ಕ್ಯಾಂಡಿ ಗಂಟಲಲ್ಲಿ ಸಿಲುಕಿ ಮರಣದ ಅಂಚಿನಲ್ಲಿ ಸಿಲುಕಿದ ಮಗು!

ಮಂಗಳೂರು: ಗಂಟಲಲ್ಲಿ ಕ್ಯಾಂಡಿ ಸಿಲುಕಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಮಗುವಿನ ಜೀವವನ್ನು ಕಕ್ಕಿಂಜೆ ಶ್ರೀಕೃಷ್ಣ ಆಸ್ಪತ್ರೆಯ ಕೆಎಂಸಿ ತುರ್ತುನಿಗಾ ಘಟಕದ ವೈದ್ಯರು ರಕ್ಷಿಸಿದ್ದಾರೆ.
2 ವರ್ಷದ ಮಗು ಕ್ಯಾಂಡಿ ತಿನ್ನುವ ವೇಳೆ ಗಂಟಲಲ್ಲಿ ಸಿಲುಕಿದ್ದು, ಉಸಿರಾಟ ನಡೆಸಲಾಗದೇ ಸಮಸ್ಯೆಗೆ ಸಿಲುಕಿತ್ತು. ಮಗುವಿನ ಪೋಷಕರು ಘಟನೆ ನಡೆದ 10-15 ನಿಮಿಷದಲ್ಲಿ ಆಸ್ಪತ್ರೆಗೆ ಕರೆತಂದಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ವೈದ್ಯರ ತಂಡ ಮಗುವಿನ ಉಸಿರಾಟಕ್ಕೆ ತಡೆಯಾಗಿದ್ದ ಕ್ಯಾಂಡಿಯನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.
“ಮಗುವನ್ನು ಆಸ್ಪತ್ರೆಗೆ ಕರೆತಂದಾಗ ಮಗು ಬಹಳ ನಿಶ್ಯಕ್ತಗೊಂಡಿದ್ದು, ಆಮ್ಲಜನಕ ಪ್ರಮಾಣವೂ ಅಪಾಯ ಮಟ್ಟದಲ್ಲಿತ್ತು. ಉಸಿರಾಟ ನಡೆಸಲು ಕಷ್ಟವಾಗುತ್ತಿತ್ತು. ತಕ್ಷಣ ಆಸ್ಪತ್ರೆಯ ತಜ್ಞ ವೈದ್ಯರು ಪರೀಕ್ಷೆ ನಡೆಸಿ ವಿಶೇಷವಾದ ಚೋಕಿಂಗ್ ರೆಸ್ಕೊ ವಿಧಾನವನ್ನು ಕೈಗೊಳ್ಳಲಾಗಿದೆ. ಆದರೂ ಮಗುವಿನ ಸ್ಥಿತಿ ಸುಧಾರಿಸದಿದ್ದಾಗ ಕ್ರಮಬದ್ಧವಾಗಿ ಬೆನ್ನಿಗೆ ಮತ್ತು ಹೊಟ್ಟೆಯ ಭಾಗದಲ್ಲಿ ಒತ್ತಡ ಹಾಕುವ ಮೂಲಕ ಸಿಲುಕಿದ್ದ ಕ್ಯಾಂಡಿಯನ್ನು ವಾಂತಿ ಮಾಡಿಸಿ ಹೊರ ತೆಗೆಯಲಾಗಿದೆ. ಆ ಬಳಿಕ ಮಗುವಿನ ಉಸಿರಾಟದಲ್ಲಿ ಸಹಜ ಸ್ಥಿತಿಗೆ ಬಂತು. ನಿಗಾ ಘಟಕದಲ್ಲಿ ಇರಿಸಿ ಮಗುವಿಗೆ ಆರೈಕೆ ಮಾಡಲಾಗಿದೆ. ಜತೆಗೆ ಎಕ್ಸ್ ರೇ ಮೂಲಕ ಮತ್ತೆ ಯಾವುದೇ ರೀತಿಯ ಸಮಸ್ಯೆ ಇದೆಯೇ ಎಂದೂ ಪರೀಕ್ಷಿಸಲಾಗಿದೆ” ಎಂದು ತುರ್ತು ಚಿಕಿತ್ಸಾ ಘಟಕ ಕ್ಲಸ್ಟರ್ ಮುಖ್ಯಸ್ಥ ಡಾ| ಜೀಧು ರಾಧಾಕೃಷ್ಣನ್ ಹೇಳಿದರು.
ಡಾ| ಮುರಳಿ ಕೃಷ್ಣ ಇರ್ವತ್ರಾಯ ಮಾತನಾಡಿ, ಶ್ರೀ ಕೃಷ್ಣ ಆಸ್ಪತ್ರೆಯಲ್ಲಿರುವ ಕೆಎಂಸಿ ಆಸ್ಪತ್ರೆ ತುರ್ತು ಸೇವಾ ಘಟಕ ಸುತ್ತಮುತ್ತಲಿನ ಪ್ರದೇಶದ ಜನರಿಗೆ ಉತ್ತಮ ಸೇವೆ ನೀಡುತ್ತಿದೆ ಎಂದು ಅವರು ತಿಳಿಸಿದರು.
ಕೆಎಂಸಿ ಆಸ್ಪತ್ರೆ ಮಂಗಳೂರಿನ ಪ್ರಾದೇಶಿಕ ಕಾರ್ಯನಿರ್ವಹಣಾಧಿಕಾರಿ ಸಾಫಿರ್ ಸಿದ್ದಿಕಿ ಮಾತನಾಡಿ, ಉಸಿರುಗಟ್ಟುವುದು ಅಥವಾ ಚೋಕಿಂಗ್ ಎಂದು ಕರೆಯಲ್ಪಡುವ ಸಮಸ್ಯೆ ಮಕ್ಕಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ. ಆದರೆ ದುರಾದೃಷ್ಟವಶಾತ್ ನಗರ ಪ್ರದೇಶಗಳಲ್ಲೂ ಇಂತಹ ಪ್ರಕರಣವನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸುತ್ತಿಲ್ಲ.
ಕಕ್ಕಿಂಜೆಯಲ್ಲಿ ನಡೆದ ಈ ಪ್ರಕರಣ ನಮ್ಮ ವೈದ್ಯರ ತುರ್ತು ಆರೈಕೆ, ಚಿಕಿತ್ಸೆ ಕೈಗೊಳ್ಳುವಲ್ಲಿನ ತಜ್ಞರ ಬದ್ಧತೆ ಹಾಗೂ ಪ್ರಕರಣ ನಿರ್ವಹಿಸಿದ ಕೌಶಲ್ಯವನ್ನು ಎತ್ತಿಹಿಡಿಯುತ್ತದೆ. ಇದರಿಂದ ಇಂದು ಒಂದು ಮಗುವಿನ ಜೀವವನ್ನು ರಕ್ಷಿಸಲಾಗಿದೆ ಎಂದು ತಿಳಿಸಿದರು.