Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ತ್ವಿಷಾ ಸಾವು ಪ್ರಕರಣಕ್ಕೆ ಟ್ವಿಸ್ಟ್: ರಹಸ್ಯ ಭೇದಿಸಿದ ಎರಡು ಪ್ರಮುಖ ಸಿಸಿಟಿವಿ ವಿಡಿಯೋ ಲಭ್ಯ!

Spread the love

ಭೋಪಾಲ್: ದೇಶಾದ್ಯಂತ ಭಾರಿ ಚರ್ಚೆಗೆ ಕಾರಣವಾಗಿರುವ ತ್ವಿಷಾ ಶರ್ಮಾ ಅವರ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಎರಡು ಮಹತ್ವದ ಸಿಸಿಟಿವಿ ವಿಡಿಯೋಗಳು ಲಭ್ಯವಾಗಿದ್ದು, ತನಿಖೆಗೆ ಹೊಸ ತಿರುವು ಸಿಕ್ಕಿದೆ. ಭೋಪಾಲ್‌ನ ಕಟಾರಾ ಹಿಲ್ಸ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಈ ಘಟನೆಯ ಸುತ್ತಲಿನ ರಹಸ್ಯವನ್ನು ಭೇದಿಸಲು ಪೊಲೀಸರು ಈಗ ಈ ದೃಶ್ಯಾವಳಿಗಳನ್ನು ತೀವ್ರವಾಗಿ ಪರಿಶೀಲಿಸುತ್ತಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಮೊದಲನೇ ಸಿಸಿಟಿವಿ ವಿಡಿಯೋದಲ್ಲಿ, ಘಟನೆ ನಡೆಯುವುದಕ್ಕೂ ಮೊದಲು ತ್ವಿಷಾ ಅವರು ಒಂಟಿಯಾಗಿ ಮೇಲಿನ ಮಹಡಿಯ ಕಡೆಗೆ ನಡೆದುಕೊಂಡು ಹೋಗುತ್ತಿರುವುದು ಕಂಡುಬಂದಿದೆ. ಈ ವೇಳೆ ಅವರ ಕೈಯಲ್ಲಿ ಯಾವುದೋ ಒಂದು ವಸ್ತುವಿರುವುದು ಸ್ಪಷ್ಟವಾಗಿ ಕಾಣಿಸುತ್ತದೆಯಾದರೂ, ಅದು ಏನು ಎಂಬುದು ಇನ್ನೂ ನಿಖರವಾಗಿ ತಿಳಿದುಬಂದಿಲ್ಲ. ಈ ಹಿಂದೆ ತ್ವಿಷಾ ಅವರ ಅತ್ತೆ, ನಿವೃತ್ತ ನ್ಯಾಯಾಧೀಶೆ ಗಿರಿಬಾಲಾ ಸಿಂಗ್ ಅವರು ಮಾಧ್ಯಮಗಳ ಮುಂದೆ ಮಾತನಾಡುವಾಗ ತ್ವಿಷಾ ಅವರ ಮೊಬೈಲ್ ಫೋನ್ ಮನೆಯೊಳಗೇ ಇತ್ತು ಎಂದು ಹೇಳಿದ್ದರು. ಹೀಗಾಗಿ ಆಕೆಯ ಕೈಯಲ್ಲಿದ್ದ ವಸ್ತು ಮೊಬೈಲ್ ಫೋನ್ ಅಲ್ಲ ಎನ್ನುವುದು ಮೇಲ್ನೋಟಕ್ಕೆ ತಿಳಿದುಬರುತ್ತಿದೆ.
ಇನ್ನು ಲಭ್ಯವಾಗಿರುವ ಎರಡನೇ ವಿಡಿಯೋ ಮತ್ತಷ್ಟು ಆತಂಕಕಾರಿಯಾಗಿದೆ. ಇದರಲ್ಲಿ ತ್ವಿಷಾ ಅವರನ್ನು ಮೂವರು ಪುರುಷರು ಮೇಲಿನ ಮಹಡಿಯಿಂದ ಕೆಳಗೆ ಹೊತ್ತೊಯ್ಯುತ್ತಿರುವ ದೃಶ್ಯ ಸೆರೆಯಾಗಿದೆ. ಅವರ ಪೈಕಿ ತ್ವಿಷಾ ಪತಿ ಸಮರ್ಥ್ ಸಿಂಗ್ ಕೂಡ ಇದ್ದು, ಆತ ಆಕೆಯನ್ನು ಕೆಳಗೆ ತರುವಾಗ ಸಿಪಿಆರ್ (CPR – ಕೃತಕ ಉಸಿರಾಟ ಪ್ರಕ್ರಿಯೆ) ನೀಡಲು ಪ್ರಯತ್ನಿಸುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ. ಇದೇ ಸಮಯದಲ್ಲಿ ತ್ವಿಷಾ ಅವರ ಅತ್ತೆ ಗಿರಿಬಾಲಾ ಸಿಂಗ್ ಅವರು ಮೆಟ್ಟಿಲುಗಳ ಮೇಲೆ ಮತ್ತು ಕೆಳಗೆ ಗಾಬರಿಯಿಂದ ಓಡಾಡುತ್ತಿರುವುದು ಕಂಡುಬಂದಿದೆ. ತ್ವಿಷಾ ಅವರ ಸಾವಿನ ನಂತರ ಈ ದೃಶ್ಯಗಳು ಮುನ್ನೆಲೆಗೆ ಬಂದಿರುವುದು ಸಾರ್ವಜನಿಕರಲ್ಲಿ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.

ತ್ವಿಷಾ ಅವರ ಪೋಷಕರು ಇದು ವರದಕ್ಷಿಣೆ ಕಿರುಕುಳ ಮತ್ತು ಕೊಲೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಇದಕ್ಕೆ ಪೂರಕವಾಗಿ ತ್ವಿಷಾ ಅವರು ಸಾವಿಗೂ ಮುನ್ನ ತಮ್ಮ ತಾಯಿಗೆ ಕಳುಹಿಸಿದ್ದ ಕೆಲವು ವಾಟ್ಸಾಪ್ ಸಂದೇಶಗಳು ಪೊಲೀಸರಿಗೆ ಸಿಕ್ಕಿವೆ. ಅದರಲ್ಲಿ ಆಕೆ “ನನ್ನನ್ನು ಹೇಗಾದರೂ ಮಾಡಿ ಇಲ್ಲಿಂದ ಕರ್ಕೊಂಡು ಹೋಗಿ” ಎಂದು ತಾಯಿಯ ಬಳಿ ಅಂಗಲಾಚುತ್ತಿರುವುದು ಪತ್ತೆಯಾಗಿದೆ. ಸದ್ಯಕ್ಕೆ ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬ ಗೊಂದಲ ಮುಂದುವರಿದಿದ್ದು, ಪೊಲೀಸರು ವಿಧಿವಿಜ್ಞಾನ ಇಲಾಖೆಯ (Forensic) ವರದಿಗಾಗಿ ಕಾಯುತ್ತಿದ್ದಾರೆ. ಘಟನೆಯ ನಂತರ ಪತಿ ಸಮರ್ಥ್ ಸಿಂಗ್ ತಲೆಮರೆಸಿಕೊಂಡಿದ್ದು, ಆತನ ಪತ್ತೆಗೆ ಪೊಲೀಸರು 10,000 ರೂಪಾಯಿ ಬಹುಮಾನ ಘೋಷಿಸಿದ್ದಾರೆ. ತನಿಖೆ ಚುರುಕುಗೊಂಡಿದ್ದು, ಶೀಘ್ರದಲ್ಲೇ ಸತ್ಯಾಸತ್ಯತೆ ಹೊರಬರಲಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *