ಸುರತ್ಕಲ್ ಬೀಚ್ ನಲ್ಲಿ ದುರಂತ: ಈಜಲು ಹೋದ ಇಬ್ಬರು ಯುವಕರು ನೀರುಪಾಲು

ಮಂಗಳೂರು : ಸಮುದ್ರಕ್ಕೆ ಈಜಲು ಹೋಗಿದ್ದ ಇಬ್ಬರು ಬಾಲಕರು ನೀರುಪಾಲಾಗಿರುವ ಘಟನೆ ಮಂಗಳೂರು ಹೊರವಲಯದ ಸುರತ್ಕಲ್ ಬಳಿ ಬೀಚ್ ನಲ್ಲಿ ನಡೆದಿದೆ.
ಮುಂಬೈನ ಧ್ಯಾನ್ ಬಂಜನ್ (18), ಹನೀಶ್ ಕುಲಾಲ್ (15) ಸಮುದ್ರಪಾಲಾಗಿರುವ ದುರ್ದೈವಿಗಳು. ಹತ್ತು ಜನರ ತಂಡ ಸಂಜೆ ವೇಳೆ ಬೀಚ್ ಬಳಿ ಬಂದಿದ್ದಾಗ ಈ ದುರಂತ ಸಂಭವಿಸಿದೆ.
ಮುಂಬೈನಿಂದ ಸೂರತ್ಕಲ್ ನ ಸೂರಿಂಜೆಗೆ ಮದುವೆ ಕಾರ್ಯಕ್ರಮಕ್ಕೆಂದು ಬಂದಿದ್ದರು. ಈ ವೇಳೆ ಬೀಚ್ ನಲ್ಲಿ ಈಜಲು ಹೋಗಿದ್ದ ಇಬ್ಬರು ಬಾಲಕರು ನೀರುಪಾಲಾಗಿದ್ದಾರೆ. ಲೈಫ್ ಗಾರ್ಡ್ ಪ್ರದೀಪ್ ಆಚಾರ್ಯ ಎಂಬವರು ಬಾಲಕ ಧ್ಯಾನ್ ನನ್ನು ನೀರಿನಿಂದ ಮೇಲೆತ್ತಿ ಸುರತ್ಕಲ್ ನ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಆದಾಗ್ಯೂ ಧ್ಯಾನ್ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ. ಈತ ಮುಂಬಯಿಯ ವಿವೇಕಾನಂದ ಬಂಜನ್ ಅವರ ಪುತ್ರನಾಗಿದ್ದಾನೆ. ಇನ್ನು ಸಮುದ್ರಪಾಲಾಗಿರುವ ಇನ್ನೋರ್ವ ಬಾಲಕ ಹನೀಶ್ ಗಾಗಿ ಶೋಧಕಾರ್ಯ ಮುಂದುವರೆದಿದೆ.