ಕನ್ನಡಿಯಲ್ಲಿ ಬರೆದಿದ್ದ ಆ ಒಂದು ವಿಷಯ ಯುವತಿಯ ಪ್ರಾಣವನ್ನೇ ಪಡೆಯಿತು!

ತೆಲಂಗಾಣ:’ಅಮ್ಮ, ಅಪ್ಪ…ನನ್ನ ಮಗನನ್ನು ನೀವೇ ಬೆಳೆಸಿ, ನೋಡಿಕೊಳ್ಳಿ. ನನ್ನ ಪತಿ ಮತ್ತು ಅತ್ತೆಯ ಕಿರುಕುಳ ನನಗೆ ಸಹಿಸಲು ಇನ್ನೂ ಸಾಧ್ಯವಿಲ್ಲ. ನನ್ನ ಗಂಡ ಬದಲಾಗುತ್ತಾನೆ ಎಂದು ಭಾವಿಸಿದ್ದೆ. ಆದರೆ, ನನ್ನ ಆ ಎಲ್ಲಾ ಭರವಸೆಗಳು ಹುಸಿಯಾಗಿವೆ ಎಂದು ರೂಮ್ನಲ್ಲಿದ್ದ ಕನ್ನಡಿ ಮೇಲೆ ತಾನು ಅನುಭವಿಸುತ್ತಿದ್ದ ಕಷ್ಟಗಳನ್ನು ಬರೆದು, ಯುವತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತೆಲಂಗಾಣದ ಜಗತ್ತಿಯಾಲ್ನಲ್ಲಿ ವರದಿಯಾಗಿದೆ.
‘ಜನಿಸಿದ ಪುತ್ರ ಬಹಳ ಸುಂದರವಾಗಿ ಹುಟ್ಟಿದ್ದಾನೆ. ಇದು ಹೇಗೆ ಸಾಧ್ಯ ಎಂದು ಆಗಾಗ್ಗೆ ಅನುಮಾನಿಸಿ, ನನ್ನನ್ನು ನಿಂದಿಸುತ್ತಾನೆ. ನಿರಂತರವಾಗಿ ನನಗೆ ಕಿರುಕುಳ ನೀಡುತ್ತಿದ್ದಾನೆ. ವರದಕ್ಷಿಣೆ ಕಿರುಕುಳವೂ ಹೆಚ್ಚಾಗಿದೆ. ನನ್ನ ಪತಿ ಬದಲಾಗುತ್ತಾನೆ ಎಂದು ಭಾವಿಸಿ, ಮುಂದೋಗುತ್ತಿದ್ದೆ. ಆದರೆ, ಆತ ಬದಲಾಗುವ ಲಕ್ಷಣಗಳು ಕಾಣುತ್ತಿಲ್ಲ. ನನ್ನ ಮಗನ ಜವಾಬ್ದಾರಿ ನಿಮಗೆ ಅಪ್ಪ, ಅಮ್ಮ. ದಯವಿಟ್ಟು ನೀವೇ ಆತನನ್ನು ಸಾಕಬೇಕು’ ಎಂದು ಯುವತಿ ಕನ್ನಡಿ ಮೇಲೆ ಸಾವಿಗೆ ಕಾರಣ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಸ್ಥಳೀಯರ ಪ್ರಕಾರ, ಮೃತ ಯುವತಿಯನ್ನು ಪೋಚಮ್ಮವಾಡದ ಪ್ರಸನ್ನಲಕ್ಷ್ಮಿ (26) ಎಂದು ಗುರುತಿಸಲಾಗಿದೆ. ಎರಡು ವರ್ಷಗಳ ಹಿಂದೆ ವೆಲ್ಗಟೂರ್ ಮಂಡಲದ ರಾಮನೂರು ಗ್ರಾಮದ ತಿರುಪತಿ ಎಂಬುವವನ ಜತೆ ವಿವಾಹ ಮಾಡಿಕೊಡಲಾಗಿತ್ತು. ಮದುವೆಯ ಸಮಯದಲ್ಲಿ, ಯುವತಿಯ ಪೋಷಕರು 55 ಲಕ್ಷ ರೂ. ವರದಕ್ಷಿಣೆ ಕೊಡಲು ಒಪ್ಪಿಕೊಂಡಿದ್ದರು. ಆದರೆ, 10 ಲಕ್ಷ ರೂ. ನೀಡಲು ಹಿಂದೇಟು ಹಾಕಿದರು. ಇದು ಪತಿಯ ಅಸಲಿ ಮುಖ ಕಳಚಲು ಒಂದು ಕಾರಣ ಎಂದು ಹೇಳಲಾಗಿದೆ.
ದಂಪತಿಗಳಿಬ್ಬರೂ ಬೆಂಗಳೂರಿನಲ್ಲಿ ಸಾಫ್ಟ್ವೇರ್ ಎಂಜಿನಿಯರ್ಗಳಾಗಿ ಕೆಲಸ ಮಾಡುತ್ತಿದ್ದರು. ಪ್ರಸನ್ನಲಕ್ಷ್ಮಿಗೆ ಓರ್ವ ಪುತ್ರನಿದ್ದಾನೆ. ತಮ್ಮಿಬ್ಬರಿಗೆ ಹುಟ್ಟಿದ ಮಗ ಅದೇಗೆ ಅಷ್ಟೊಂದು ಸುಂದರವಾಗಿ ಜನಿಸಿದ ಎಂದು ಅನುಮಾನಿಸಿದ ಪಾಪಿ ಪತಿ, ಆಗಾಗ್ಗೆ ಪತ್ನಿಗೆ ಮಾನಸಿಕ ಕಿರುಕುಳ ನೀಡಿದ್ದಾನೆ. ಉಳಿದ ವರದಕ್ಷಿಣೆ ಹಣಕ್ಕೆ ಬೇಡಿಕೆ ಜತೆಗೆ ಅನುಮಾನ,ನಿಂದನೆ ಕೂಡ ಮಾಡಿದ್ದಾನೆ. ಐದು ದಿನಗಳ ಹಿಂದೆಯಷ್ಟೇ ಬೆಂಗಳೂರಿನಿಂದ ತವರು ಮನೆಗೆ ಬಂದಿದ್ದ ಪ್ರಸನ್ನಲಕ್ಷ್ಮಿ, ಬುಧವಾರ (ಏ.23) ಮನೆಯ ಕೋಣೆಯಲ್ಲಿ ನೇಣು ಬಿಗಿದುಕೊಂಡು ಸಾವಿಗೀಡಾಗಿದ್ದಾಳೆ.
ಕನ್ನಡಿ ಮೇಲೆ ಬರೆದಿದ್ದ ಡೆತ್ನೋಟ್ನಲ್ಲಿ, ‘ಅಮ್ಮ, ಅಪ್ಪ, ನನಗೆ ಬದುಕಲು ಇಷ್ಟವಿಲ್ಲ. ನನ್ನ ಮಗನ ಬಗ್ಗೆ ಎಚ್ಚರದಿಂದಿರಿ. ದಯವಿಟ್ಟು ಆತನಿಗೆ ಮಾತ್ರ ನನ್ನ ಮಗುವನ್ನು ಕೊಡಬೇಡಿ’ ಎಂದಿದ್ದಾರೆ. ಇದರಿಂದಾಗಿ ಪ್ರಸನ್ನಲಕ್ಷ್ಮಿಯ ಸಂಬಂಧಿಕರು ಗುರುವಾರ ಬೆಳಗ್ಗೆ ಪ್ರತಿಭಟನೆ ನಡೆಸಿ, ಮಗಳ ಪತಿ ಮತ್ತು ಅತ್ತೆಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಉಪುನಿತಿ ಗಂಗಾಧರ್ ಅವರ ದೂರಿನ ಆಧಾರದ ಮೇರೆಗೆ ಯುವತಿಯ ಪತಿ, ಅತ್ತೆ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.