ಯತ್ನಾಳ್ ಉಚ್ಛಾಟನೆ ರದ್ದು ಮಾಡಿಸುತ್ತೇವೆ”- ಜಾರಕಿಹೊಳಿ ವಿಶ್ವಾಸ

ಮಾಜಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಿದ ಬಳಿಕ, ರಾಜ್ಯ ರಾಜಕೀಯದಲ್ಲಿ ದೊಡ್ಡ ಸಂಚಲನ ಸೃಷ್ಟಿಯಾಗಿದೆ. ಈ ನಿರ್ಧಾರದ ವಿರುದ್ಧ ಬಿಜೆಪಿ ಕಾರ್ಯಕರ್ತರು, ಯತ್ನಾಳ್ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದು, ಹಿಂದೂ ಪರ ಹೋರಾಟಗಾರನ ವಿರುದ್ಧ ಷಡ್ಯಂತ್ರ ನಡೆದಿದೆಯೆಂಬ ಅನುಮಾನ ವ್ಯಕ್ತವಾಗಿದೆ.
ಈ ನಡುವೆಯೇ, ಮಾಜಿ ಸಚಿವ ರಮೇಶ ಜಾರಕಿಹೊಳಿಯವರು ಯತ್ನಾಳ್ ಉಚ್ಛಾಟನೆ ಕುರಿತಂತೆ ಮಹತ್ವದ ಪ್ರತಿಕ್ರಿಯೆ ನೀಡಿದ್ದು, “ಕೆಟ್ಟ ಘಳಿಗೆ, ಏನೋ ಆಗಿದೆ. ಆದರೆ ನಾವು ಈ ನಿರ್ಧಾರವನ್ನು ರದ್ದು ಮಾಡಿಸುತ್ತೇವೆ. ಎಲ್ಲವನ್ನೂ ಸರಿಪಡಿಸಿಕೊಂಡು ಹೋಗುತ್ತೇವೆ. ದಯವಿಟ್ಟು ವಿವಾದ ಮಾಡಬೇಡಿ” ಎಂದಿದ್ದಾರೆ.
ಯತ್ನಾಳ್ ಹೋರಾಟ ಮುಂದುವರಿಯುತ್ತಾ?
ಬೆಳಗಾವಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಜಾರಕಿಹೊಳಿ, “ಈ ಉಚ್ಛಾಟನೆ ನಮಗೆ ಮೊದಲೇ ಗೊತ್ತಿತ್ತು. ನೋಟೀಸ್ ಕೊಟ್ಟಾಗಲೇ ವಾಸನೆ ಬಡಿದಿತ್ತು” ಎಂದು ಬಹಿರಂಗವಾಗಿ ಹೇಳಿದ್ದು, ಈ ನಿರ್ಧಾರ ಹಿಂದೆ ನಡೆಯುತ್ತಿರುವ ಅಂತರಕಥೆ ಕುರಿತು ಕುತೂಹಲ ಮೂಡಿಸಿದೆ. ಬಿಜೆಪಿ ಹೈಕಮಾಂಡ್ಗೆ ಈ ಬಗ್ಗೆ ದೂರು ನೀಡುವ ಯತ್ನಾಳ್ ಬೆಂಬಲಿಗರು, ಮುಂದಿನ ಹಂತದಲ್ಲಿ ಹೋರಾಟ ತೀವ್ರಗೊಳಿಸುವ ಸಾಧ್ಯತೆ ಇದೆ.
ಬಿಜೆಪಿಯ ಅಂತರಕಥೆ ಏನು?
ಯತ್ನಾಳ್ ಅವರ ಉಚ್ಛಾಟನೆಗೂ ಮುನ್ನವೇ ಪಕ್ಷದಲ್ಲಿ ಅಸಂತೋಷದ ನಸುನೆರಳು ಗೋಚರಿಸುತ್ತಿದ್ದವು. ಇದೀಗ ಹಿರಿಯ ನಾಯಕರು ಈ ನಿರ್ಧಾರದ ವಿರುದ್ಧ ಮಾತನಾಡುತ್ತಿದ್ದು, ಹಿಂದಿನ ಕುತಂತ್ರಗಳ ಅನುಮಾನ ಬಲಪಡಿಸುತ್ತಿದೆ. ಜಾರಕಿಹೊಳಿ ಅವರ ಈ ಹೇಳಿಕೆಯಿಂದ ಯತ್ನಾಳ್ ವಾಪಸಾಗಲು ಅವಕಾಶ ಇದೆಯೇ ಎಂಬ ಪ್ರಶ್ನೆ ಎದುರಾಗಿದೆ.