ಅಂಕಿತಾ ಭಂಡಾರಿ ಕೊಲೆಯ ‘ವಿಐಪಿ’ ಹೆಸರಿಸಿದ್ದ ಮಾಜಿ ಬಿಜೆಪಿ ಶಾಸಕ ಸುರೇಶ್ ರಾಥೋಡ್ ದಿಢೀರ್ ಬಂಧನ!

2022 ರ ಅಂಕಿತಾ ಭಂಡಾರಿ ಕೊಲೆ ಪ್ರಕರಣಕ್ಕೆ ಪಕ್ಷದ ನಾಯಕರೊಬ್ಬರನ್ನು ಲಿಂಕ್ ಮಾಡಿ ಹೇಳಿಕೆ ನೀಡಿದ ಆರೋಪದ ಮೇಲೆ ಉತ್ತರಾಖಂಡದ ಮಾಜಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ಶಾಸಕ ಸುರೇಶ್ ರಾಥೋಡ್ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರನ್ನು ಉಲ್ಲೇಖಿಸಿ ಸೋಮವಾರ ಪಿಟಿಐ ವರದಿ ಮಾಡಿದೆ.

ಹರಿದ್ವಾರದ ಬುಗ್ಗಾವಾಲಾದಲ್ಲಿರುವ ರಾಥೋಡ್ ಅವರ ಕಚೇರಿಯಿಂದ ಅವರನ್ನು ವಶಕ್ಕೆ ಪಡೆಯಲಾಗಿದ್ದು, ನಂತರ ಡೆಹ್ರಾಡೂನ್ನ ದಲನ್ವಾಲಾ ಪೊಲೀಸ್ ಠಾಣೆಗೆ ಕರೆದೊಯ್ದು ಅಲ್ಲಿ ಔಪಚಾರಿಕವಾಗಿ ಬಂಧಿಸಲಾಯಿತು ಎಂದು ಪೊಲೀಸ್ ವರಿಷ್ಠಾಧಿಕಾರಿ ಪ್ರಮೋದ್ ಕುಮಾರ್ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಮಾಜಿ ಬಿಜೆಪಿ ನಾಯಕ ವಿನೋದ್ ಆರ್ಯ ಅವರ ಪುತ್ರ ಪುಲ್ಕಿತ್ ಆರ್ಯ ಮಾಲೀಕತ್ವದ ರಿಷಿಕೇಶದ ರೆಸಾರ್ಟ್ನಲ್ಲಿ ಭಂಡಾರಿ ರಿಸೆಪ್ಷನಿಸ್ಟ್ ಆಗಿ ಕೆಲಸ ಮಾಡುತ್ತಿದ್ದರು. ಅವರು ಸೆಪ್ಟೆಂಬರ್ 18, 2022 ರಂದು ನಾಪತ್ತೆಯಾಗಿದ್ದರು. ಒಂದು ದಿನದ ನಂತರ, ಪುಲ್ಕಿತ್ ಆರ್ಯ, ರೆಸಾರ್ಟ್ ಮ್ಯಾನೇಜರ್ ಸೌರಭ್ ಭಾಸ್ಕರ್ ಮತ್ತು ಅಸಿಸ್ಟೆಂಟ್ ಮ್ಯಾನೇಜರ್ ಅಂಕಿತ್ ಗುಪ್ತಾ ಅವರು ವ್ಯಕ್ತಿ ನಾಪತ್ತೆ ದೂರು ದಾಖಲಿಸಿದ್ದರು.
ಆದಾಗ್ಯೂ, ಜಗಳದ ನಂತರ ಭಂಡಾರಿಯವರನ್ನು ಕಾಲುವೆಗೆ ತಳ್ಳಿ ಕೊಲೆ ಮಾಡಿರುವುದಾಗಿ ಅವರು ನಂತರ ಒಪ್ಪಿಕೊಂಡಿದ್ದರು. ಭಂಡಾರಿ ನಾಪತ್ತೆಯಾದ ಆರು ದಿನಗಳ ನಂತರ ರಿಷಿಕೇಶದ ಚಿಲ್ಲಾ ಕಾಲುವೆಯಿಂದ ಅವರ ಮೃತದೇಹವನ್ನು ವಶಪಡಿಸಿಕೊಳ್ಳಲಾಗಿತ್ತು. ಈ ವಿಷಯ ಬೆಳಕಿಗೆ ಬಂದ ನಂತರ ಬಿಜೆಪಿ ವಿನೋದ್ ಆರ್ಯ ಮತ್ತು ಅವರ ಇನ್ನೊಬ್ಬ ಪುತ್ರ ಅಂಕಿತ್ ಆರ್ಯ ಅವರನ್ನು ಪಕ್ಷದಿಂದ ಉಚ್ಚಾಟಿಸಿತ್ತು.
ನಂತರದ ದಿನಗಳಲ್ಲಿ ಭಂಡಾರಿ ಅವರು ತನ್ನ ಸ್ನೇಹಿತನಿಗೆ ಕಳುಹಿಸಿದ್ದ ವಾಟ್ಸಾಪ್ ಸಂದೇಶಗಳಂತಹ ವಶಪಡಿಸಿಕೊಂಡ ಸಾಕ್ಷ್ಯಗಳು, ಆರೋಪಿಗಳು ಭಂಡಾರಿಯವರನ್ನು ವೇಶ್ಯಾವಾಟಿಕೆಗೆ ತಳ್ಳಲು ಬಲವಂತಪಡಿಸುತ್ತಿದ್ದರು ಎಂಬುದನ್ನು ತೋರಿಸುವಂತಿದ್ದವು. “ವಿಐಪಿ” ಒಬ್ಬರಿಗೆ “ವಿಶೇಷ ಸೇವೆಗಳನ್ನು” ನೀಡಲು ನಿರಾಕರಿಸಿದ್ದಕ್ಕಾಗಿ ಆಕೆಯನ್ನು ಕೊಲೆ ಮಾಡಲಾಗಿದೆ ಎಂದು ಆರೋಪಿಸಲಾಗಿತ್ತು.
ನಂತರ ಸಾರ್ವಜನಿಕಗೊಳಿಸಲಾದ ಆಡಿಯೋ ಮತ್ತು ವೀಡಿಯೊ ಕ್ಲಿಪ್ಗಳಲ್ಲಿ, ರಾಥೋಡ್ ಅವರು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ದುಷ್ಯಂತ್ ಕುಮಾರ್ ಗೌತಮ್ ಅವರನ್ನು ಸದರಿ “ವಿಐಪಿ” ಎಂದು ಗುರುತಿಸಿದ್ದರು ಎಂದು ಪಿಟಿಐ ವರದಿ ಮಾಡಿದೆ. ಆದರೆ, ಮಾಜಿ ಶಾಸಕರು ಯಾವುದೇ ಆಡಿಯೋ ಅಥವಾ ವೀಡಿಯೊ ಕ್ಲಿಪ್ಗಳನ್ನು ಬಿಡುಗಡೆ ಮಾಡಿಲ್ಲ ಅಥವಾ ಪಕ್ಷದ ಹಿರಿಯ ನಾಯಕರ ವಿರುದ್ಧ ಯಾವುದೇ ಟೀಕೆಗಳನ್ನು ಮಾಡಿಲ್ಲ ಎಂದು ನಿರಾಕರಿಸಿದ್ದರು.
ಈ ವಿಷಯಕ್ಕೆ ಸಂಬಂಧಿಸಿದಂತೆ ರಾಥೋಡ್ ವಿರುದ್ಧ ನಾಲ್ಕು ಪ್ರಕರಣಗಳು ದಾಖಲಾಗಿದ್ದವು. ಆದರೆ, ಮೂರು ದಿನಗಳ ಹಿಂದೆ ಅವರು ಪತ್ರಿಕಾಗೋಷ್ಠಿ ನಡೆಸಿ, ತಮ್ಮ ವಿರುದ್ಧ ದಾಖಲಾಗಿದ್ದ ನಾಲ್ಕು ಪ್ರಥಮ ಮಾಹಿತಿ ವರದಿಗಳಲ್ಲಿ (ಎಫ್ಐಆರ್) ಎರಡನ್ನು ಉತ್ತರಾಖಂಡ ಹೈಕೋರ್ಟ್ ಜೂನ್ 4 ರಂದು ರದ್ದುಗೊಳಿಸಿದೆ ಎಂದು ಹೇಳಿದ್ದರು ಎಂಬುದಾಗಿ ಪಿಟಿಐ ವರದಿ ಮಾಡಿದೆ.
ದಲನ್ವಾಲಾ ಮತ್ತು ನೆಹರು ಕಾಲೋನಿ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಇತರ ಎರಡು ಪ್ರಕರಣಗಳ ತನಿಖೆ ಇನ್ನೂ ನಡೆಯುತ್ತಿದ್ದು, ತಾವು ಅಧಿಕಾರಿಗಳಿಗೆ ಸಹಕರಿಸುತ್ತಿರುವುದಾಗಿ ರಾಥೋಡ್ ತಿಳಿಸಿದ್ದರು.