ಶರಾವತಿಯಲಿ ಪ್ರವಾಸೋದ್ಯಮ ಪುನರುತ್ಥಾನ: ಕ್ರೂಸರ್, ಹೌಸ್ಬೋಟ್ ಸೇವೆ ಆರಂಭಕ್ಕೆ ತಯಾರಿ

ಹೊನ್ನಾವರ : ಶರಾವತಿಯಲ್ಲಿ 500 ವರ್ಷಗಳ ಹಿಂದಿನ ರಾಣಿ ಚೆನ್ನಭೈರಾದೇವಿ ಕಾಲದಂತೆ ಜಲಯಾನ ಪ್ರವಾಸೋದ್ಯಮ ಬರುವ ಬೇಸಿಗೆಯ ಪ್ರವಾಸಿ ಹಂಗಾಮಿನಲ್ಲಿ ಆರಂಭವಾಗಲಿದೆ.
ಕೇಂದ್ರ ಸರ್ಕಾರ ಸಾಗರಮಾಲಾ ಯೋಜನೆ ಅನ್ವಯ ಜಿಲ್ಲೆಯ 2 ನದಿಗಳಿಗೆ ಈ ಯೋಜನೆಯನ್ನು ಅನ್ವಯಿಸಿತ್ತು. ಈ ಕುರಿತು ರಾಜ್ಯ ಸರ್ಕಾರದ ಪ್ರವಾಸೋದ್ಯಮ ಇಲಾಖೆ ತಯಾರಿ ನಡೆಸಿದ್ದು, ಹಲವಾರು ಇಲಾಖೆಗಳ ಪರವಾನಿಗೆ ಕಾರಣ ವಿಳಂಬವಾಗುತ್ತಿದೆ ಎಂದು ಪ್ರವಾಸೋದ್ಯಮ ಇಲಾಖೆ ನಿರ್ದೇಶಕ ಡಾ| ಕೆ.ವಿ. ರಾಜೇಂದ್ರ ಹೇಳಿದ್ದಾರೆ.
ಕಾರವಾರದಲ್ಲಿ ನಡೆದ ಉತ್ತರ ಕನ್ನಡ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಲಹಾ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಚೆನ್ನಭೈರಾದೇವಿ ಕಾಲದಲ್ಲಿ ಗೇರುಸೊಪ್ಪೆ ಅಂತಾರಾಷ್ಟ್ರೀಯ ವಾಣಿಜ್ಯ ವ್ಯವಹಾರ ನಡೆಸುತ್ತಿತ್ತು. ಆ ದಿನಗಳಲ್ಲಿ ಉಗಿ ಹಡಗುಗಳು, ಊರಿನ ಮಚವೆಗಳು ಓಡಾಡುತ್ತಿದ್ದವು.
ಶರಾವತಿಯ ಎಡಬಲ ದಂಡೆಯಲ್ಲಿ ರಸ್ತೆ ಇಲ್ಲದ ಕಾರಣ 35 ಕಿ.ಮೀ. ಜನ ವಸತಿ ಇರುವ ಗೇರುಸೊಪ್ಪಾದಿಂದ ಹೊನ್ನಾವರದವರೆಗಿನ ಜನರಿಗಾಗಿ ನಂತರ ದಿನಗಳಲ್ಲಿ ಕೇರಳದ ಕಂಪನಿಯೊಂದು ಜನರನ್ನು ಎಡಬಲ ದಂಡೆಗೆ ತಲುಪಿಸಲು ಮಹಡಿ ಸೌಲಭ್ಯವುಳ್ಳ ಲಾಂಚ್ಗಳನ್ನು ನಡೆಸುತ್ತಿತ್ತು. ನಂತರದ ದಿನಗಳಲ್ಲಿ ರಸ್ತೆ ಆಗುತ್ತಾ ಬಂದಂತೆ ಡಿಂಗಿಗಳು ಓಡಾಡತೊಡಗಿದವು. ಈಗ ಅದೇ ಡಿಂಗಿಗಳು ಶರಾವತಿಯಲ್ಲಿ ಬೋಟಿಂಗ್ ನಡೆಸುತ್ತವೆ.
ಸಮಿತಿ ಸದಸದ್ಯರೊಬ್ಬರು ಈಗಿರುವ ಪ್ರವಾಸಿ ಸೌಲಭ್ಯವನ್ನು ಶಿಸ್ತು ಮತ್ತು ಕಾನೂನುಬದ್ಧವಾಗಿಸಬೇಕು ಮತ್ತು ಹೊನ್ನಾವರದಿಂದ ಗೇರುಸೊಪ್ಪಾವರೆಗೆ ಶರಾವತಿ ಮಳೆಗಾಲದಲ್ಲಿಯೂ ಮಂದವಾಗಿ ಹರಿಯುತ್ತದೆ.
ಎಡಬಲ ದಂಡೆಗಳಲ್ಲಿ ಹಲವಾರು ಪ್ರೇಕ್ಷಣೀಯ ದೇವಸ್ಥಾನ, ಚರ್ಚ್, ಮಸೀದೆಗಳಿವೆ. ಗೇರುಸೊಪ್ಪಾದಲ್ಲಿ ಚತುರ್ಮುಖ ಬಸದಿ ಇದೆ. ನದಿಯಲ್ಲಿ ಮೂರು ನಡುಗಡ್ಡೆಗಳಿವೆ.
200 ವರ್ಷಗಳ ಹಿಂದೆ ಬ್ರಿಟಿಷ್ ಅಧಿಕಾರಿ ಕರ್ನಲ್ ಪ್ಯಾಟನ್ ನೆಟ್ಟ ಸಾಗವಾನಿ ನೆಡುತೋಪು ಮತ್ತು ವಿರಳ ವೃಕ್ಷಗಳಿವೆ. ನದಿ ಸೇರುವ 3 ಹೊಳೆಗಳಿಗೆ ಒಳನಾಡ ಸಂಚಾರ ಸಾಧ್ಯವಿದೆ. ಆದ್ದರಿಂದ ಕ್ರೂಸರ್ ಮತ್ತು ಹೌಸ್ಬೋಟ್ ವ್ಯವಸ್ಥೆ ಆದರೆ ಪ್ರವಾಸಿಗರು ಒಂದೆರಡು ದಿನ ಪ್ರಕೃತಿ ವೈಭವವನ್ನು ಪುರಾತನ ಅವಶೇಷಗಳನ್ನು, ಪುಣ್ಯಸ್ಥಳಗಳನ್ನು ನೋಡಿ ಬರಲು ಸಾಧ್ಯ.
ಆದ್ದರಿಂದ ಈ ವ್ಯವಸ್ಥೆ ಆಗಬೇಕು ಎಂದು ಹೇಳಿ ತಮ್ಮ ವರದಿಯನ್ನು ಒಪ್ಪಿಸಿದಾಗ ಶರಾವತಿಯಲ್ಲಿ ಈಗಾಗಲೇ ಕ್ರೂಸರ್ ಮತ್ತು ಪ್ರವಾಸಿ ಬೋಟ್ ಯೋಜನೆ ಅಂತಿಮ ಹಂತದಲ್ಲಿದೆ ಎಂದು ಹೇಳಿದ್ದಾರೆ. ಬರುವ ಬೇಸಿಗೆಯಲ್ಲಿ ಶರಾವತಿಯಲ್ಲಿ ಕ್ರೂಸರ್, ಹೌಸ್ಬೋಟ್ ಓಡಾಡಲಿದೆ.