ಸುಪ್ರೀಂ ಕೋರ್ಟ್ ತೀರ್ಪಿನ ಪರಿಣಾಮ: ಗಂಡ-ಹೆಂಡತಿ ಉದ್ಯೋಗ ನಷ್ಟ, ತಾಯಿ ಹೃದಯಾಘಾತದಿಂದ ನಿಧನ

ಬರ್ದಮಾನ್: ಸುಪ್ರೀಂ ಕೋರ್ಟ್ ತೀರ್ಪಿನಿಂದ ಮಗ ಮತ್ತು ಸೊಸೆ ಒಟ್ಟಿಗೆ ಒಂದೇ ಸಮಯದಲ್ಲಿ ಕೆಲಸ ಕಳೆದುಕೊಂಡಿದ್ದಾರೆ. ಮನೆಯ ಮಗ ಮತ್ತು ಸೊಸೆಯ ಕೆಲಸ ಹೋದ ನೋವನ್ನು ತಡೆಯಲಾರದೆ ತಾಯಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಈ ಘಟನೆ ನಡೆದದ್ದು ಪೂರ್ವ ಬರ್ದಮಾನ್ನ ಸೋನಾಕುರ್ ಗ್ರಾಮದಲ್ಲಿ.
ಒಂದು ಕಡೆ ಕೆಲಸ ಹೋದ ನೋವು, ಇನ್ನೊಂದು ಕಡೆ ತಾಯಿಯ ಅಕಾಲಿಕ ಮರಣದಿಂದ ಕುಟುಂಬದಲ್ಲಿ ದುಃಖದ ಛಾಯೆ ಮೂಡಿದೆ.
ಮೂಲಗಳ ಪ್ರಕಾರ, ಪೂರ್ವ ಬರ್ದಮಾನ್ನ ಸೋನಾಕುರ್ ಗ್ರಾಮದ ನಿವಾಸಿಗಳಾದ ಅರ್ಣವ್ ಯಶ್ ಮತ್ತು ಅವರ ಪತ್ನಿ ಚಂದ್ರಾಣಿ ದತ್ತಾ ಇಬ್ಬರೂ ವೃತ್ತಿಯಲ್ಲಿ ಪ್ರೌಢಶಾಲಾ ಶಿಕ್ಷಕರು. ಅರ್ಣವ್ ಬೀರ್ಭೂಮ್ನ ಚತ್ರಾ ಗಣೇಶ್ಲಾಲ್ ಪ್ರೌಢಶಾಲೆಯ ಏಕೈಕ ಭೂಗೋಳ ಶಿಕ್ಷಕರಾಗಿದ್ದರು. ಮತ್ತು ಅವರ ಪತ್ನಿ ಬೀರ್ಭೂಮ್ನ ನವಾಪರ ಪ್ರೌಢಶಾಲೆಯ ಭೂಗೋಳ ಶಿಕ್ಷಕಿಯಾಗಿದ್ದರು. ಗುರುವಾರ ಸುಪ್ರೀಂ ಕೋರ್ಟ್ ತೀರ್ಪಿನಿಂದ ಗಂಡ-ಹೆಂಡತಿ ಇಬ್ಬರೂ ಒಟ್ಟಿಗೆ ಕೆಲಸ ಕಳೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಇದರಿಂದ ಇಡೀ ಕುಟುಂಬವೇ ಕುಸಿದುಹೋಗಿದೆ.
2016ರಲ್ಲಿ ಎಸ್ಎಸ್ಸಿ ನೇಮಕ 26 ಸಾವಿರಕ್ಕೂ ಅಧಿಕ ಶಿಕ್ಷಕರ ನೇಮಕಾತಿಯನ್ನು ಗುರುವಾರ ಸುಪ್ರೀಂ ಕೋರ್ಟ್ ರದ್ದು ಮಾಡಿತ್ತು. ಸುಪ್ರೀಂ ಕೋರ್ಟ್ ತೀರ್ಪಿನಿಂದ ಅರ್ಣವ್ ಅವರ ತಾಯಿ ಮಂಜುಲಾ ಯಶ್ ಕೂಡ ಕುಸಿದುಹೋದರು. ಘಟನೆ ನಡೆದ 24 ಗಂಟೆಗಳ ಒಳಗೆ ಅವರು ಹೃದಯಾಘಾತಕ್ಕೆ ಒಳಗಾದರು. ಅವರನ್ನು ಆಸ್ಪತ್ರೆಗೆ ಕರೆದೊಯ್ದರೂ ಯಾವುದೇ ಪ್ರಯೋಜನವಾಗಲಿಲ್ಲ. ಮಗ ಮತ್ತು ಸೊಸೆಯ ಕೆಲಸ ಹೋದ ದುಃಖದಲ್ಲಿ ಅವರೂ ಸಾವು ಕಂಡಿದ್ದಾರೆ. ಈ ಘಟನೆಯಿಂದ ಪೂರ್ವ ಬರ್ದಮಾನ್ನ ಸೋನಾಕುರ್ ಗ್ರಾಮದಲ್ಲಿ ದುಃಖದ ಛಾಯೆ ಆವರಿಸಿದೆ.
ಈ ಬಗ್ಗೆ ಚಂದ್ರಾಣಿ ದತ್ತಾ ಅವರ ಸಹೋದರಿ ಮಾತನಾಡಿ, ”ನನ್ನ ತಂಗಿ ಹಗಲು ರಾತ್ರಿ ಕಷ್ಟಪಟ್ಟು ಓದಿ ಕೆಲಸ ಪಡೆದಿದ್ದಳು. ಏಳು ವರ್ಷಗಳ ಕಾಲ ಕೆಲಸ ಮಾಡಿದ ನಂತರ ಇದ್ದಕ್ಕಿದ್ದಂತೆ ಕೆಲಸ ಹೋದರೆ ಅವರ ಗತಿ ಏನು? ಸಂಸಾರ ಹೇಗೆ ಸಾಗಿಸುವುದು?” ಎಂದು ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲದೆ, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಕುಟುಂಬದವರು, ಕೋಲ್ಕತ್ತಾ ಹೈಕೋರ್ಟ್ ತೀರ್ಪು ಪ್ರಕಟಿಸಿದಾಗಿನಿಂದ ಆ ವೃದ್ಧೆ ಮಾನಸಿಕವಾಗಿ ಕುಗ್ಗಿ ಹೋಗಿದ್ದರು ಎಂದು ಹೇಳಿದ್ದಾರೆ. ಸುಪ್ರೀಂ ಕೋರ್ಟ್ ತೀರ್ಪನ್ನು ಸಹಿಸಿಕೊಳ್ಳಲು ಸಾಧ್ಯವಾಗದೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಇದ್ದಕ್ಕಿದ್ದಂತೆ ಕೆಲಸ ಕಳೆದುಕೊಂಡಿದ್ದರಿಂದ ಅರ್ಣವ್ ಮತ್ತು ಚಂದ್ರಾಣಿ ಈಗಾಗಲೇ ಕುಸಿದು ಹೋಗಿದ್ದರು. ಅದರ ಮೇಲೆ ತಾಯಿಯ ಮರಣದಿಂದ ಅವರು ಮತ್ತಷ್ಟು ಕುಗ್ಗಿ ಹೋಗಿದ್ದಾರೆ ಎಂದು ಕುಟುಂಬಸ್ಥರು ಹೇಳಿದ್ದಾರೆ.
ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿಗಳ ಪೀಠವು, ‘ಕೋಲ್ಕತ್ತಾ ಹೈಕೋರ್ಟ್ನ ಆದೇಶದಲ್ಲಿ ಹಸ್ತಕ್ಷೇಪ ಮಾಡುವ ಯಾವುದೇ ಅಗತ್ಯವಿಲ್ಲ ಎಂದು ಭಾವಿಸುತ್ತೇವೆ’ ಎಂದು ಹೇಳಿದೆ. ಅಂದರೆ, 2016 ರ ಎಸ್ಎಸ್ಸಿಯಲ್ಲಿ 26 ಸಾವಿರಕ್ಕೂ ನೇಮಕಾತಿಗಳನ್ನು ರದ್ದುಗೊಳಿಸುವಂತೆ ಕೋಲ್ಕತ್ತಾ ಹೈಕೋರ್ಟ್ನ ನ್ಯಾಯಮೂರ್ತಿ ದೇಬಾಂಶು ಬಸಕ್ ಅವರ ವಿಭಾಗೀಯ ಪೀಠ ನೀಡಿದ್ದ ಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ. ಅಂದರೆ, ಸುಪ್ರೀಂ ಕೋರ್ಟ್ 25,753 ಜನರ ಉದ್ಯೋಗವನ್ನು ರದ್ದುಗೊಳಿಸಿದೆ. ಗುರುವಾರ ಈ ತೀರ್ಪು ಪ್ರಕಟವಾದ ನಂತರ, ಇತ್ತೀಚೆಗೆ ಕೆಲಸ ಕಳೆದುಕೊಂಡ ಬಂಗಾಳದ ಅನೇಕ ಶಿಕ್ಷಕರು ಆಘಾತ ವ್ಯಕ್ತಪಡಿಸಿದ್ದಾರೆ.