ನರೇಗಾ ಯೋಜನೆಗೆ ಕಳಂಕ: ಸೀರೆ ಉಡಿಸಿ ಪುರುಷರಿಗೆ ಹೆಂಗಸರ ಲೆಕ್ಕದಲ್ಲಿ ಕೂಲಿ

ಯಾದಗಿರಿ : ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ಕೂಲಿ ಹಣ ಪಡೆಯಲು ಗಂಡಸರಿಗೆ ಸೀರೆ ಉಡಿಸಿ, ಮಹಿಳೆಯರ ಲೆಕ್ಕದಲ್ಲಿ ದಾಖಲೆ ಸೃಷ್ಟಿಸಿ, ಹಣ ಲಪಟಾಯಿಸುವ ಸಂಚು ನಡೆದಿದ್ದ ಬಗ್ಗೆ ಬಹಿರಂಗವಾಗಿದೆ. ಮಲ್ದಾರ್ ಗ್ರಾಮದಲ್ಲಿ ಸಣ್ಣಲಿಂಗಪ್ಪ ಹೊಲದಲ್ಲಿ ಮೂರು ಲಕ್ಷ ರುಪಾಯಿಗಳ ನಾಲಾ ಹೂಳೆತ್ತುವ ಕಾಮಗಾರಿ ಸಂದರ್ಭದಲ್ಲಿ ಗಂಡಸರಿಗೆ ಸೀರೆ ಉಡಿಸಿದ್ದಾರೆ, ಹೆಂಗಸರ ಲೆಕ್ಕದಲ್ಲಿ ಹಣ ಲಪಟಾಯಿಸುವ ಸಂಚು ನಡೆದಿರುವ ಬಗ್ಗೆ ಭಾವಚಿತ್ರಗಳು ಸಾಮಾಜಿಕ ಜಾಲತಾಣ-ಮಾಧ್ಯಮಗಳಲ್ಲಿ ಸೋಮವಾರ ಭಾರಿ ಸಂಚಲನ ಮೂಡಿಸಿತ್ತು.
ನಾಲ್ವರು ಪುರುಷರಿಗೆ ಸೀರೆ ಉಡಿಸಿ, ಹೆಂಗಸರಂತೆ ಬಿಂಬಿಸಿ, ಕೂಲಿ ಹಣ ದುರ್ಬಳಕೆ ಬಗ್ಗೆ ಆರೋಪಗಳು ಕೇಳಿ ಬಂದಿದ್ದವು. ಈ ಬಗ್ಗೆ ಸಂಜೆ ವೇಳೆಗೆ ಸ್ಪಷ್ಟನೆ ನೀಡಿದ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾ ಹಕ ಅಧಿಕಾರಿ (ಸಿಇಒ) ಲವೀಶ ಒರಡಿಯಾ ಅವರು ಫೆಬ್ರವರಿಯಲ್ಲಿ ನಡೆದ ಈ ಪ್ರಕರಣದ ಬಗ್ಗೆ ಆಗಲೇ ಬಂದ ದೂರಿನ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ವೀರೇಶ ಎಂಬ ಹೊರಗುತ್ತಿಗೆ ನೌಕರರನ್ನು ಅಮಾನತು ಮಾಡಲಾಗಿದೆ. ನರೇಗಾ ಕಾಮಗಾರಿಗೆ ಸಂಬಂಧಿಸಿದಂತೆ ಯಾವುದೇ ಹಣ ಬಿಡುಗಡೆ ಮಾಡಿಲ್ಲ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಗುಳೆ ತಪ್ಪಿಸಲು ನರೇಗಾ ವರದಾನ: ಕಾರ್ಮಿಕರು ಗುಳೆ ಹೋಗುವುದನ್ನು ತಪ್ಪಿಸಲು ತಾಲೂಕಿನ ಎಲ್ಲ ಗ್ರಾಪಂಗಳಲ್ಲಿ ನರೇಗಾ ಯೋಜನೆಯಡಿ ಕಾಮಗಾರಿ ಪ್ರಾರಂಭಿಸಿದ್ದು, ಜನ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ರಾಮಪ್ಪ ದೊಡ್ಡಮನಿ ಕರೆ ನೀಡಿದರು. ತಾಲೂಕಿನ ಮಜ್ಜೂರ ಗ್ರಾ.ಪಂ. ವ್ಯಾಪ್ತಿಯಲ್ಲಿ ನರೇಗಾ ಕೂಲಿಕಾರರಿಗೆ ಕೆರೆ ಹೂಳೆತ್ತುವ ಕಾಮಗಾರಿ ಪ್ರಗತಿಯಲ್ಲಿದ್ದು, ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಪರಿಶೀಲನೆ ನಡೆಸಿ ಮಾತನಾಡಿದರು. ಬೇಸಿಗೆ ಹಿನ್ನೆಲೆಯಲ್ಲಿ ಕೂಲಿಕಾರರು ಎಲ್ಲೂ ಗುಳೆ ಹೋಗದೇ ಇದ್ದೂರಲ್ಲೇ ನಿರಂತರವಾಗಿ ನರೇಗಾ ಯೋಜನೆಯಡಿ ಕೆಲಸ ಮಾಡಲು ತಿಳಿಸಿದರು. ನರೇಗಾ ಕೂಲಿಯನ್ನು 2025-26ನೇ ಸಾಲಿನ ಆರ್ಥಿಕ ವರ್ಷದಿಂದ ಏರಿಕೆ ಮಾಡಿ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯ ಆದೇಶವನ್ನು ಹೊರಡಿಸಿದೆ. ಆದ್ದರಿಂದ ಏಪ್ರಿಲ್ ೧ರಿಂದ ಜಾರಿಗೆ ಬರುವಂತೆ ನರೇಗಾ ಯೋಜನೆಯಡಿ ಕಾರ್ಮಿಕರು ಪಡೆಯುವ ಕೂಲಿ ರು. ೩೪೯ ರಿಂದ 370ಕ್ಕೆ ಹೆಚ್ಚಿಸಲಾಗಿದೆ. ಗ್ರಾಮೀಣ ಭಾಗದ ಬಡ ಜನರಿಗೆ ನರೇಗಾ ಯೋಜನೆ ಅನುಕೂಲವಾಗಿದೆ ಎಂದರು. ಅಳತೆಗನುಸಾರವಾಗಿ ಕೆಲಸ ನಿರ್ವಹಿಸಿ ಪೂರ್ಣ ಪ್ರಮಾಣದ ಕೂಲಿಯನ್ನು ಪಡೆಯಬೇಕು. ಸ್ಥಳದಲ್ಲಿ ಹಾಜರಿರುವವರಿಗೆ ಮಾತ್ರ ಹಾಜರಿ ಹಾಕಬೇಕು ಎಂದು ಕಟ್ಟು ನಿಟ್ಟಾಗಿ ಸಿಬ್ಬಂದಿಗೆ ಸೂಚಿಸಿದರು.