ಜ್ಞಾನಭಾರತಿಯಲ್ಲಿ ನಿರ್ಮಾಣವಾಗಲಿದೆ 200 ಕೋಟಿ ವೆಚ್ಚದ ಅಂಬೇಡ್ಕರ್ ಪ್ರತಿಮೆ

ಬೆಂಗಳೂರು: ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದಲ್ಲಿ 200 ಅಡಿ ಎತ್ತರದ ಅಂಬೇಡ್ಕರ್ ಪ್ರತಿಮೆ ಒಳಗೊಂಡ ಥೀಮ್ ಪಾರ್ಕ್ ಹಾಗೂ ಸಂವಿಧಾನದ ಮ್ಯೂಸಿಯಂ ಶೀಘ್ರವೇ ತಲೆ ಎತ್ತಲಿದೆ.
ಅಂದಾಜು 200 ಕೋಟಿ ರೂ. ವೆಚ್ಚದಲ್ಲಿ 25 ಎಕರೆ ವಿಸ್ತೀರ್ಣದಲ್ಲಿ ಥೀಮ್ ಪಾರ್ಕ್ ಹಾಗೂ ಸಂವಿಧಾನದ ಮ್ಯೂಸಿಯಂ ಸ್ಥಾಪಿಸಲು ಸರ್ಕಾರ ಮುಂದಾಗಿದೆ.
ಗುರುವಾರ ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉನ್ನತ ಶಿಕ್ಷಣ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಉದ್ದೇಶಿತ ಯೋಜನೆ ಕುರಿತು ಚರ್ಚಿಸಿದರು.

2019-20ನೇ ಸಾಲಿನ ಆಯವ್ಯಯದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಥೀಮ್ ಪಾರ್ಕ್ ಹಾಗೂ ಸಂವಿಧಾನದ ಮ್ಯೂಸಿಯಂ ಸ್ಥಾಪನೆ ಮಾಡುವುದಾಗಿ ಸಿಎಂ ಸಿದ್ದರಾಮಯ್ಯ ಘೋಷಿಸಿದ್ದರು.
“ಸಂವಿಧಾನ ರಚನೆಯ ಇತಿಹಾಸ, ಮಹತ್ವವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಉದೇಶದಿಂದ ಬೃಹತ್ ಮಟ್ಟದ ಸಂವಿಧಾನ ಮ್ಯೂಸಿಯಂ ಸ್ಥಾಪಿಸಲಾಗುವುದು ಎಂದು ಸರ್ಕಾರ ಹೇಳಿತ್ತು.

ಜ್ಞಾನಭಾರತಿ ಆವರಣದಲ್ಲಿ ಮ್ಯೂಸಿಯಂ
ಡಾ.ಬಿ.ಆರ್. ಅಂಬೇಡ್ಕರ್ ಥೀಮ್ ಪಾರ್ಕ್ ಹಾಗೂ ಸಂವಿಧಾನ ಮ್ಯೂಸಿಯಂ ಸ್ಥಾಪನೆಗೆ ಜ್ಞಾನಭಾರತಿ ಆವರಣವೇ ಸೂಕ್ತ ಎಂಬ ತಜ್ಞರ ಅಭಿಪ್ರಾಯ ಆಧರಿಸಿ ಯೋಜನೆಗೆ ಶೀಘ್ರವೇ ಚಾಲನೆ ನೀಡಲು ಸರ್ಕಾರ ಮುಂದಾಗಿದೆ.
ಥೀಮ್ ಪಾರ್ಕ್ ನಲ್ಲಿ ಏನೆಲ್ಲಾ ಇರಲಿದೆ?
ಥೀಮ್ ಪಾರ್ಕ್ನಲ್ಲಿ ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ರವರ 200 ಅಡಿ ಎತ್ತರದ ಪ್ರತಿಮೆ.
ಡಾ.ಬಿ.ಆರ್.ಅಂಬೇಡ್ಕರ್ ಅವರ ಬದುಕು, ಬರಹ, ಸಾಧನೆ ಹಾಗೂ ಭಾರತ ಸಂವಿಧಾನ ರಚನೆಯ ಇತಿಹಾಸದ ಬಗ್ಗೆ ಮ್ಯೂಸಿಯಂ.
ಡಾ.ಬಿ.ಆರ್.ಅಂಬೇಡ್ಕರ್ ಸ್ಮಾರಕ ಬೃಹತ್ ಗ್ರಂಥಾಲಯ.
ಬೌದ್ಧ ಸ್ತೂಪಗಳು ಮತ್ತು ವಿವಿಧ ಶಿಲ್ಪ ಕಲಾಕೃತಿಗಳು.
ಕಾನ್ಫರೆನ್ಸ್ ಹಾಲ್, ಮಿನಿ ಥಿಯೇಟರ್, ಉದ್ಯಾನವನ, ಸಂಗೀತ ಕಾರಂಜಿ ಇತ್ಯಾದಿ ಇರಲಿದೆ.
ಆಂಧ್ರದಲ್ಲಿರುವ ಪ್ರತಿಮೆ ಎತ್ತರವೆಷ್ಟು?
ಆಂಧ್ರಪ್ರದೇಶ ಸರ್ಕಾರ ವಿಜಯವಾಡದ ಸ್ವರಾಜ್ ಮೈದಾನದಲ್ಲಿ ವಿಶ್ವದ ಅತಿ ಎತ್ತರದ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಯನ್ನು ಅನಾವರಣಗೊಳಿಸಿದೆ. ಈ ಪ್ರತಿಮೆಯು 206 ಅಡಿ ಎತ್ತರವಿದ್ದು, ಅಮರಾವತಿಯ ಅಂಬೇಡ್ಕರ್ ಸ್ಮೃತಿ ವನದಲ್ಲಿ 81 ಅಡಿ ಎತ್ತರದ ಪೀಠದ ಮೇಲೆ ಸ್ಥಾಪಿಸಲಾಗಿದೆ.(ಇಲ್ಲಿ 125 ಅಡಿ ಅಂಬೇಡ್ಕರ್ ಪ್ರತಿಮೆ ಎತ್ತರ, 81 ಅಡಿ ಪೀಠದ ಎತ್ತರ ಸೇರಿ ಒಟ್ಟು 206 ಅಡಿ ಎಂದು ಪರಿಗಣಿಸಲಾಗಿದೆ)ಪ್ರತಿಮೆ ಹಾಗೂ ಉದ್ಯಾನವನ್ನು 18.81 ಎಕರೆ ವಿಸ್ತೀರ್ಣದಲ್ಲಿ ಒಟ್ಟು 404.35 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ.