ದೆಹಲಿಯಲ್ಲಿ ವರುಣನ ರೌದ್ರನರ್ತನ: 100 ಕಿ.ಮೀ ವೇಗದ ಬಿರುಗಾಳಿಗೆ ನಲುಗಿದ ರಾಜಧಾನಿ; 500ಕ್ಕೂ ಹೆಚ್ಚು ವಿಮಾನಗಳ ಸಂಚಾರ ಅಸ್ತವ್ಯಸ್ತ

ಹೊಸದಿಲ್ಲಿ: ರಾಷ್ಟ್ರ ರಾಜಧಾನಿಯಲ್ಲಿ ಬುಧವಾರ ದಿಢೀರ್ ಹವಾಮಾನ ಬದಲಾವಣೆಯಿಂದಾಗಿ ವ್ಯಾಪಕ ಹಾನಿ ಸಂಭವಿಸಿದೆ. ಇದ್ದಕ್ಕಿದ್ದಂತೆ ಗಂಟೆಗೆ 100 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸಲಾರಂಭಿಸಿದ್ದು, ಅಲ್ಲಲ್ಲಿ ಮಳೆ ಹಾಗೂ ಆಲಿಕಲ್ಲು ಸಹಿತ ಮಳೆ ಬಿದ್ದಿದೆ. ದಿಢೀರ್ ಹವಾಮಾನ ಬದಲಾವಣೆಯಿಂದ ವಿಮಾನಗಳ ಸಂಚಾರ ಅಸ್ತವ್ಯಸ್ತಗೊಂಡಿದ್ದು, 500ಕ್ಕೂ ಹೆಚ್ಚು ವಿಮಾನಗಳು ವಿಳಂಬವಾಗಿವೆ. 15 ವಿಮಾನಗಳ ಮಾರ್ಗ ಬದಲಿಸಲಾಗಿದ್ದು, ಪ್ರತಿಕೂಲ ಹವಾಮಾನದಿಂದಾಗಿ ಆರು ವಿಮಾನಗಳು ನಿಲ್ದಾಣದ ಸುತ್ತ ಅತಂತ್ರವಾಗಿ ಸುತ್ತು ಹೊಡೆಯಬೇಕಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.

ಹಗಲಿನ ವೇಳೆ ಇದ್ದ ಅಧಿಕ ತಾಪಮಾನ ಹಾಗೂ ತೇವಾಂಶದ ಜತೆಗೆ ಪಾಶ್ಚಿಮಾತ್ಯ ಪ್ರಕ್ಷುಬ್ಧತೆಯು ಮಳೆ ಮತ್ತು ಆಲಿಕಲ್ಲು ಬೀಳಲು ಕಾರಣವಾಗಿದೆ. ಪಾಲಂನಲ್ಲಿ ರಭಸದ ಗಾಳಿ ಬೀಸಿದ್ದು, ಗಂಟೆಗೆ 98 ಕಿಲೋಮೀಟರ್ ವೇಗದ ಗಾಳಿ ಬೀಸಿದೆ. ಸಫರಂಗ್ ಮತ್ತು ನಿಸಾದಲ್ಲಿ 72 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ಬುಧವಾರ ಮಧ್ಯಾಹ್ನದ ಮೊದಲೇ ವಿವಿಧೆಡೆ ತುಂತುರು ಮಳೆಯಾಗಿದ್ದು, ರಭಸದ ಗಾಳಿಯಿಂದಾಗಿ ಬಿಸಿಲ ಬೇಗೆಯಿಂದ ಕಂಗೆಟ್ಟಿದ್ದ ಜನತೆಗೆ ತಂಪೆರೆಯಿತು. ಆದರೆ ತೇವಾಂಶ ಹಾಗೂ ಪ್ರಖರ ಬಿಸಿಲು ಸಂಜೆಯ ವೇಳೆಗೆ 44 ಡಿಗ್ರಿ ತಾಪಮಾನದ ಅನುಭವಕ್ಕೆ ಕಾರಣವಾಯಿತು. ಆದರೆ ವಾಸ್ತವವಾಗಿ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ಇತ್ತು ಎಂದು ಹವಾಮಾನ ಇಲಾಖೆ ಸ್ಪಷ್ಟಪಡಿಸಿದೆ.
ರಾತ್ರಿ 8 ಗಂಟೆಯ ಬಳಿಕ ಹವಾಮಾನ ಪರಿಸ್ಥಿತಿ ದಿಢೀರನೇ ಬದಲಾಗಿದ್ದು, ಉತ್ತರ, ನೈರುತ್ಯ ದಕ್ಷಿಣ ಮತ್ತು ಆಗ್ನೆಯ ದಹಲಿಯಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಯಿತು. ಗಂಟೆಗೆ 98 ಕಿಲೋಮೀಟರ್ ವೇಗದಲ್ಲಿ ಬಲವಾದ ಗಾಳಿ ಬೀಸಿದ ಪರಿಣಾಮ ರಾತ್ರಿ 8 ರ ವೇಳೆಗೆ ದೆಹಲಿಯ ತಾಪಮಾನ 10- 12 ಡಿಗ್ರಿಯಷ್ಟು ಇಳಿಯಿತು ಎಂದು ಐಎಂಡಿ ಅಧಿಕಾರಿಗಳು ಹೇಳಿದ್ದಾರೆ.
ದೌಲಾಖಾನ್, ಮೋತಿಬಾಗ್ ಮತ್ತು ಉತ್ತಮ್ನಗರ ಸೇರಿದಂತೆ ದಕ್ಷಿಣ ಹಾಗೂ ಆಗ್ನೆಯ ದೆಹಲಿಯಲ್ಲಿ ರಾತ್ರಿ ಮಳೆಯಾಗಿದೆ. ಪಾಲಂನಲ್ಲಿ 2 ಮಿಲಿಮೀಟರ್ ಹಾಗೂ ಸಪ್ಟರಂಗ್ನಲ್ಲಿ 1.8 ಮಿಲಿಮೀಟರ್ ಮಳೆ ಬಿದ್ದಿದೆ.