ವರನ ಸಹೋದರನಿಗೆ ಸಿಗಲಿಲ್ಲವಂತೆ ರಸಗುಲ್ಲಾ: ಕ್ಷುಲ್ಲಕ ಕಾರಣಕ್ಕೆ ಮುರಿಯುವ ಹಂತಕ್ಕೆ ತಲುಪಿದ ವಿವಾಹ

ಮದುವೆ ಅಂದಮೇಲೆ ಅಲ್ಲಿ ಸಂಭ್ರಮ, ಸಡಗರ ಇರಬೇಕು. ಆದರೆ ಇಲ್ಲೊಂದು ಕಡೆ ಕೇವಲ ಒಂದು ರಸಗುಲ್ಲಾ ಸಿಹಿತಿಂಡಿಗಾಗಿ ಮದುವೆ ಮಂಟಪವೇ ರಣರಂಗವಾಗಿ ಮಾರ್ಪಟ್ಟಿದೆ. ವರನ ಸಹೋದರನಿಗೆ ರಸಗುಲ್ಲಾ ನೀಡಿಲ್ಲ ಎಂಬ ಸಣ್ಣ ಕಾರಣಕ್ಕೆ ಶುರುವಾದ ಜಗಳ, ಮದುವೆ ಮುರಿಯುವ ಹಂತಕ್ಕೆ ತಲುಪಿದ ಆಘಾತಕಾರಿ ಘಟನೆ ನಡೆದಿದೆ.
ವರನ ಮೆರವಣಿಗೆಯು ಸಭಾಂಗಣಕ್ಕೆ ಬಂದಾಗ ವಧುವಿನ ಕಡೆಯವರು ಅದ್ದೂರಿಯಾಗಿ ಬರಮಾಡಿಕೊಂಡಿದ್ದರು. ಎಲ್ಲವೂ ಸುಸೂತ್ರವಾಗಿ ಸಾಗುತ್ತಿತ್ತು. ಆದರೆ ಊಟದ ಸಮಯದಲ್ಲಿ ವರನ ಸಹೋದರನಿಗೆ ರಸಗುಲ್ಲಾ ಬಡಿಸಿಲ್ಲ ಎಂಬ ಆರೋಪ ಕೇಳಿಬಂದಿದ್ದು, ಇದೇ ವಿಚಾರವಾಗಿ ವರನ ಕಡೆಯವರು ವಾಗ್ವಾದಕ್ಕಿಳಿದಿದ್ದಾರೆ. ನೋಡನೋಡುತ್ತಿದ್ದಂತೆಯೇ ಈ ಸಣ್ಣ ಮಾತಿನ ಚಕಮಕಿಯು ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ. ವಧುವಿನ ಕಡೆಯವರು ವರನ ಸಹೋದರನ ಮೇಲೆ ಹಿಂಸಾತ್ಮಕವಾಗಿ ಹಲ್ಲೆ ನಡೆಸಿದ್ದು, ಆತ ಅಲ್ಲಿಂದ ಜೀವ ಉಳಿಸಿಕೊಳ್ಳಲು ಓಡಿಹೋಗುತ್ತಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.
@gharkekalesh ಎಂಬ ಇನ್ಸ್ಟಾಗ್ರಾಮ್ ಹ್ಯಾಂಡಲ್ನಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದ್ದು, ಈಗಾಗಲೇ ಲಕ್ಷಾಂತರ ಜನ ವೀಕ್ಷಿಸಿದ್ದಾರೆ. ಒಂದು ರಸಗುಲ್ಲಾ ಇಷ್ಟೊಂದು ರಾದ್ಧಾಂತಕ್ಕೆ ಕಾರಣವಾಗಬಹುದೇ ಎಂದು ನೆಟ್ಟಿಗರು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ. ಮದುವೆಯಂತಹ ಪವಿತ್ರ ಕಾರ್ಯಕ್ರಮದಲ್ಲಿ ಇಂತಹ ಕ್ಷುಲ್ಲಕ ಕಾರಣಕ್ಕೆ ಗದ್ದಲ ಸಂಭವಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೂ ಕಾರಣವಾಗಿದೆ.
