ಹನಿಟ್ರ್ಯಾಪ್ ವಿವಾದ: “ಇಬ್ಬರೂ ತಪ್ಪಿತಸ್ಥರು” ಎಂದು ಸಭಾಪತಿ ಹೊರಟ್ಟಿ

ಹಾಸನ: ರಾಜ್ಯದಲ್ಲಿ ಸಚಿವ ಕೆ.ಎನ್. ರಾಜಣ್ಣಗೆ ಸಂಬಂಧಿಸಿದ ಹನಿಟ್ರ್ಯಾಪ್ ಯತ್ನ ಪ್ರಕರಣ ಮತ್ತೊಮ್ಮೆ ಭಾರೀ ಚರ್ಚೆಗೆ ಕಾರಣವಾಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ, “ಹನಿಟ್ರ್ಯಾಪ್ ಸರಿಯಲ್ಲ. ಈ ಪ್ರಕರಣದಲ್ಲಿ ತಪ್ಪಿತಸ್ಥರು ಇಬ್ಬರೂ ಒಳ್ಳೆಯವರಲ್ಲ” ಎಂದಿದ್ದಾರೆ.
ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಹನಿಟ್ರ್ಯಾಪ್ ಮಾಡುವವರೂ ತಪ್ಪಿತಸ್ಥರು, ಅದಕ್ಕೆ ಒಳಗಾದವರೂ ತಪ್ಪಿತಸ್ಥರು. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಎಲ್ಲರೂ ಅರಿಯಬೇಕು. ಜನಪ್ರತಿನಿಧಿಗಳು ಜವಾಬ್ದಾರಿಯಿಂದ ನಡೆದುಕೊಳ್ಳಬೇಕು” ಎಂದು ಹೇಳಿದರು.
“ವಿಧಾನಸೌಧ ನಾಡಿನ ಶಕ್ತಿ ಕೇಂದ್ರ, ಇದು ದೇವಾಲಯದಂತೆ ಗೌರವಿಸಬೇಕಾದ ಸ್ಥಳ. ರಾಜಕೀಯ ನಾಯಕರನ್ನು ಜನರು ಆಯ್ಕೆ ಮಾಡುವುದು ಸಂಸದೀಯ ವ್ಯವಸ್ಥೆಯ ಭರವಸೆ. ಆದ್ದರಿಂದ, ಇಂತಹ ಪ್ರಕರಣಗಳು ನಮ್ಮ ವ್ಯವಸ್ಥೆಗೆ ಹಾನಿ ಮಾಡಬಾರದು” ಎಂದು ಹೊರಟ್ಟಿ ಅಭಿಪ್ರಾಯಪಟ್ಟರು.