38 ಬಾರಿ ಹಾವು ಕಡಿತಕ್ಕೊಳಗಾಗಿ ಸತ್ತ ವ್ಯಕ್ತಿಗೆ ಒಟ್ಟು 11 ಕೋಟಿ ರೂಪಾಯಿ ಪರಿಹಾರ

ಭೋಪಾಲ: ರಾಜ್ಯದಲ್ಲಿ ಮುಖ್ಯಮಂತ್ರಿ ಮೋಹನ್ ಯಾದವ್ ಅವರ ನೇತೃತ್ವದಡಿ ಹೊಸ ಹಗರಣವೊಂದು ನಡೆದಿದೆ ಎಂದು ಮಧ್ಯಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಜಿತು ಪಟ್ವಾರಿ ಆರೋಪಿಸಿದ್ದು, ಒಬ್ಬನೇ ವ್ಯಕ್ತಿಗೆ 38 ಸಲ ‘ಹಾವು ಕಡಿದಿತ್ತು’ ಮತ್ತು ಪರಿಹಾರವಾಗಿ 11 ಕೋಟಿ ರೂ.ಗಳನ್ನು ಪಡೆಯಲಾಗಿದೆ ಎಂದು ದೂರಿದ್ದಾರೆ. ಸಿಯೋನಿ ಜಿಲ್ಲೆಯಲ್ಲಿ ವರದಿಯಾಗಿರುವ ಇಂತಹ ಹಾವು ಕಡಿತ ಹಗರಣವನ್ನು ಹಿಂದೆಂದೂ ಕೇಳಿರಲಿಲ್ಲ ಎಂದೂ ಅವರು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಪಟ್ವಾರಿ,‘ವಿವಿಧ ರೀತಿಗಳ ಭ್ರಷ್ಟಾಚಾರಗಳು ಮತ್ತು ಅವ್ಯವಹಾರಗಳನ್ನು ನಾವು ನೋಡಿದ್ದೇವೆ. ಆದರೆ ಮುಖ್ಯಮಂತ್ರಿ ಯಾದವ್ ಅವರ ಆಡಳಿತದಲ್ಲಿ ಸಿಯೋನಿ ಜಿಲ್ಲೆಯ ನಿವಾಸಿಯೋರ್ವ 38 ಸಲ ‘ಹಾವುಕಡಿತ’ಕ್ಕೆ ಗುರಿಯಾಗಿ ‘ಸತ್ತಿದ್ದಾನೆ’ ಮತ್ತು ಪ್ರತಿಸಲವೂ ರಾಜ್ಯಸರಕಾರದಿಂದ ನಾಲ್ಕು ಲಕ್ಷ ರೂ.ಗಳ ಪರಿಹಾರವನ್ನು ಪಡೆದುಕೊಂಡಿದ್ದಾನೆ.
ಒಂದೇ ಜಿಲ್ಲೆಯಲ್ಲಿ ಹಾವು ಕಡಿತಗಳಿಗೆ ಪರಿಹಾರವಾಗಿ 11 ಕೋಟಿ ರೂ.ಗಳನ್ನು ಪಡೆಯಲಾಗಿದೆ. ಹಾವು ಕಡಿತಕ್ಕೆ ಸಂಬಂಧಿಸಿದ ಯಾವುದೇ ಹಗರಣವನ್ನು ನಾವು ಎಂದಿಗೂ ಕೇಳಿರಲೇ ಇಲ್ಲ. ಆದರೆ ಅದು ಮಧ್ಯಪ್ರದೇಶದಲ್ಲಿ ನಡೆದಿದೆ. ಹಣಕಾಸು ಸಂಪನ್ಮೂಲಗಳನ್ನು ಲೂಟಿ ಮಾಡಲಾಗುತ್ತಿದೆ ಎಂದರು. ಮೂಲಗಳ ಪ್ರಕಾರ ಸಿಯೋನಿ ಜಿಲ್ಲೆಯಲ್ಲಿ ಹಣಕಾಸು ಅವ್ಯಹಾರ ವರದಿಯಾಗಿದ್ದು,ಅಲ್ಲಿ 47 ಜನರು ಹಲವಾರು ಬಾರಿ ಸತ್ತಿದ್ದಾರೆಂದು, ಅದೂ ಹಾವುಕಡಿತದಿಂದ ಎಂದು ಘೋಷಿಸಲಾಗಿದೆ. ಒಟ್ಟು 11.26 ಕೋಟಿ ರೂ.ಗಳ ಹಗರಣ ನಡೆದಿದೆ. ನಕಲಿ ಮೃತ ನಿವಾಸಿಗಳ ಪಟ್ಟಿಯಲ್ಲಿ ಓರ್ವ ವ್ಯಕ್ತಿಯನ್ನು ಹಾವು ಕಡಿತದಿಂದ 38 ಸಲ ಮತ್ತು ಇನ್ನೋರ್ವ ವ್ಯಕ್ತಿಯನ್ನು 19 ಸಲ ಮೃತಪಟ್ಟಿದ್ದನ್ನು ತೋರಿಸಲಾಗಿದೆ. ಈ ಅವ್ಯಹಾರದಲ್ಲಿ ಹಲವಾರು ಅಧಿಕಾರಿಗಳು ಶಾಮೀಲಾಗಿದ್ದು, ಹಣಕಾಸು ಇಲಾಖೆಯು ತನಿಖೆ ನಡೆಸುತ್ತಿದೆ.