ಮೊಬೈಲ್ ಮತ್ತು ಹಣದ ಜಗಳ,ತಾಯಿ ಮತ್ತು ಇಬ್ಬರು ಮಕ್ಕಳ ಆತ್ಮಹತ್ಯೆ

ಮಹದೇಶ್ವರ ಬೆಟ್ಟ:ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಡು ಹೊಲ ಗ್ರಾಮದ ಬಾವಿಯಲ್ಲಿ ತಾಯಿ ಮತ್ತು ಇಬ್ಬರು ಮಕ್ಕಳು ಮುಳುಗಿ ಮೃತಪಟ್ಟಿರುವ ಘಟನೆ ನಿನ್ನೆ ( ಏಪ್ರಿಲ್ 14 ) ಬೆಳಕಿಗೆ ಬಂದಿದೆ.
ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಡುಗೋಲ ಗ್ರಾಮದ ಸುಶೀಲ (30) ಮಕ್ಕಳಾದ ಚಂದ್ರು (8) ದಿವ್ಯ (11) ಎಂಬುವವರು ಮೃತಪಟ್ಟ ದುರ್ದೈವಿಗಳಾಗಿದ್ದಾರೆ.
ಘಟನೆ ವಿವರ: ಕಾಡುಹೊಲ ಗ್ರಾಮದ ಸುಶೀಲರವರ ಮನೆಗೆ ಸುಶೀಲ ರವರ ತಮ್ಮ ಮಾದೇವ ಆಗಮಿಸಿ ಭಾವ ಮಹೇಶ್ ನ ಮೊಬೈಲ್ ಮತ್ತು ಹಣವನ್ನು ತೆಗೆದುಕೊಂಡು ಹೋಗಿದ್ದ ಎನ್ನಲಾಗಿದೆ. ಈ ಸಂಬಂಧ ಮಹೇಶ್ ಬಾಮೈದನಿಗೆ ಮೊಬೈಲ್ ಮತ್ತು ಹಣ ತೆಗೆದುಕೊಂಡು ಹೋಗಿರುವ ಬಗ್ಗೆ ದೂರವಾಣಿ ಕರೆ ಮಾಡಿದಾಗ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಈ ಸಂಬಂಧ ಗಂಡ ಮಹೇಶ್ ಹೆಂಡತಿ ಸುಶೀಲ ರವರ ಜೊತೆ ಕಷ್ಟಪಟ್ಟು ಸಂಪಾದನೆ ಮಾಡಿರುವ ಹಣ ಮತ್ತು ಮೊಬೈಲ್ ಅನು ನಿನ್ನ ತಮ್ಮ ತೆಗೆದುಕೊಂಡು ಹೋಗಿದ್ದಾನೆ ಎಂದು ಜಗಳವಾಡಿದ್ದಾನೆ. ಇದರಿಂದ ಬೇಸತ್ತ ಸುಶೀಲ ತನ್ನ ಇಬ್ಬರು ಮಕ್ಕಳ ಜೊತೆ ಭಾನುವಾರ ರಾತ್ರಿ ಮನೆಯಿಂದ ತೆರಳಿ ಕಾಡುಹೊಲ ಸಮೀಪದಲ್ಲಿನ ಜಮೀನೊಂದರ ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸೋಮವಾರದಂದು ಜಮೀನಿನ ಮಾಲೀಕ ಬಾವಿಯಲ್ಲಿ ನೀರು ತರಲು ತೆರಳಿದಾಗ ಬಾವಿಯ ಬಳಿ ಚಪ್ಪಲಿ ತಾಳಿ ಹಾಗೂ ಇನ್ನಿತರ ವಸ್ತುಗಳು ಕಂಡು ಬಂದಿದೆ. ತಕ್ಷಣ ಗ್ರಾಮಸ್ಥರು ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಸ್ಥಳೀಯರ ಸಹಕಾರದಿಂದ ಬಾವಿಯಲ್ಲಿ ಮುಳುಗಿದ್ದ ಮೂವರನ್ನು ಮೇಲೆತ್ತಿದ್ದಾರೆ.
ಈ ಸಂಬಂಧ ಸುಶೀಲರವರ ತಂದೆ ವೀರಣ್ಣ ಅಳಿಯ ಮಹೇಶ್ ಮೇಲೆ ಮಲೆ ಮಹದೇಶ್ವರ ಬೆಟ್ಟ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ.
Disclaimer: ಯಾವುದೇ ಸಮಸ್ಯೆಗೂ ಸಾವೊಂದೇ ಪರಿಹಾರವಲ್ಲ. ಆತ್ಮಹತ್ಯೆಯ ಯೋಚನೆ ಬಂದರೆ ನಿಮ್ಮ ನೆಚ್ಚಿನ ವ್ಯಕ್ತಿ ಜೊತೆ ಮಾತನಾಡಿ ಪರಿಹಾರ ಕಂಡುಕೊಳ್ಳಿ. ಇಲ್ಲವೇ ಈ ಸಹಾಯವಾಣಿಗೆ ಕರೆಮಾಡಿ: 9152987821