ಛತ್ತೀಸ್ಗಢದಲ್ಲಿ ಕ್ರೂರತೆ: ನಾಯಿಯನ್ನು ಖರೀದಿಸಲು 200 ರೂ. ನೀಡಿಲ್ಲವೆಂದು ತಾಯಿಯನ್ನು ಹೊಡೆದು ಕೊಂದ ಮಗ

ಛತ್ತೀಸ್ಗಢ: ಮನೆಗೆ ಸಾಕು ನಾಯಿಯನ್ನು ಖರೀದಿಸಲು 200 ರೂ. ಕೊಡಬೇಕೆಂದು 45 ವರ್ಷದ ಪ್ರದೀಪ್ ಎಂಬಾತ ತನ್ನ ತಾಯಿಗೆ ಕೇಳಿದ್ದ. ಆದರೆ, ಆಕೆ ಕೊಡುವುದಿಲ್ಲ ಎಂದಿದ್ದರು. ಇದೇ ವಿಷಯಕ್ಕೆ ಜಗಳ ನಡೆದಿದ್ದು, ಆತ ತನ್ನ ತಾಯಿಯನ್ನು ಹೊಡೆದು ಕೊಂದಿದ್ದಾನೆ.
ಬಳಿಕ ತನ್ನ ಪತ್ನಿಯನ್ನು ತೀವ್ರವಾಗಿ ಗಾಯಗೊಳಿಸಿದ್ದಾನೆ. ಛತ್ತೀಸ್ಗಢದ ರಾಯ್ಪುರದಲ್ಲಿ ಈ ಘಟನೆ ನಡೆದಿದ್ದು, ಆರೋಪಿಯನ್ನು 45 ವರ್ಷದ ಪ್ರದೀಪ್ ದೇವಾಂಗನ್ ಎಂದು ಗುರುತಿಸಲಾಗಿದೆ. ಆರೋಪಿ ತನ್ನ 70 ವರ್ಷದ ತಾಯಿಗೆ ಸಾಕು ನಾಯಿಯನ್ನು ಖರೀದಿಸಲು 200 ರೂ. ನೀಡುವಂತೆ ಕೇಳಿದಾಗ ಆಕೆ ನಿರಾಕರಿಸಿದ್ದರು.
ಇದರ ನಂತರ, ಒಬ್ಬರ ನಡುವೆ ವಾಗ್ವಾದ ನಡೆದು, ಕೋಪದ ಭರದಲ್ಲಿ ಪ್ರದೀಪ್ ತನ್ನ ತಾಯಿಗೆ ಸುತ್ತಿಗೆಯಿಂದ ಹೊಡೆದಿದ್ದಾನೆ. ತನ್ನ 35 ವರ್ಷದ ಪತ್ನಿ ರಾಮೇಶ್ವರಿ ಮಧ್ಯಪ್ರವೇಶಿಸಲು ಪ್ರಯತ್ನಿಸಿದಾಗ ಅವರ ಮೇಲೂ ಹಲ್ಲೆ ಮಾಡಿದನು ಎಂದು ಪೊಲೀಸರು ತಿಳಿಸಿದ್ದಾರೆ
ದಂಪತಿಗಳ 15 ವರ್ಷದ ಮಗ ಈ ಭಯಾನಕ ಕೃತ್ಯವನ್ನು ನೋಡಿ ಗಾಬರಿಯಾಗಿ ತಕ್ಷಣ ತನ್ನ ತಂದೆಯನ್ನು ಎಳೆದುಕೊಂಡು ಹೋಗುವಲ್ಲಿ ಯಶಸ್ವಿಯಾದನು. ಆದರೆ, ಅಷ್ಟರಲ್ಲಾಗಲೇ ಆತನ ಅಜ್ಜಿ ಸಾವನ್ನಪ್ಪಿದ್ದರು. ಆತ ನಂತರ ಹೊರಗೆ ಓಡಿ ನೆರೆಹೊರೆಯವರಿಗೆ ತಿಳಿಸಿದ್ದಾನೆ.
ರಿಕ್ಷಾ ಚಾಲಕನಾಗಿರುವ ಪ್ರದೀಪ್, ಈ ಘಟನೆಯ ನಂತರ ಸ್ಥಳದಿಂದ ಪರಾರಿಯಾಗಿದ್ದಾನೆ. ಪ್ರದೀಪ್ ಅವರ ವಿಚಿತ್ರವಾದ ನಡವಳಿಕೆಯಿಂದಾಗಿ ಅವರ ಕುಟುಂಬವು ನಿರಂತರ ಒತ್ತಡದಲ್ಲಿ ವಾಸಿಸುತ್ತಿತ್ತು ಎಂದು ಸ್ಥಳೀಯರು ಪೊಲೀಸರಿಗೆ ತಿಳಿಸಿದ್ದಾರೆ. ಆರೋಪಿಯ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.