ಪೊಲೀಸರ ಥಳಿತದಿಂದ ವ್ಯಕ್ತಿ ಸಾವು: CPI, PSI ಅಮಾನತು

ರಾಯಚೂರು : ಪೊಲೀಸರ ಥಳಿತದಿಂದ ವ್ಯಕ್ತಿ ಮೃತಪಟ್ಟ ಕೇಸ್ ಗೆ ಸಂಬಂಧಪಟ್ಟಂತೆ ರಾಯಚೂರಿನ ಎಸ್ಪಿ ಕಚೇರಿ ಮುಂದೆ ಶಾಸಕ ಶಿವರಾಜ್ ಪಾಟೀಲ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಪಶ್ಚಿಮ ಠಾಣೆ ಪೊಲೀಸರ ವಿರುದ್ಧ ಪ್ರಕರಣ ದಾಖಲಿಸಲು ಒತ್ತಾಯಿಸಿದರು. ಅಲ್ಲದೇ ಕೂಡಲೇ CPI ಹಾಗೂ PSI ಅಮಾನತು ಮಾಡಬೇಕು ಎಂದು ಪಟ್ಟು ಹಿಡಿದಿದ್ದರು.
ಶಾಸಕ ಶಿವರಾಜ್ ಪಾಟೀಲ್ ಧರಣಿ ನಡೆಸಿದ ಬೆನ್ನಲ್ಲೆ ಪಶ್ಚಿಮ ಠಾಣೆ CPI ನಾಗರಾಜ ಮೇಕಾ, PSI ಮಂಜುನಾಥರನ್ನು ಅಮಾನತುಗೊಳಿಸಿ ಎಸ್ಪಿ ಆದೇಶ ಹೊರಡಿಸಿದ್ದಾರೆ. ಇದರಿಂದ ರಾಜ್ಯ ಪೊಲೀಸ್ ನಿಯಮಾವಳಿಗಳ ಶಿಸ್ತು ನಡಾವಳಿ ಉಲ್ಲಂಘನೆಯಡಿ ಇಲಾಖೆ ವಿಚಾರಣೆ ಕಾಯ್ದಿರಿಸಿ ತತ್ ಕ್ಷಣಕ್ಕೆ ಜಾರಿಗೆ ಬರುವಂತೆ ಅಮಾನತು ಆದೇಶ ಹೊರಡಿಸಲಾಗಿದೆ ಎಂದು ಎಸ್ಪಿ ಮಾಹಿತಿ ನೀಡಿದ್ದಾರೆ.
ಕೌಟುಂಬಿಕ ಕಲಹದ ಹಿನ್ನೆಲೆ ಪತ್ನಿ ಮತ್ತು ಪತ್ನಿ ಮನೆಯವರು ವೀರೇಶ್ ಎಂಬುವವರ ವಿರುದ್ಧ ದೂರು ನೀಡಿದ್ದರು. ದೂರಿನ ಮೇರೆಗೆ ಆತನನ್ನು ವಿಚಾರಣೆಗೆ ಪೊಲೀಸರು ಕರೆದೊಯ್ದಿದ್ದರು. ಈ ವೇಳೆ ಆತನನ್ನು ಹಿಗ್ಗಾಮುಗ್ಗಾ ಥಳಿಸಿದ್ದು, ಪೊಲೀಸರ ಥಳಿತದಿಂದಲೇ ವೀರೇಶ್ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಲಾಗಿದೆ.