ಉಳ್ಳಾಲ ಬೈಲ್ನಲ್ಲಿ ರಸ್ತೆಯಲ್ಲೇ ಚೆಲ್ಲಿದ ಮೀನಿನ ಎಣ್ಣೆ: ಹಲವು ಬೈಕ್ ಸವಾರರು ಜಾರಿ ಬಿದ್ದು ಗಾಯ

ಉಳ್ಳಾಲ : ಮೀನಿನ ಎಣ್ಣೆ ಹೊತ್ತೊಯ್ಯುತ್ತಿದ್ದ ಕ್ಯಾಂಟರ್ನಿಂದ ಭಾರೀ ಪ್ರಮಾಣದ ಎಣ್ಣೆ ರಸ್ತೆಯಲ್ಲೇ ಸೋರಿಕೆಯಾಗಿ, ಹಲವು ದ್ವಿಚಕ್ರ ವಾಹನ ಸವಾರರು ಜಾರಿ ಬಿದ್ದು ಗಾಯಗೊಂಡ ಘಟನೆ ಗುರುವಾರ ರಾತ್ರಿ ಉಳ್ಳಾಲ ಬೈಲ್ನಲ್ಲಿ ನಡೆದಿದೆ.

ಟೆಪುರದಿಂದ ಮಂಗಳೂರು ಬಂದರಿಗೆ ಮೀನಿನ ಎಣ್ಣೆಯನ್ನು ಸಾಗಿಸುತ್ತಿದ್ದ ಕ್ಯಾಂಟರ್ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಪರಿಣಾಮ, ಅಬ್ಬಕ್ಕ ಸರ್ಕಲ್ನಿಂದ ಉಳ್ಳಾಲ ಬೈಲ್ವರೆಗೂ ರಸ್ತೆಯಾದ್ಯಂತ ಎಣ್ಣೆ ಚೆಲ್ಲಿದೆ. ಇದರಿಂದಾಗಿ ಈ ಮಾರ್ಗದಲ್ಲಿ ಸಂಚರಿಸುತ್ತಿದ್ದ ಬೈಕ್ ಸವಾರರು ನಿಯಂತ್ರಣ ತಪ್ಪಿ ರಸ್ತೆಯ ಮೇಲೆ ಜಾರಿ ಬಿದ್ದಿದ್ದಾರೆ. ಇದರಿಂದ ಆಕ್ರೋಶಗೊಂಡ ಸ್ಥಳೀಯರು ಕ್ಯಾಂಟರ್ ತಡೆದು ಪ್ರತಿಭಟನೆ ನಡೆಸಿದರು.
ಘಟನೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಸ್ಪೀಕರ್ ಹಾಗೂ ಸ್ಥಳೀಯ ಶಾಸಕ ಯು.ಟಿ. ಖಾದರ್, ಅಪಘಾತಕ್ಕೆ ಕಾರಣವಾದ ಫಿಶ್ ಮೀಲ್ ಘಟಕದ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮಂಗಳೂರು ಪೊಲೀಸ್ ಆಯುಕ್ತರಿಗೆ ಸೂಚಿಸಿದ್ದಾರೆ. “ಕೈಗಾರಿಕೆಗಳ ಅಭಿವೃದ್ಧಿಗೆ ನಮ್ಮ ಬೆಂಬಲವಿದೆ, ಆದರೆ ಜನಸಾಮಾನ್ಯರ ಜೀವಕ್ಕೆ ಅಪಾಯವಾದರೆ ಸಹಿಸಲು ಸಾಧ್ಯವಿಲ್ಲ. ಗಾಯಗೊಂಡ ಸವಾರರಿಗೆ ಕಾರ್ಖಾನೆಯ ಮಾಲೀಕರು ಸೂಕ್ತ ಪರಿಹಾರ ನೀಡಬೇಕು” ಎಂದು ಅವರು ತಿಳಿಸಿದ್ದಾರೆ.