ದೇವಾಲಯದ ಅರ್ಚಕರಿಂದ ವಿಶ್ವದ ಮೊದಲ AI ಕನ್ನಡ ಚಲನಚಿತ್ರ

ಬೆಂಗಳೂರು :ಪುರೋಹಿತರ ಕೆಲಸ ದೇವಸ್ಥಾನಗಳಲ್ಲಿ ಪೂಜೆ ಮಾಡುವುದು, ಮದುವೆ ಸಮಾರಂಭಗಳಂತಹ ವಿಶೇಷ ಕಾರ್ಯಕ್ರಮಗಳನ್ನು ನಡೆಸಿಕೊಡುವುದು ಎಂದು ಮಾತ್ರ ನಾವೆಲ್ಲಾ ತಿಳಿದಿದ್ದೆವು. ಆದರೆ ಇಲ್ಲೊಂದು ದೇವಸ್ಥಾನದ ಅರ್ಚಕರು ನಾವು ಬಾಯ್ಮೇಲೆ ಕೈ ಇಡುವಂತಹ ಕೆಲಸ ಮಾಡಿದ್ದಾರೆ.
ಅದೇನೆಂದು ತಿಳಿದರೆ ನೀವು ಅಚ್ಚರಿಪಡೋದು ಖಂಡಿತ.
ಕರ್ನಾಟಕದ ಪುರೋಹಿತರೊಬ್ಬರು ಕೃತಕ ಬುದ್ಧಿಮತ್ತೆ (AI)ಯ ಸಹಾಯದಿಂದ ವಿಶ್ವದ ಮೊದಲ ಸಂಪೂರ್ಣ AI ಆಧಾರಿತ ‘ಲವ್ ಯೂ’ ಕನ್ನಡ ಚಲನಚಿತ್ರವನ್ನು ರಚಿಸಿದ್ದಾರೆ. ಬೆಂಗಳೂರಿನ ಸಿದ್ದೇಹಳ್ಳಿ ಗ್ರಾಮದಲ್ಲಿರುವ ಹನುಮಂತರಾಯ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಅರ್ಚಕ ನರಸಿಂಹ ಮೂರ್ತಿ ಈಗ ಹೊಸ ಗುರುತನ್ನು ಸೃಷ್ಟಿಸುತ್ತಿದ್ದಾರೆ. ಅವರು ಪುರೋಹಿತರಾಗಿದ್ದರೂ ಸಿನಿಮಾದಲ್ಲಿ ಉತ್ಸಾಹಿಗಳು. ಅವರು ಈ ಮೊದಲು ಎರಡು ಚಲನಚಿತ್ರಗಳನ್ನು ಮಾಡಿದ್ದರು, ಆದರೆ ಈ ಬಾರಿ ಅವರು ಮಾಡಿರುವ ಸಿನಿಮಾ ಬಹಳ ವಿಭಿನ್ನವಾಗಿದೆ. ಅದೇನೆಂದರೆ ಮೂರ್ತಿ ಅವರು ವಿಶ್ವದ ಮೊದಲ ಕನ್ನಡ ಚಿತ್ರವನ್ನು ಸಂಪೂರ್ಣವಾಗಿ ಕೃತಕ ಬುದ್ಧಿಮತ್ತೆಯೊಂದಿಗೆ ನಿರ್ಮಿಸಿರುವುದಾಗಿ ಹೇಳಿಕೊಂಡಿದ್ದಾರೆ. ಈ ಚಿತ್ರಕ್ಕೆ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯಿಂದ ಅನುಮೋದನೆ ದೊರೆತಿದೆ.
ವಿಶ್ವದ ಮೊದಲ AI ಚಲನಚಿತ್ರವನ್ನು ನಿರ್ಮಿಸಿ ಬಿಡುಗಡೆ ಮಾಡಲು ನಾನು ಬಯಸಿದ್ದೆ. ಇದೀಗ ನಾನು ಅದನ್ನು ಒಂದೇ ಪರದೆಯ ಮೇಲೆ ತೋರಿಸುತ್ತೇನೆ ಇದರಿಂದ ದಾಖಲೆ ಸೃಷ್ಟಿಯಾಗಲಿದೆ. ‘ಲವ್ ಯೂ’ ಚಲನಚಿತ್ರದಲ್ಲಿ ನಿರ್ಮಾಪಕ ಮತ್ತು ನಿರ್ದೇಶಕರ ಪಾತ್ರವನ್ನು ಸ್ವತ: ನಾನೇ ನಿರ್ವಹಿಸಿದ್ದೇನೆ ಎಂದು ನರಸಿಂಹ ಮೂರ್ತಿ ಹೇಳಿದ್ದಾರೆ.
30 ವಿಧದ AI ಸಾಫ್ಟ್ವೇರ್ಗಳ ಬಳಕೆ
ಈ ಯೋಜನೆಯಲ್ಲಿ ಅವರೊಂದಿಗೆ ಒಬ್ಬ ವ್ಯಕ್ತಿ ಮಾತ್ರ ಇದ್ದಿದ್ದು, ಮೊದಲು ಗ್ರಾಫಿಕ್ ಡಿಸೈನರ್ ಆಗಿದ್ದ ನೂತನ್ ಈಗ AI ತಂತ್ರಜ್ಞರಾಗಿದ್ದಾರೆ. ಸಿನಿಮಾ ನಿರ್ಮಿಸಲು, ಇಬ್ಬರೂ ಸುಮಾರು 30 ರೀತಿಯ AI ಸಾಫ್ಟ್ವೇರ್ಗಳನ್ನು ಬಳಸಿದ್ದಾರೆ. ಅವುಗಳ ಲೈಸೆನ್ಸ್ಗೆ ಸುಮಾರು 10 ಲಕ್ಷ ರೂ. ಖರ್ಚು ಮಾಡಿದ್ದಾರೆ. 95 ನಿಮಿಷಗಳ ಈ ಚಿತ್ರವನ್ನು 12 ಹಾಡುಗಳೊಂದಿಗೆ ನಿರ್ಮಿಸಲಾಗಿದ್ದು, ಇದರಲ್ಲಿ ಪಾತ್ರಗಳು ಮತ್ತು ಧ್ವನಿಗಳನ್ನು ಕೃತಕ ಬುದ್ಧಿಮತ್ತೆಯ ಮೂಲಕ ಮಾತ್ರ ರಚಿಸಲಾಗಿದೆ.
ಆದರೆ ಚಲನಚಿತ್ರ ಸಂಪೂರ್ಣವಾಗಿ ಪರಿಪೂರ್ಣವಾಗಿಲ್ಲ ಎಂದು ಮೂರ್ತಿ ಹೇಳಿದ್ದಾರೆ. ಪ್ರತಿಯೊಂದು ದೃಶ್ಯದಲ್ಲೂ AI ಪಾತ್ರಗಳ ಮುಖಗಳು ಸ್ವಲ್ಪ ಬದಲಾಗುತ್ತಿರುವಂತೆ ತೋರುತ್ತಿತ್ತು, ಭಾವನಾತ್ಮಕ ಅಭಿವ್ಯಕ್ತಿಗಳನ್ನು ಸೃಷ್ಟಿಸುವುದು ಕಷ್ಟಕರವಾಗಿತ್ತು ಮತ್ತು ಲಿಪ್-ಸಿಂಕ್ ಕೂಡ ಪರಿಪೂರ್ಣವಾಗಿಲ್ಲ ಎಂದು ಅವರು ತಿಳಿಸಿದ್ದಾರೆ. ಈ ಚಿತ್ರವನ್ನು ಇಂದು ನಿರ್ಮಿಸಿದ್ದರೆ, ಅದು ಸಾವಿರ ಪಟ್ಟು ಉತ್ತಮವಾಗಿರುತ್ತಿತ್ತು, AI ತಂತ್ರಜ್ಞಾನ ದಿನೇ ದಿನೇ ಬದಲಾಗುತ್ತಿದೆ, ನಾವು ಬಳಸಿದ ಉಪಕರಣಗಳು ಈಗ ಆರು ತಿಂಗಳು ಹಳೆಯವು ಎಂದು ನೂತನ್ ಹೇಳಿದ್ದಾರೆ.
ಈಗ ಈ ಜೋಡಿ ಇನ್ನೆರಡು AI ಚಿತ್ರಗಳನ್ನು ನಿರ್ಮಿಸುತ್ತಿದ್ದಾರೆ. ಒಂದು ಕೆಂಪೇಗೌಡರ ಬಗ್ಗೆ ಮತ್ತು ಇನ್ನೊಂದು ಇಮ್ಮಡಿ ಪುಲಿಕೇಶಿ ಬಗ್ಗೆ. ಮೊದಲ ಚಿತ್ರ ಎರಡು ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಚಿತ್ರದ ಪಾತ್ರಗಳು, ಅವರ ಧ್ವನಿಗಳು ಮತ್ತು ಮುಖಗಳನ್ನು AI ರಚಿಸಿದ್ದರೂ, ಸಂಭಾಷಣೆ ಮತ್ತು ಸಾಹಿತ್ಯವನ್ನು ಮೂರ್ತಿ ಅವರೇ ಬರೆದಿದ್ದಾರೆ.