡಿರುವ ಮಹಾಕಾವ್ಯ ಅದು ಎಂದು ಹೇಳಿದ್ದಾರೆ. ಜಗತ್ತಿನಲ್ಲಿ ನಡೆಯುವ ಹಲವಾರು ವಿಚಾರಗಳನ್ನು ನಾವು ನೀವು ಮಹಾಭಾರತದಲ್ಲಿ ಕಾಣಬಹುದು ಅಲ್ಲಿನ ಪ್ರತಿಯೊಂದು ಅಂಶ ಕೂಡ ಭಾವನಾತ್ಮಕತೆಯಿಂದ ಕೂಡಿದೆ ಎಂದಿರುವ ಆಮಿರ್ ಖಾನ್ ಇಂತಹ ಅರ್ಥಪೂರ್ಣ ಚಿತ್ರದ ನಂತರ ನನ್ನ ವೃತ್ತಿ ಬದುಕು ಕೊನೆಯಾಗಬಹುದು ಎಂದು ಹೇಳಿದ್ದಾರೆ.
ಮುಂದುವರೆದು ಬಹುಶಃ ಮಹಾಭಾರತ ಮಾಡಿದ ನಂತರ ಮಾಡಲು ಇನ್ನೇನೂ ಉಳಿದಿಲ್ಲ ಎಂಬ ಭಾವನೆ ನನಗೆ ಬರಬಹುದು, ಇದರ ನಂತರ ಇನ್ನೇನೂ ನಾನು ಮಾಡಲು ಸಾಧ್ಯ ಇಲ್ಲ ಎಂದು ನನಗೆ ಅನಿಸಬಹುದು ಯಾಕೆಂದರೆ ಮಹಭಾರತದ ಕಥಾವಸ್ತುವೇ ಅಂತಹದ್ದು ಎಂದು ಆಮಿರ್ ಖಾನ್ ಹೇಳಿದ್ದಾರೆ. ನಾನು ಕೆಲಸ ಮಾಡುತ್ತಲೇ ಸಾಯಬೇಕೆಂದು ಬಯಸುತ್ತೇನೆ ಎಂದು ಕೂಡ ಆಮಿರ್ ಖಾನ್ ಈ ಸಂದರ್ಶನದಲ್ಲಿ ಹೇಳಿದ್ದಾರೆ.
ಅಂದ್ಹಾಗೇ ಕೆಲ ದಿನಗಳ ಹಿಂದೆ ‘ದಿ ಹಾಲಿವುಡ್ ರಿಪೋರ್ಟರ್’ಗೆ ನೀಡಿದ್ದ ಸಂದರ್ಶನದಲ್ಲಿ ಕೂಡ ಮಹಾಭಾರತದ ಬಗ್ಗೆ ಮಾತನಾಡಿದ್ದ ಆಮಿರ್ ಖಾನ್ ಮಹಾಭಾರತ ನನ್ನ ಮಹತ್ವಕಾಂಕ್ಷೆಯ ಚಿತ್ರ. ಒಂದೇ ಬಾರಿ ಈ ಕಥೆಯನ್ನು ಹೇಳಲು ಸಾಧ್ಯ ಇಲ್ಲ. ‘ಲಾರ್ಡ್ ಆಫ್ ದಿ ರಿಂಗ್ಸ್’ ಮಾದರಿಯಲ್ಲಿ ಹಲವು ಭಾಗಗಳಲ್ಲಿ ಚಿತ್ರೀಕರಣವನ್ನು ಮಾಡಿ ಆ ನಂತರ ಒಂದಾದ ಮೇಲೊಂದರಂತೆ ಬಿಡುಗಡೆ ಮಾಡುವ ಯೋಜನೆ ಇದೆ ಎಂದು ಹೇಳಿದ್ದರು.
ಇನ್ನು ಚಿತ್ರದಲ್ಲಿ ನೀವು ಯಾವ ಪಾತ್ರ ನಿರ್ವಹಿಸುತ್ತೀರಾ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ್ದ ಆಮಿರ್ ಖಾನ್ ಸದ್ಯಕ್ಕೆ ನಾನು ಈ ಚಿತ್ರದ ನಿರ್ಮಾಪಕ ಮಾತ್ರ ಪಾತ್ರಕ್ಕೆ ಸೂಕ್ತವಾಗುವ ಕಲಾವಿದರನ್ನು ಹುಡುಕಿ ಆಯ್ಕೆ ಮಾಡಲಾಗುತ್ತೆ ಎಂದು ಹೇಳಿದ್ದರು. ನಾನು ಪಾತ್ರವನ್ನು ಮಾಡಬಹುದು ಮಾಡದೇಯೂ ಇರಬಹುದು ಎಂದು ಆಮಿರ್ ಖಾನ್ ಹೇಳಿದ್ದರು.
ಹಲವು ನಿರ್ದೇಶಕರನ್ನು ಜೊತೆಯಾಗಿಸಿ ಚಿತ್ರ ಮಾಡುವ ಉದ್ದೇಶ ನನ್ನದು ಎಂದು ಕೂಡ ಆಮಿರ್ ಖಾನ್ ದಿ ಹಾಲಿವುಡ್ರಿಪೋರ್ಟರ್ಗೆ ನೀಡಿದ್ದ ಸಂದರ್ಶನದಲ್ಲಿ ಹಿಂದೆ ಹೇಳಿದ್ದರು. ಒಟ್ನಲ್ಲಿ ಸದ್ಯ ಆಮಿರ್ ಖಾನ್ ಮಹಾಭಾರತ ಚಿತ್ರ ನನ್ನ ಕೊನೆಯ ಚಿತ್ರವಾಗಬಹುದು ಎಂದು ಹೇಳಿದ್ದಾರೆ. ಆಮಿರ್ ಅವರ ಈ ಮಾತುಗಳಿಂದ ಸಹಜವಾಗಿ ಅವರ ಅಭಿಮಾನಿಗಳು ಬೇಸರಗೊಂಡಿದ್ದಾರೆ.