ಯುಗಾದಿ, ರಮ್ಜಾನ್ ಹಬ್ಬಕ್ಕೆ ಗಗನಕ್ಕೇರಿತು ಖಾಸಗಿ ಬಸ್ ದರ

ಬೆಂಗಳೂರು: ಪ್ರತೀ ವರ್ಷದಂತೆ ಈ ವರ್ಷವೂ ಯುಗಾದಿ ಹಬ್ಬದಂದು ಖಾಸಗಿ ಬಸ್ಗಳ ಪ್ರಯಾಣ ದರ ಏರಿಕೆಯಾಗಿದ್ದು, ಇದರ ನಡುವೆ ಸೋಮವಾರ ರಮ್ಜಾನ್ ಹಬ್ಬ ಸಹ ಇರುವುದರಿಂದ ಹಬ್ಬಕ್ಕೆ ದೂರದೂರಿಗೆ ತೆರಳುವ ಪ್ರಯಾಣಿಕರು ಹೆಚ್ಚಿನ ಹಣ ತೆತ್ತು ತೆರಳುವಂತಾಗಿದೆ
ಪ್ರತೀ ಬಾರಿ ಹಬ್ಬದ ಸಮಯದಲ್ಲಿ ಟಿಕೆಟ್ ದರ ಏರಿಕೆ ಸಾಮಾನ್ಯ.ಈ ಬಾರಿ ಯುಗಾದಿ ಹಬ್ಬ ವಾರಾಂತ್ಯ ಬಂದಿರುವುದರಿಂದ ಬೆಂಗಳೂರಿನಿಂದ ವಿವಿಧೆಡೆಗೆ ಪ್ರಯಾಣ ಬೆಳೆಸುವವರ ಸಂಖ್ಯೆಯೂ ಅಧಿಕವಾಗಿದೆ. ಇದು ಕೂಡ ಟಿಕೆಟ್ ದರ ಹೆಚ್ಚಳಕ್ಕೆ ಕಾರಣ. ಮಾರ್ಚ್ 28ರಿಂದಲೇ ಕೆಲ ಖಾಸಗಿ ಬಸ್ಗಳ ಟಿಕೆಟ್ ದರ ಏರಿಕೆಯಾಗಿದ್ದು ಹಬ್ಬ ಮುಗಿದು ವಾಪಸ್ ಬರುವವರೆಗೂ ದರ ಏರಿಕೆ ಬಿಸಿ ಮುಟ್ಟಲಿದೆ.

ಎಲ್ಲೆಲ್ಲಿ ಎಷ್ಟೆಷ್ಟು ದರ ?
ಬೆಂಗಳೂರಿನಿಂದ ಕರ್ನಾಟಕದ ವಿವಿಧ ಜಿಲ್ಲೆಗಳಿಗೆ ಸಂಚರಿಸುವ ಖಾಸಗಿ ಸ್ಲೀಪರ್ ಬಸ್ಗಳ ದರವು ಸಾಮಾನ್ಯ ದಿನಗಳಿಗಿಂತ ಹೆಚ್ಚಾಗಿದೆ. ಇವುಗಳ ಪೈಕಿ ಕೆಲವು ಜಿಲ್ಲೆಗಳಿಗೆ ತೆರಳುವ ಬಸ್ ದರ ಕೇಳಿ ಪ್ರಯಾಣಿಕರು ಹುಬ್ಬೇರಿಸುತ್ತಿದ್ದಾರೆ. ಬೆಂಗಳೂರು-ಉಡುಪಿ ಮಾರ್ಗವಾಗಿ ಸಂಚರಿಸುವ ಖಾಸಗಿ ಬಸ್ ದರ 1,800 ರೂ.ವರೆಗೂ ಏರಿಕೆಯಾದರೆ, ಬೆಂಗಳೂರು -ಬಳ್ಳಾರಿ ಮಾರ್ಗದ ದರ 1,400 ರೂ., ಬೆಂಗಳೂರು -ಶಿರಸಿ ಮಾರ್ಗದ ದರ 1,500 ರೂ. ಇದೆ. ಇನ್ನು ಬೆಂಗಳೂರಿನಿಂದ ಹುಬ್ಬಳ್ಳಿಗೆ 1,200 ರೂ.ನಿಂದ 1,500 ರೂ.ವರೆಗೂ ಇದೆ. ಬೆಂಗಳೂರಿನಿಂದ ಮಂಗಳೂರಿಗೆ 1,400 ರೂ., ಬೆಂಗಳೂರಿನಿಂದ ಕಲಬುರಗಿಗೆ 1,500 ರೂ. ನಿಂದ 2 ಸಾವಿರ ರೂ.ವರೆಗೂ ಇದೆ. ಬೆಂಗಳೂರು-ವಿಜಯಪುರದ ನಡುವೆ 900 ರೂ. ನಿಂದ 1,900 ರೂ.ಗೆ ಏರಿಕೆಯಾಗಿದೆ. ಇದಲ್ಲದೇ, ಬೆಂಗಳೂರಿನಿಂದ ಹೊರ ರಾಜ್ಯಗಳಿಗೆ ತೆರಳುವ ಖಾಸಗಿ ಬಸ್ಗಳ ದರ ದುಪ್ಪಟ್ಟಾಗಿದೆ. ಬೆಂಗಳೂರು-ಮದುರೈ, ಚೆನ್ನೈ, ಹೈದರಾಬಾದ್, ಕೇರಳದ ವಿವಿಧ ಭಾಗಗಳಿಗೆ 2 ಸಾವಿರ ರೂ.ವರೆಗೂ ಏರಿಕೆಯಾಗಿದೆ.
ದುಪ್ಪಟ್ಟು ದರವಾದರೂ ಸೀಟು ಭರ್ತಿ
ಯುಗಾದಿ ಹಬ್ಬದಂದು ಕೆಲವು ಖಾಸಗಿ ಬಸ್ಗಳು ದುಪ್ಪಟ್ಟು ದರ ಏರಿಸಿದರೂ ಪ್ರಯಾಣಿಕರು ಇದಕ್ಕೆ ತಲೆಕೆಡಿಸಿಕೊಂಡಂತಿಲ್ಲ. ಯುಗಾದಿ ಹಬ್ಬವನ್ನು ಕುಟುಂಬಸ್ಥರ ಜೊತೆಗೆ ಸಂಭ್ರ ಮಿಸಲು ಖಾಸಗಿ ಬಸ್ನಲ್ಲಿ ಊರಿನತ್ತ ಸಾಗುತ್ತಿದ್ದಾರೆ. ದುಪ್ಪಟ್ಟು ಟಿಕೆಟ್ ಕೊಡಲು ಸಿದ್ದ ವಿದ್ದರೂ ಬಹುತೇಕ ಎಲ್ಲ ಖಾಸಗಿ ಬಸ್ಗಳ ಸೀಟು ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಸೀಟು ಸಿಗುತ್ತಿಲ್ಲ. ಮಾರ್ಚ್ 28 ರಿಂದ ಎ. 1ರ ವರೆಗೂ ಬಹುತೇಕ ಎಲ್ಲ ಬಸ್ಗಳಲ್ಲಿ ಸೀಟು ಭರ್ತಿಯಾಗಿದೆ.