ಕೆಎಸ್ಆರ್ಟಿಸಿಯ ‘ಧ್ವನಿ ಸ್ಪಂದನ’ ಮತ್ತು ‘ಅವತಾರ್ 4.0’ ಯೋಜನೆಗಳಿಗೆ ರಾಷ್ಟ್ರೀಯ ಪ್ರಶಸ್ತಿ ಗರಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ರಾಷ್ಟ್ರಮಟ್ಟದಲ್ಲಿ ಮತ್ತೊಮ್ಮೆ ತನ್ನ ಸಾಧನೆಯನ್ನು ತೋರಿದೆ. ಇಲೆಟ್ಸ್ ಮೊಬಿಲಿಟಿ ಎಕ್ಸೆಲೆನ್ಸ್ ಅವಾರ್ಡ್ಸ್ನಲ್ಲಿ (Elets Mobility Excellence Awards 2026) ಎರಡು ಪ್ರತಿಷ್ಠಿತ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ.

ಇನೋವೇಶನ್ ಇನ್ ಸಿಟಿಜೆನ್ ಎಂಗೇಜ್ಮೆಂಟ್ ಆ್ಯಂಡ್ ಇನ್ಕ್ಲೂಸಿವ್ ಮೊಬಿಲಿಟಿ ಅಂದರೆ ತಂತ್ರಜ್ಞಾನ ಮತ್ತು ಸಮುದಾಯದ ಸಲಹೆಗಳನ್ನು ಬಳಸಿ, ಸಮಾಜದ ಪ್ರತಿಯೊಬ್ಬರಿಗೂ (ವಿಶೇಷವಾಗಿ ವಿಕಲಚೇತನರು ಮತ್ತು ಹಿರಿಯ ನಾಗರಿಕರಿಗೆ) ಸುಲಭ ಹಾಗೂ ಸುರಕ್ಷಿತ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸುವಲ್ಲಿ ಧ್ವನಿ ಸ್ಪಂದನ ಯೋಜನೆ ಪ್ರಶಸ್ತಿ ಪಡೆದಿದೆ. ಅದರೊಂದಿಗೆ ಔಟ್ಸ್ಟ್ಯಾಂಡಿಂಗ್ ಪಬ್ಲಿಕ್ ಟ್ರಾನ್ಸ್ಪೋರ್ಟ್ ಡಿಜಿಟೈಜೇಶನ್ ಇನಿಶಿಯೇಟಿವ್ ಅಂದರೆ ತಂತ್ರಜ್ಞಾನ ಆಧಾರಿತ ಯೋಜನೆಯು ಸಾರ್ವಜನಿಕ ಸಾರಿಗೆಯ ಡಿಜಿಟಲೀಕರಣದಲ್ಲಿ ಮಾಡಿದ ಅತ್ಯುತ್ತಮ ಸಾಧನೆಗಾಗಿ AWATAR 4.0 ಯೋಜನೆಗೂ ರಾಷ್ಟ್ರೀಯ ಮಟ್ಟದ ಪ್ರಶಸ್ತಿಯನ್ನು ಪಡೆದಿದೆ. ಈ ಯೋಜನೆ ಯುಪಿಐ ಪಾವತಿ ಸೌಲಭ್ಯವನ್ನು ಹೊಂದಿರುವುದರಿಂದ ಪ್ರಯಾಣಿಕರಿಗೆ ಹೆಚ್ಚು ಉಪಯೋಗಿಯಾಗಿದೆ.
ಧ್ವನಿ ಸ್ಪಂದನ ಯೋಜನೆ
ಮೈಸೂರು ನಗರ ಸಾರಿಗೆ ಬಸ್ಸುಗಳಲ್ಲಿನ ಸುಮಾರು 200 ಬಸ್ಸುಗಳಲ್ಲಿ ಜಾರಿಗೆ ತರಲಾದ ಧ್ವನಿ ಸ್ಪಂದನ ಯೋಜನೆ, ದೃಷ್ಟಿಹೀನ ಪ್ರಯಾಣಿಕರಿಗಾಗಿ ವಿಶೇಷವಾಗಿ ರೂಪಿಸಲಾದ ಆನ್ಬೋರ್ಡ್ ಗುರುತು ಮತ್ತು ನಾವಿಗೇಶನ್ ವ್ಯವಸ್ಥೆಯಾಗಿದೆ. ಜರ್ಮನಿಯ GIZ ಸಂಸ್ಥೆಯ ಸಹಯೋಗದಲ್ಲಿ ಅನುಷ್ಠಾನಗೊಂಡಿರುವ ಈ ಯೋಜನೆ, ದೃಷ್ಟಿಹೀನರ ಇತರರ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿ, ಅವರ ಆತ್ಮವಿಶ್ವಾಸ, ಸುರಕ್ಷತೆ ಮತ್ತು ಸ್ವತಂತ್ರ ಪ್ರಯಾಣವನ್ನು ಉತ್ತೇಜಿಸಿದೆ ಎಂದು ನಿಗಮ ತಿಳಿಸಿದೆ.
ಏನಿದು AWATAR 4.0?
ಇನ್ನೊಂದೆಡೆ, AWATAR (Anywhere Anytime Advance Reservation) ಯೋಜನೆ KSRTCಯ ಡಿಜಿಟಲ್ ಟಿಕೆಟ್ ಬುಕ್ಕಿಂಗ್ ವ್ಯವಸ್ಥೆಯಾಗಿದ್ದು, ಪ್ರಯಾಣಿಕರು ವೆಬ್ ಹಾಗೂ ಮೊಬೈಲ್ ವೇದಿಕೆಗಳ ಮೂಲಕ ಎಲ್ಲಿಂದ ಬೇಕಾದರೂ, ಯಾವಾಗ ಬೇಕಾದರೂ ಟಿಕೆಟ್ ಕಾಯ್ದಿರಿಸಿಕೊಳ್ಳಲು ಅನುಕೂಲ ಮಾಡಿಕೊಡುತ್ತಿದೆ. ಒಟ್ಟಾರೆ, ಈ ಎರಡು ಪ್ರಶಸ್ತಿಗಳು KSRTCಯ ನವೀನತೆ ಮತ್ತು ಡಿಜಿಟಲೀಕರಣದ ದಿಸೆಯಲ್ಲಿ ಕೈಗೊಂಡ ಪ್ರಯತ್ನಗಳಿಗೆ ಸಿಕ್ಕ ಮಹತ್ವದ ಮಾನ್ಯತೆಯಾಗಿದೆ.