ತಾಳ್ಮೆ ತಪ್ಪಿದ ತಾಯಿಂದ ಶಿಶುವಿನ ಹತ್ಯೆ: ಅಹ್ಮದಾಬಾದ್ನಲ್ಲಿ ಮನಕಲುಹುವ ಘಟನೆ

ಅಹ್ಮದಾಬಾದ್: ಪುಟ್ಟ ಮಕ್ಕಳು ಕೆಲವೊಮ್ಮ ನಿರಂತರ ಅಳುತ್ತಿರುತ್ತವೆ. ಮಾತು ಬಾರದ ಮಕ್ಕಳು ಯಾಕಾಗಿ ಅಳುತ್ತಿವೆ ಎಂಬುದನ್ನು ಅರಿತುಕೊಳ್ಳುವುದು ಬಹಳ ಕಷ್ಟದ ಕೆಲಸ ಆದರೂ ಬಹುತೇಕ ತಾಯಂದಿರು ಮಗು ನಿರಂತರ ಅಳುತ್ತಿದ್ದರೆ ಗೊಂದಲಕ್ಕೊಳಗಾಗಿ ವೈದ್ಯರ ಬಳಿ ಓಡಿ ಬರುತ್ತಾರೆ. ಆದರೆ ಇಲ್ಲೊಬ್ಬಳು ತಾಯಿ ಮಗುವನ್ನು ಕೊಂದೇ ಬಿಟ್ಟಿದ್ದಾಳೆ. ಮಗು ನಿರಂತರವಾಗಿ ಅಳುತ್ತಿದೆ ಎಂದು ತಾಳ್ಮೆಗೆಟ್ಟ ಎಳೆ ಪ್ರಾಯದ ತಾಯಿಯೊಬ್ಬಳು ಕೋಪದ ಕೈಗೆ ಬುದ್ಧಿ ಕೊಟ್ಟಿದ್ದು, ಪುಟ್ಟ ಮಗುವನ್ನು ಕೊಂದೇ ಬಿಟ್ಟಿದ್ದಾಳೆ. ಗುಜರಾತ್ನ ಅಹ್ಮದಾಬಾದ್ನ ಅಂಬಿಕಾನಗರದಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ 22 ವರ್ಷದ ತಾಯಿಯನ್ನು ಪೊಲೀಸರು ಬಂಧಿಸಿದ್ದಾರೆ. ಕರೀಷ್ಮಾ ಬಘೇಲ್ ಬಂಧಿತ ಮಹಿಳೆ.ಮಗುವನ್ನು ಅಂಡರ್ಗ್ರೌಂಡ್ನಲ್ಲಿದ್ದ ನೀರಿನ ಟ್ಯಾಂಕಿಗೆ ಎಸೆದು ಕೊಂದ ಈ ತಾಯಿ ಕರೀಷ್ಮಾ ಬಘೇಲ್ ಬಳಿಕ ಕಳೆದ ಶನಿವಾರ ತನ್ನ ಮೂರು ತಿಂಗಳ ಗಂಡು ಮಗು ಖಯಾಲ್ ಎಲ್ಲಿಯೂ ಕಾಣಿಸುತ್ತಿಲ್ಲ ಎಂದು ನಾಟಕವಾಡಿದ್ದಾಳೆ. ಹೀಗಾಗಿ ಮಗುವಿನ ತಂದೆ ದಿಲೀಪ್ ಪೊಲೀಸರಿಗೆ ದೂರು ನೀಡಿದ್ದಾರೆ.
ಇದಾದ ನಂತರ ಪ್ರಕರಣ ದಾಖಲಿಸಿಕೊಂಡು ಹುಡುಕಾಟ ನಡೆಸಿದ ಪೊಲೀಸರು ಏಪ್ರಿಲ್ 7 ರಂದು ಅಂಬಿಕಾನಗರದಲ್ಲಿರುವ ಇವರ ಮನೆಯ ನೀರಿನ ಟ್ಯಾಂಕ್ನಲ್ಲಿ ಮಗುವಿನ ಮೃತದೇಹವನ್ನು ಪತ್ತೆ ಮಾಡಿದ್ದಾರೆ. ಬಳಿಕ ಮಗುವನ್ನು ನೀರಿನ ಟ್ಯಾಂಕ್ಗೆ ಎಸೆದಿದ್ದು ತಾಯಿಯೇ ಎಂಬುದನ್ನು ಖಚಿತಪಡಿಸಿಕೊಂಡ ಪೊಲೀಸರು ಆರೋಪಿ ತಾಯಿ ಕರೀಷ್ಮಾ ಬಘೇಲ್ರನ್ನು ಬಂಧಿಸಿದ್ದಾರೆ. ಗರ್ಭಿಣಿಯಾದಾಗಿನಿಂದಲೂ ಕರೀಷ್ಮಾ ಬಘೇಲ್ ಮಾನಸಿಕವಾಗಿ ಹಾಗೂ ದೈಹಿಕವಾಗಿ ತೊಂದರೆಗೊಳಗಾಗಿದ್ದಳು. ಯಾವಾಗಲೂ ಕೆಲವು ಆರೋಗ್ಯ ಸಮಸ್ಯೆಗಳ ಬಗ್ಗೆ ದೂರು ನೀಡುತ್ತಿದ್ದಳು ಮತ್ತು ತನ್ನ ಮಗು ತುಂಬಾ ಅಳುತ್ತಿರುವುದರಿಂದ ತಾನು ತೊಂದರೆಗೊಳಗಾಗಿದ್ದೇನೆ ಎಂದು ತನ್ನ ಕುಟುಂಬ ಸದಸ್ಯರಿಗೆ ಹೇಳುತ್ತಿದ್ದಳು ಎಂದು ಪೊಲೀಸ್ ಅಧಿಕಾರಿ ಬಸಿಯಾ ಹೇಳಿದರು.
ಪೊಲೀಸರ ವಿಚಾರಣೆ ವೇಳೆ ಆರೋಪಿಯೂ ವಿರುದ್ಧವಾದ ಹೇಳಿಕೆಗಳನ್ನು ನೀಡಿದ್ದರಿಂದ ಪೊಲೀಸರು ಅನುಮಾನಿಸಿ ವಿಚಾರಣೆ ನಡೆಸಿದಾಗ ಆಕೆಯೇ ಮಗುವನ್ನು ಕೊಂದಿರುವುದು ಬೆಳಕಿಗೆ ಬಂದಿದೆ. ಮಗನನ್ನು ಕೋಣೆಯಲ್ಲಿ ಮಲಗಿಸಿ ಸ್ನಾನಗೃಹಕ್ಕೆ ಹೋಗಿದ್ದೆ, ಆದರೆ ಹಿಂತಿರುಗಿ ಬದಾಗ ಅವನು ಕಾಣೆಯಾಗಿದ್ದ ಎಂದು ಆಕೆ ಹೇಳಿಕೊಂಡಿದ್ದಳು. ಆದರೆ ನಂತರ ಅಂಡರ್ಗ್ರೌಂಡ್ನಲ್ಲಿದ್ದ ನೀರಿನ ತೊಟ್ಟಿಯಲ್ಲಿ ಮಗು ಪತ್ತೆಯಾದ ನಂತರ, ಯಾರಾದರೂ ಅದನ್ನು ಒಳಗೆ ಎಸೆದಿದ್ದಾರೆಯೇ ಎಂಬ ಅನುಮಾನದ ಮೇಲೆ ಪೊಲೀಸರು ತನಿಖೆ ಆರಂಭಿಸಿದರು, ಏಕೆಂದರೆ ಟ್ಯಾಂಕ್ನ ರಚನೆಯಿಂದಾಗಿ ಆಕಸ್ಮಿಕವಾಗಿ ಮಗು ಅದಾಗಿಯೇ ಅಲ್ಲಿಗೆ ತಲುಪುವುದು ಅಸಾಧ್ಯವಾಗಿತ್ತು ಎಂದು ಅಧಿಕಾರಿ ಹೇಳಿದರು.