ವಿಮಾನದಲ್ಲಿ ಕಾರ್ಮಿಕ ದಿನಾಚರಣೆ: ದಕ್ಷಿಣ ಕನ್ನಡದ ಉದ್ಯಮಿಯಿಂದ ಕಾರ್ಮಿಕರಿಗೆ ವಿಮಾನ ಪಯಣದ ಉಡುಗೊರೆ

ದಕ್ಷಿಣ ಕನ್ನಡ : ಸಿಬ್ಬಂದಿಗೆ ಉಚಿತ ‘ವಿಮಾನಯಾನ’ ಮೂಲಕ ಕಾರ್ಮಿಕರ ದಿನ ಆಚರಣೆ! ಮಾಲಕರ ಜೊತೆ ಬೆಂಗಳೂರು ವಿಮಾನ ಏರಿದ 51 ಕಾರ್ಮಿಕರು. ಹೌದು ಕಾರ್ಮಿಕ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲು ಇಲ್ಲೊಬ್ಬರು ಉದ್ಯಮಿ ತನ್ನ ಸಂಸ್ಥೆಯ ಕಾರ್ಮಿಕರನ್ನು ವಿಮಾನ ಹತ್ತಿಸಿ ಖುಷಿಪಡಿಸಿದ್ದಾರೆ.

ಪುತ್ತೂರಿನ ಎಸ್.ಆರ್.ಕೆ. ಲ್ಯಾಡರ್ ನ ಮಾಲಕ ಕೇಶವ ಅಮೈ ಜೀವನದಲ್ಲಿ ಒಮ್ಮೆಯಾದರೂ ವಿಮಾನದಲ್ಲಿ ಪಯಣಿಸಿ ಗಗನದಲ್ಲಿ ಹಾರಾಡಿದ ಅನುಭವ ಪಡೆಯಬೇಕೆಂಬುದು ಬಹುತೇಕರ ಆಶಯವಾಗಿದ್ದರೂ, ಬಡ ಮತ್ತು ಮಧ್ಯಮ ವರ್ಗದವರಿಗೆ ಇದು ಗಗನ ಕುಸುಮವೇ ಸರಿ. ಈ ಕಾರಣಕ್ಕೆ ಕಾರ್ಮಿಕ ದಿನಾಚರಣೆಯ ಹೆಸರಿನಲ್ಲಿ ತಮ್ಮ ಸಂಸ್ಥೆಯ ಕಾರ್ಮಿಕರೆಲ್ಲರನ್ನು ವಿಮಾನದಲ್ಲಿ ಬೆಂಗಳೂರಿಗೆ ಪ್ರವಾಸಕ್ಕೆ ಕರೆದೊಯ್ದಿದ್ದಾರೆ. ದೃಷ್ಟಿಹೀನತೆ ಸಮಸ್ಯೆಗೆ ತುತ್ತಾಗಿರುವ ಕೇಶವ ಅಮೈ ಅನೇಕ ಬಾರಿ ವಿಮಾನದಲ್ಲಿ ಪ್ರಯಾಣಿಸಿದ್ದಾರೆ. ಆದರೆ ನಾ ಕಂಡು ಕಾಣದ ಜಗತ್ತನ್ನು ಕಾರ್ಮಿಕರಿಗೆ ಬಾನಂಗಳದಿಂದ ತೋರಿಸುವ ಪ್ರಯತ್ನ ಮಾಡಬೇಕೆಂಬ ಮಹದಾಸೆಯಿಟ್ಟುಕೊಂಡಿದ್ದರು.
ಪ್ರತಿ ವರ್ಷ ಹಲವು ಹೊಸತನವನ್ನು ಪರಿಚಯಿಸುತ್ತಿರುವ ಕೇಶವ ಅಮೈ ಮಾಲಕತ್ವದ ಎಸ್ಆರ್ಕೆ ಲ್ಯಾಡರ್ ಕಳೆದ ವರ್ಷ ರಜತ ಸಂಭ್ರಮ ಆಚರಿಸಿ ಕಾರ್ಮಿಕರಿಗೆ ಕ್ರೀಡಾಕೂಟ ಏರ್ಪಡಿಸಿತ್ತು. ಈ ಬಾರಿ ಮೇ 1 ಕಾರ್ಮಿಕರ ದಿನದ ಅಂಗವಾಗಿ ಕಾರ್ಮಿಕರಿಗೆ ಬಾನಂಗಳದಿಂದ ಜಗತ್ತನ್ನು ನೋಡುವ ಅವಕಾಶ ‘ವಿಮಾನಯಾನ’ ಪ್ರವಾಸದ ಯೋಜನೆ ರೂಪಿಸಿದರು.
ಗುರುವಾರ ತನ್ನ ಸಂಸ್ಥೆಯ 51 ಕಾರ್ಮಿಕ ಸಿಬ್ಬಂದಿಯೊಂದಿಗೆ ತಾನೂ ಬೆಂಗಳೂರಿಗೆ ವಿಮಾನದಲ್ಲಿ ಪ್ರವಾಸ ತೆರಳಿದರು. ಬೆಳಗ್ಗೆ ಪುತ್ತೂರಿನಿಂದ ಮಂಗಳೂರಿಗೆ ಬಸ್ನಲ್ಲಿ ತೆರಳಿ ಅಲ್ಲಿಂದ ವಿಮಾನದ ಮೂಲಕ ಬೆಂಗಳೂರಿಗೆ ತೆರಳಿ ಅಲ್ಲಿ ಸಂಸ್ಥೆಗೆ ಸಂಬಂಧಿಸಿ ಇತರ ಫ್ಯಾಕ್ಟರಿಗಳಲ್ಲಿ ಮಾಹಿತಿ ಕಾರ್ಯಕ್ರಮ, ಸಂಜೆ ಸಂಗೀತ ರಸಮಂಜರಿ, ಕ್ಯಾಂಪ್ ಫೈಯರ್ ಮೂಲಕ ಸಂಭ್ರಮಿಸಿ ಮೇ 2ಕ್ಕೆ ಮೈಸೂರಿಗೆ ತೆರಳಿ ಅಲ್ಲಿ ಪ್ರವಾಸಿ ತಾಣಗಳನ್ನು ಸುತ್ತಾಡಿ ರಾತ್ರಿ ಮರಳಿ ಪುತ್ತೂರಿಗೆ ಬರುವ ಮೂಲಕ ಎರಡು ದಿನದ ಪ್ರವಾಸ ಪೂರ್ಣಗೊಳ್ಳಲಿದೆ.
ಸಿಬ್ಬಂದಿ ಸಂತೋಷವೇ ಪ್ರಧಾನ:
ನನ್ನ ಎಸ್ಆರ್ಕೆಯ ಕಾರ್ಮಿಕ ಸಿಬ್ಬಂದಿ ಸಂಸ್ಥೆಯ ಸದಸ್ಯರು. ಅವರು ಸೀಸನ್ ಸಂದರ್ಭದಲ್ಲಿ ಉತ್ತಮ ಕೆಲಸ ನಿರ್ವಹಿಸಿದ್ದಾರೆ. ಹಗಲು-ರಾತ್ರಿ ಕೆಲಸ ಮಾಡಿ ಗ್ರಾಹಕರ ಬೇಡಿಕೆ ಈಡೇರಿಸಿದ್ದಾರೆ. ಅಂತಹ ಸದಸ್ಯರಿಗೆ ನನ್ನಿಂದ ಏನಾದರೂ ಸಂತೋಷದ ದಿನ ಸಿಗಬೇಕು. ಹಾಗಾಗಿ ಅವರಲ್ಲಿ ಹಿರಿಯ ಸಿಬ್ಬಂದಿ ಎದುರು ನಾಲ್ಕೈದು ಆಯ್ಕೆಗಳನ್ನು ಮುಂದಿಟ್ಟೆ. ಅವರು ಪ್ರವಾಸ ಆರಿಸಿಕೊಂಡರು. ಆಗ ನಾನು ಅದಕ್ಕೆ ವಿಮಾನ ಪ್ರವಾಸ ಮಾಡೋಣ ಎಂದೆ, ಅದಕ್ಕೆ ಅವರು ಒಪ್ಪಿಕೊಂಡರು.