ಸಮಾಜಮುಖಿ ಶಿಕ್ಷಕಿಯರು: ಶಾಲಾ ಮಕ್ಕಳ ಹಿತಕ್ಕಾಗಿ ನೀರಿನ ವ್ಯವಸ್ಥೆ ಮಾಡಿದ ಸಾರ್ಥಕ ಸೇವೆ

ಆಲ್ದೂರು (ಚಿಕ್ಕಮಗಳೂರು) : ಸಮೀಪದ ಮಾಚಗೊಂಡನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿಯರಾದ ಹೀನಾ ತಬಸುಮ್ ಮತ್ತು ರಜಿಯಾ ಸುಲ್ತಾನ ಅವರು ತಮ್ಮ ಸ್ವಂತ ಹಣ ₹2.50 ಲಕ್ಷ ಖರ್ಚು ಮಾಡಿ, ಕೊಳವೆಬಾವಿ ಕೊರೆಯಿಸುವ ಮೂಲಕ ಶಾಲೆಯ ವಿದ್ಯಾರ್ಥಿಗಳು ಎದುರಿಸುತ್ತಿದ್ದ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಂಡಿದ್ದಾರೆ.
ಈ ಶಾಲೆಯಲ್ಲಿ ಎಲ್ಕೆಜಿಯಿಂದ 7ನೇ ತರಗತಿಯವರೆಗೆ ಒಟ್ಟು 250 ವಿದ್ಯಾರ್ಥಿಗಳಿದ್ದಾರೆ. ಗ್ರಾಮ ಪಂಚಾಯಿತಿಯಿಂದ ಮೂರು ದಿನಗಳಿಗೊಮ್ಮೆ ಶಾಲೆಗೆ ಕುಡಿಯುವ ನೀರು ಪೂರೈಕೆ ಆಗುತ್ತಿದೆ. ಬೇಸಿಗೆಯಲ್ಲಿ ನೀರಿನ ಕೊರತೆಯಿಂದ ವಿದ್ಯಾರ್ಥಿಗಳು, ಅಡುಗೆ ಸಿಬ್ಬಂದಿ, ಶಿಕ್ಷಕರು ತೊಂದರೆ ಅನುಭವಿಸುತ್ತಿದ್ದರು. ಶಾಲೆಯ ಬಿಸಿಯೂಟ, ಶೌಚಾಲಯ ಬಳಕೆಗೂ ನೀರಿಲ್ಲದೆ ತೊಂದರೆ ಆಗಿತ್ತು.
ಇದನ್ನು ಮನಗಂಡ ಶಿಕ್ಷಕಿಯರು ಕೊಳವೆಬಾವಿ ಕೊರೆಯಿಸಲು ಮುಂದೆ ಬಂದರು.
‘ರಂಜಾನ್ ಮಾಸದಲ್ಲಿ ಸಮಾಜಮುಖಿ ಕಾರ್ಯಗಳನ್ನು ಮಾಡುವುದು ವಾಡಿಕೆ. ಈ ಶಾಲೆಯಲ್ಲಿ ಕಾರ್ಯನಿರ್ವಹಿಸಲು ತೊಡಗಿ 25 ವರ್ಷಗಳು ಕಳೆದಿವೆ. ಇಲ್ಲಿಂದ ವರ್ಗಾವಣೆಯಾಗುವ ಮುನ್ನ ಮಕ್ಕಳಿಗಾಗಿ ಕೊಡುಗೆ ನೀಡೋಣ ಎಂದು ಚಿಂತಿಸಿದೆ. ಕಳೆದ ವರ್ಷ ಈ ಶಾಲೆಗೆ ಶಿಕ್ಷಕಿಯಾಗಿ ಕರ್ತವ್ಯಕ್ಕೆ ಸೇರಿಕೊಂಡ ನನ್ನ ಸಹೋದ್ಯೋಗಿ ರಜಿಯಾ ಸುಲ್ತಾನ ಅವರೊಂದಿಗೆ ಚರ್ಚಿಸಿದೆ. ಎರಡೂ ಕುಟುಂಬಗಳ ಸದಸ್ಯರ ಒಪ್ಪಿಗೆ ಪಡೆದು ಕೊಳವೆಬಾವಿ ಕೊರೆಯಿಸಿದೆವು’ ಎಂದು ಶಿಕ್ಷಕಿ ಹೀನಾ ತಬಸುಮ್ ಹೇಳಿದರು.
‘ಕೊಳವೆಬಾವಿ ಕೊರೆಯಿಸಲು ಗುರುತಿಸಿದ ಎರಡು ಪಾಯಿಂಟ್ಗಳು ವಿಫಲವಾದವು. ಮೂರನೆಯ ಪಾಯಿಂಟ್ನಲ್ಲಿ ಒಂದು ಇಂಚು ನೀರು ಲಭಿಸಿದೆ. ಸುಮಾರು ₹2 ಲಕ್ಷ ಖರ್ಚಾಗಿದೆ. ಮೋಟರ್ ಅಳವಡಿಕೆಗೆ ₹50 ಸಾವಿರ ವ್ಯಯವಾಗಿದೆ. ಶಾಲೆಯ ಅಭಿವೃದ್ಧಿ, ಮಕ್ಕಳ ಭವಿಷ್ಯಕ್ಕಾಗಿ ಚಿಂತಿಸುವ ಇಂತಹ ಶಿಕ್ಷಕರು ಸಿಗುವುದು ಅಪರೂಪ’ ಎಂದು ಶಾಲೆಯ ಹಳೆಯ ವಿದ್ಯಾರ್ಥಿ ಹಾಗೂ ಎಸ್ಡಿಎಂಸಿ ಸದಸ್ಯ ಅಣ್ಣಪ್ಪ ಸಂತಸ ವ್ಯಕ್ತಪಡಿಸಿದರು.
‘ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಹಲವು ಬಾರಿ ಸತ್ತಿಹಳ್ಳಿ ಗ್ರಾಮ ಪಂಚಾಯಿತಿಗೆ ಮನವಿ ಮಾಡಿದರೂ ಯಾವುದೇ ಸ್ಪಂದನೆ ಲಭಿಸಿಲ್ಲ. ಶಿಕ್ಷಕಿಯರು ಮಕ್ಕಳ ಸಂಕಷ್ಟವನ್ನು ಅರಿತು ಕೊಳವೆಬಾವಿ ಕೊರೆಯಿಸಿರುವುದು ಬಹುದೊಡ್ಡ ಕಾರ್ಯ’ ಎಂದು ಎಸ್ಡಿಎಂಸಿ ಅಧ್ಯಕ್ಷ ಲೋಕೇಶ್ ಎಸ್. ಹೇಳಿದರು.