ಹೈದರಾಬಾದ್ನಲ್ಲಿ ಕಾರಿನೊಳಗೆ ಸಿಲುಕಿ ಉಸಿರುಗಟ್ಟಿದ ಇಬ್ಬರು ಬಾಲಕಿಯರ ಮೃ*ತ್ಯು

ಹೈದರಾಬಾದ್: ರಂಗಾರೆಡ್ಡಿ ಜಿಲ್ಲೆಯಲ್ಲಿ ಸೋಮವಾರ(ಎ14) ಆಕಸ್ಮಿಕವಾಗಿ ಕಾರಿನೊಳಗೆ ಸಿಲುಕಿಕೊಂಡು ನಾಲ್ಕು ಮತ್ತು ಐದು ವರ್ಷದ ಹೆಣ್ಣು ಮಕ್ಕಳಿಬ್ಬರು ಉಸಿರುಗಟ್ಟಿ ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ.
ದಾಮರಗಿಡ್ಡ ಗ್ರಾಮದಲ್ಲಿ ಮಧ್ಯಾಹ್ನ 2 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಇಬ್ಬರು ಸೋದರಸಂಬಂಧಿ ಮಕ್ಕಳು ಆಟವಾಡುತ್ತಿದ್ದಾಗ ಸಂಬಂಧಿಕರ ಮನೆಯ ಬಳಿ ನಿಲ್ಲಿಸಿದ್ದ ಕಾರನ್ನು ಹತ್ತಿ ಸಿಲುಕಿಕೊಂಡಿದ್ದಾರೆ.
ಮಕ್ಕಳು ಕಾರಿನೊಳಗೆ ಸಿಲುಕಿಕೊಂಡಿರುವುದು ಅವರ ಪೋಷಕರಿಗೆ ಅಥವಾ ಅವರ ಇತರ ಕುಟುಂಬ ಸದಸ್ಯರಿಗೆ ತಿಳಿದಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಸುಮಾರು 30-45 ನಿಮಿಷಗಳ ನಂತರ, ಹುಡುಗಿಯರನ್ನು ಕಾರಿನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿರುವುದನ್ನು ಗಮನಿಸಲಾಗಿದ್ದು, ತತ್ ಕ್ಷಣ ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿದ್ದು, ಅಲ್ಲಿ ಮೃತ ಪಟ್ಟಿದ್ದಾರೆ ಎಂದು ಘೋಷಿಸಲಾಯಿತು ಎಂದು ಚೆವೆಲ್ಲಾ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವಿವಾಹ ಸಮಾರಂಭಕ್ಕೆಂದು ಮಕ್ಕಳು ಸಂಬಂಧಿಕರ ಮನೆಗಳಿಗೆ ಬಂದಿದ್ದ ವೇಳೆ ಘಟನೆ ನಡೆದಿದೆ. ಇದುವರೆಗೆ ಪ್ರಕರಣ ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.