ಲೋಕಾಯುಕ್ತ ದಾಳಿ ಮಾಹಿತಿ ತಿಳಿಯುತ್ತಿದ್ದಂತೆ ಎಸ್ಕೇಪ್ ಆದ ಚಿನ್ನದ ಪದಕ ವಿಜೇತ PI

ಬೆಂಗಳೂರು : ಮುಖ್ಯಮಂತ್ರಿ (CM) ಗಳ ಚಿನ್ನದ ಪದಕಕ್ಕೆ ಆಯ್ಕೆಯಾದ ಪೊಲೀಸ್ ಇನ್ಸ್ಪೆಕ್ಟರ್ (PI) ಓರ್ವರು ಲೋಕಾಯುಕ್ತ ಅಧಿಕಾರಿಗಳ ದಾಳಿ ವಿಚಾರ ತಿಳಿಯುತ್ತಿದ್ದಂತೆ ಎಸ್ಕೇಪ್ ಆಗಿರುವ ಘಟನೆ ಬೆಂಗಳೂರಿನಲ್ಲಿ ಜರುಗಿದೆ. ಅನ್ನಪೂರ್ಣೇಶ್ವರಿ ನಗರ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಕುಮಾರ್ ಅವರೆ ಲೋಕಾಯುಕ್ತ ಅಧಿಕಾರಿಗಳ ದಾಳಿ ವಿಚಾರ ತಿಳಿಯುತ್ತಿದ್ದಂತೆ ಎಸ್ಕೇಪ್ ಆದ ಅಧಿಕಾರಿ. ಪೊಲೀಸ್ ಇನ್ಸ್ಪೆಕ್ಟರ್ ಕುಮಾರ್ ಮನೆ ಮೇಲೆ ಲೋಕಾಯುಕ್ತ ದಾಳಿ ಆಗುವ ವಿಚಾರ ತಿಳಿಯುತ್ತಿದಂತೆಯೇ ಮನೆಯಲ್ಲೇ ಇಲಾಖೆಯ ಜೀಪ್ ಬಿಟ್ಟು ಎಸ್ಕೇಪ್ ಆಗಿದ್ದಾರೆ. ಪೊಲೀಸ್ ಇನ್ಸ್ಪೆಕ್ಟರ್ ಕುಮಾರ್ ಅವರಿಗೆ ಕಳೆದ ಸಾಲಿನ ಮುಖ್ಯಮಂತ್ರಿಗಳ ಚಿನ್ನದ ಪದಕಕ್ಕೆ ಆಯ್ಕೆಯಾಗಿದ್ದರು. ಇವರು ಸಿವಿಲ್ ಕಂಟ್ರ್ಯಾಕ್ಟರ್ರೊಬ್ಬರಿಗೆ ಕಿರುಕುಳ ನೀಡಿ ಹಣಕ್ಕಾಗಿ ಪೀಡಿಸುತ್ತಿದ್ದ ಆರೋಪದ ಮೇಲೆ ಲೋಕಾಯುಕ್ತ ದಾಳಿ ನಡೆಸಲಾಗಿದೆ. ಸುಳ್ಳು ಕೇಸ್ ದಾಖಲಿಸಿ ಸಿವಿಲ್ ಕಂಟ್ರ್ಯಾಕ್ಟರ್ ಚನ್ನೇಗೌಡಗೆ ಸೇರಿದ 4 ಕೋಟಿ ರೂ ಮೌಲ್ಯದ ಮನೆ ಮಾರಾಟಕ್ಕೆ ಒತ್ತಡ ಹಾಕಿದ್ದು, ಕಡಿಮೆ ಮೊತ್ತಕ್ಕೆ ನೋಂದಣಿ ಮಾಡಿಕೊಡುವಂತೆ PI ಕಿರುಕುಳ ನೀಡಿದ್ದರು ಎಂದು ಆರೋಪ ಮಾಡಲಾಗಿದೆ. ಈ ಹಿಂದೆ ದಾಖಲಾಗಿದ್ದ ಪ್ರಕರಣಕ್ಕೆ ಬಿ ರಿಪೋರ್ಟ್ ಹಾಕುತ್ತೇನೆ. ಮನೆ ಬರೆದುಕೊಡಿ ಎಂದು ಇನ್ಸ್ಪೆಕ್ಟರ್ ಕುಮಾರ್ ಕಿರುಕುಳ ನೀಡಿದ್ದು, ಈ ಹಿಂದೆ ಚನ್ನೇಗೌಡ ಮನೆಗೆ ಕೆಲ ಪುಂಡರನ್ನು ನುಗ್ಗಿಸಿ ದಾಂದಲೆ ಮಾಡಿದ್ದಾರೆ. ಈ ವೇಳೆ ಸಿವಿಲ್ ಕಂಟ್ರ್ಯಾಕ್ಟರ್ ಚನ್ನೇಗೌಡ ವಿಡಿಯೋ ಮಾಡಿಕೊಂಡಿದ್ದರು. ಚನ್ನೇಗೌಡನನ್ನು ಠಾಣೆಗೆ ಕರೆಸಿ ಒತ್ತಾಯಪೂರ್ವಕವಾಗಿ ಅಗ್ರಿಮೆಂಟ್ಗೆ ಸಹಿ ಮಾಡಿಸಿ, ಆನ್ಲೈನ್ ಮೂಲಕ 4 ಲಕ್ಷ ರೂಪಾಯಿ ವರ್ಗಾವಣೆ ಮಾಡಿಸಿಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಹಣಕ್ಕಾಗಿ ಪೀಡಿಸುತ್ತಿದ್ದ ಆರೋಪದ ಮೇಲೆ ಲೋಕಾಯುಕ್ತ ದಾಳಿ ನಡೆಸಿ ಇಬ್ಬರು ಪೊಲೀಸ್ (PC) ಸೇರಿದಂತೆ ಐವರನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.