ಬಸ್ನಲ್ಲಿ ಮಹಿಳೆ ಮೇಲೆ ಅತ್ಯಾಚಾರ ಯತ್ನ: ಮೂವರು ಬಂಧಿತ

ಹರಪನಹಳ್ಳಿ: ತಾಲ್ಲೂಕಿನ ಉಚ್ಚಂಗಿದುರ್ಗ ಜಾತ್ರೆಗೆ ಬಂದಿದ್ದ ಮಹಿಳೆ ತನ್ನ ಇಬ್ಬರು ಮಕ್ಕಳ ಜೊತೆಗೆ ಮಂಗಳವಾರ ರಾತ್ರಿ ಮನೆಗೆ ಖಾಸಗಿ ಬಸ್ನಲ್ಲಿ ಮರಳುತ್ತಿದ್ದ ವೇಳೆ ಅತ್ಯಾಚಾರಕ್ಕೆ ಯತ್ನ ನಡೆದಿದೆ. ಈ ಸಂಬಂಧ ಮೂವರು ಆರೋಪಿಗಳನ್ನು ಅರಸೀಕೆರೆ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಕೊಟ್ಟೂರು ತಾಲ್ಲೂಕು ಅಲಬೂರಿನ ಚಾಲಕ ಪ್ರಕಾಶ ಮಡಿವಾಳ, ಡಗ್ಗಿ ಬಸಾಪುರ ಗ್ರಾಮದ ರಾಜಶೇಖರ ಮತ್ತು ಅರಸೀಕೆರೆಯ ಬಾರಿಕರ ಸುರೇಶ್ ಬಂಧಿತ ಆರೋಪಿಗಳು.
‘ದಾವಣಗೆರೆ ಜಿಲ್ಲೆಯ ಸಂತ್ರಸ್ತ ಮಹಿಳೆ ‘ಮಂಜುನಾಥ’ ಹೆಸರಿನ ಖಾಸಗಿ ಬಸ್ನಲ್ಲಿ ತೆರಳುತ್ತಿದ್ದರು. ಆರೋಪಿ ಚಾಲಕ ಚೆನ್ನಾಪುರ ಗ್ರಾಮದ ರಸ್ತೆಯಲ್ಲಿ ಬಸ್ ನಿಲ್ಲಿಸಿ ಆಕೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ. ರಾಜಶೇಖರ ಮತ್ತು ಸುರೇಶ ಸಹಕರಿಸಿದರು. ಮಹಿಳೆ ಹಾಗೂ ಮಕ್ಕಳು ಚೀರಾಡುವುದನ್ನು ಕೇಳಿಸಿಕೊಂಡ ಬೈಕ್ ಸವಾರರು ಬಸ್ ಒಳಗೆ ಪ್ರವೇಶಿಸಿದಾಗ, ಮಹಿಳೆ ಸ್ಥಿತಿ ಕಂಡು ಮಾಹಿತಿ ನೀಡಿದರು. ಅದರಂತೆ ಬಸ್ ಜಪ್ತಿ ಮಾಡಿ, ಆರೋಪಿಗಳನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.