ಹೈದರಾಬಾದ್: ವಕೀಲ ಖಾಝಾ ಮೊಯಿಝುದ್ದೀನ್ ಹತ್ಯೆ ಕೇಸ್; ತೆಲಂಗಾಣ ಕಾಂಗ್ರೆಸ್ ಉಪಾಧ್ಯಕ್ಷ ಮುಜಾಹಿದ್ ಆಲಂ ಖಾನ್ ಬಂಧನ!

ಹೈದರಾಬಾದ್: ವಕ್ಸ್ ಆಸ್ತಿಗಳ ಅತಿಕ್ರಮಣ ಪ್ರಕರಣಗಳ ವಿರುದ್ಧ ಹೋರಾಟ ನಡೆಸುತ್ತಿದ್ದ ವಕೀಲ ಖಾಝಾ ಮೊಯಿಝುದ್ದೀನ್ ಅವರ ಹತ್ಯೆ ಆರೋಪದಲ್ಲಿ ತೆಲಂಗಾಣ ರಾಜ್ಯ ಕಾಂಗ್ರೆಸ್ ಉಪಾಧ್ಯಕ್ಷ ಮುಜಾಹಿದ್ ಆಲಂ ಖಾನ್ ಮತ್ತು ತಂದೆ ಮಹಬೂಬ್ ಆಲಂ ಖಾನ್ ಅವರನ್ನು ಹೈದರಾಬಾದ್ ಪೊಲೀಸರು ಬಂಧಿಸಿದ್ದಾರೆ ಎಂದು theprint.in ವರದಿ ಮಾಡಿದೆ.
ಏನಿದು ಘಟನೆ?
ಮೇ.23ರಂದು ಖಾಝಾ ಮೊಯಿಝುದ್ದೀನ್ ಅವರು ಹೈದರಾಬಾದ್ನ ಶಾಂತಿ ನಗರದಲ್ಲಿರುವ ಮನೆ ಬಳಿ ತಮ್ಮ ಕಾರಿನ ಬಳಿ ನಿಂತಿದ್ದ ವೇಳೆ ಹಿಂದಿನಿಂದ ವೇಗವಾಗಿ ಬಂದ ಹಸಿರು ಬಣ್ಣದ ಸ್ಕಾರ್ಪಿಯೋ ಎಸ್ಯುವಿ ಢಿಕ್ಕಿ ಹೊಡೆದು ಅವರನ್ನು 200 ಮೀಟರ್ ದೂರ ಎಳೆದೊಯ್ದಿತ್ತು. ಗಂಭೀರವಾಗಿದ್ದ ಮೊಯಿಝುದ್ದೀನ್ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದರು.

ಈ ಕುರಿತು ನಾಂಪಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದು ಉದ್ದೇಶಪೂರ್ವಕವಾಗಿ ನಡೆಸಿದ ಕೃತ್ಯ ಎಂದು ಕುಟುಂಬಸ್ಥರು ಆರೋಪಿಸಿದ ಬಳಿಕ ಕೊಲೆ ಆರೋಪದಡಿ ಪ್ರಕರಣವನ್ನು ದಾಖಲಿಸಲಾಗಿತ್ತು.
ಪೊಲೀಸರು ಹೇಳಿದ್ದೇನು?
ವಕೀಲ ಖಾಝಾ ಮೊಯಿಝುದ್ದೀನ್ ಅವರನ್ನು ಹತ್ಯೆ ಮಾಡಲು ಕಾಂಗ್ರೆಸ್ ನಾಯಕ ಮುಜಾಹಿದ್ ಆಲಂ ಖಾನ್ ಮತ್ತು ತಂದೆ ಮಹಬೂಬ್ ಆಲಂ ಖಾನ್ ನಾಲ್ಕು ತಿಂಗಳ ಮೊದಲೇ ಪಿತೂರಿಯನ್ನು ರೂಪಿಸಿದ್ದರು. ಮುಜಾಹಿದ್ ಆಲಂ ಖಾನ್ ಹತ್ಯೆಯ ಪ್ರಮುಖ ಸಂಚುಕೋರ. ಆತನ ತಂದೆ ಅಪರಾಧಿಗಳಿಗೆ ಬಂಧನದಿಂದ ತಪ್ಪಿಸಿಕೊಳ್ಳಲು ಸಹಾಯ ಮಾಡಿದ್ದಾರೆ ಎಂದು ಹೈದರಾಬಾದ್ ಪೊಲೀಸ್ ಆಯುಕ್ತ ವಿ.ಸಿ. ಸಜ್ಜನರ್ ಹೇಳಿದ್ದಾರೆ.
ಘಟನೆಗೆ ಸಂಬಂಧಿಸಿ ತಂದೆ ಮತ್ತು ಮಗನ ಮೇಲೆ ಸೆಕ್ಷನ್ 103(1) ಮತ್ತು ಕ್ರಿಮಿನಲ್ ಪಿತೂರಿಗಾಗಿ 61(2)(ಎ) ಅಡಿಯಲ್ಲಿ ಆರೋಪ ಹೊರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಪರಾಧಕ್ಕೆ ಸಹಾಯ ನೀಡಿದ್ದಕ್ಕಾಗಿ ಪೊಲೀಸರು ಇತರ ಐವರನ್ನು ಬಂಧಿಸಿದ್ದಾರೆ.
ಕೃತ್ಯಕ್ಕೆ ಕಾರಣವೇನು?
ದಶಕಗಳಿಂದ ಮುಂದುವರಿದುಕೊಂಡು ಬಂದಿರುವ ಆಸ್ತಿ ಮತ್ತು ಹಣಕಾಸಿನ ವಿವಾದಗಳು ಅಪರಾಧಕ್ಕೆ ಕಾರಣವೆಂದು ಪ್ರಾಥಮಿಕವಾಗಿ ತಿಳಿದು ಬಂದಿದೆ. ಆದರೆ ಮುಜಾಹಿದ್ ಮತ್ತು ಖಾಝಾ ಮೊಯಿಝುದ್ದೀನ್ ನಡುವೆ ಹಲವು ವಿವಾದಗಳಿತ್ತು. ಹೈದರಾಬಾದ್ನ ಮಲಕ್ಪೇಟ್ನಲ್ಲಿ ಆಲಂ ನಿರ್ಮಿಸುತ್ತಿದ್ದ ವೈದ್ಯಕೀಯ ಕಾಲೇಜು ಮತ್ತು Lakdi-ka-Pul ಪ್ರದೇಶದಲ್ಲಿರುವ ವಿಶಾಲ ವಾಣಿಜ್ಯ ಸಂಕೀರ್ಣಗಳಿಗೆ ಸಂಬಂಧಿಸಿದ ವ್ಯಾಜ್ಯಗಳೇ ಈ ಹತ್ಯೆಯ ತಕ್ಷಣದ ಕಾರಣವಾಗಿರಬಹುದು ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ತನಿಖೆಯ ಸಮಯದಲ್ಲಿ 10 ಲಕ್ಷ ರೂಪಾಯಿ ನಗದು, ಮೊಬೈಲ್ ಫೋನ್ಗಳು ಮತ್ತು ಅಪರಾಧಕ್ಕೆ ಬಳಸಲಾದ ಮಹೀಂದ್ರಾ ಸ್ಕಾರ್ಪಿಯೋ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೃತ್ಯಕ್ಕೆ 15 ಲಕ್ಷ ರೂ. ಸುಪಾರಿ!
ಪೊಲೀಸ್ ತನಿಖೆಯ ವೇಳೆ ಖಾಝಾ ಮೊಯಿಝುದ್ದೀನ್ ರನ್ನು ಹತ್ಯೆ ಮಾಡಲು ಮುಜಾಹಿದ್ ಆಲಂ ಖಾನ್ ಮತ್ತು ತಂದೆ ಮಹಬೂಬ್ ಆಲಂ ಖಾನ್ 15 ಲಕ್ಷ ರೂ. ಸುಪಾರಿ ನೀಡಿರುವುದು ಬಹಿರಂಗವಾಗಿದೆ.
“ನಾವು ಅತ್ಯಂತ ವೈಜ್ಞಾನಿಕ ರೀತಿಯಲ್ಲಿ ಸಮಗ್ರ ತನಿಖೆ ನಡೆಸಿದ್ದೇವೆ. ಆರೋಪಿಗಳಾದ ಮುಜಾಹಿದ್ ಆಲಂ ಖಾನ್, ತಂದೆ ಮಹಬೂಬ್ ಆಲಂ ಖಾನ್ ಹಾಗೂ ಅವರ ಸಹಚರರು ವಕೀಲರನ್ನು ಹತ್ಯೆ ಮಾಡಲು 15 ಲಕ್ಷ ಸುಪಾರಿ ನೀಡಿ ಸಂಚು ರೂಪಿಸಿದ್ದರು. ಈ ಸಂಚನ್ನು ಹಸನ್ ಅಲಿ ಅಲಿಯಾಸ್ ಚೌಸ್, ಮುನೀರ್ ಹಾಗೂ ಕಿಶನ್ ಅಲಿಯಾಸ್ ಪಪ್ಪು ಎಂಬ ಮಧ್ಯವರ್ತಿಗಳ ಮೂಲಕ ರೂಪಿಸಲಾಯಿತು. ಕಿಶನ್, ವಿನಯ್ನನ್ನು ಸಂಪರ್ಕಿಸಿದ್ದು ವಿನಯ್ ಅಭಿಜಿತ್ ಅಲಿಯಾಸ್ ನಾನಿ, ವಿಕ್ರಂ ಅಲಿಯಾಸ್ ಚಿಂಟು ಹಾಗೂ ಮನಿದೀಪ್ ಅಲಿಯಾಸ್ ಪೊಗೋ ನಾನಿಯನ್ನು ಕೃತ್ಯಕ್ಕೆ ನೇಮಿಸಿದ್ದನು” ಎಂದು ಪೊಲೀಸ್ ಆಯುಕ್ತ ಸಜ್ಜನಾರ್ ತಿಳಿಸಿದ್ದಾರೆ.
ಮುಜಾಹಿದ್ ಕಾಂಗ್ರೆಸ್ ಪಕ್ಷದಿಂದ ಉಚ್ಚಾಟನೆ:
ಈ ಬೆಳವಣಿಗೆ ಹಿನ್ನೆಲೆ ಮುಜಾಹಿದ್ನನ್ನು ಕಾಂಗ್ರೆಸ್ ಪಕ್ಷದಿಂದ ಉಚ್ಛಾಟಿಸಲಾಗಿದೆ. ಹಿರಿಯ ಕಾಂಗ್ರೆಸ್ ನಾಯಕ ಮಹಬೂಬ್ ಆಲಂ ಖಾನ್ ಅವರನ್ನು ಪಕ್ಷದಿಂದ ಅಮಾನತಗೊಳಿಸಲಾಗಿದೆ.