7,000 ರೂ. ಸಾಲಕ್ಕಾಗಿ ಯುವಕನ ಬಲಿ: ಅಪಹರಿಸಿ ಕೊಲೆಗೈದ ಐವರು ಆರೋಪಿಗಳ ಬಂಧನ

ಹಾಸನ : ಕೇವಲ 7 ಸಾವಿರ ರೂಪಾಯಿ ಹಣಕಾಸು ವಿವಾದವೇ ಯುವಕನೊಬ್ಬನ ಅಪಹರಣ, ಅಮಾನುಷ ಹಿಂಸೆ ಹಾಗೂ ಕೊನೆಗೆ ದೇಹ ಸುಟ್ಟುಹಾಕುವ ಮಟ್ಟಕ್ಕೆ ತಲುಪಿದ ಕ್ರೂರ ಹತ್ಯೆ ಪ್ರಕರಣ ಹಾಸನ ಜಿಲ್ಲೆಯನ್ನು ನಡುಗಿಸಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶುಭಾನ್ವಿತ ಅವರು ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಪ್ರಕರಣದ ವಿವರಗಳನ್ನು ಬಹಿರಂಗಪಡಿಸಿದರು. ಕೆ.ಎಂ. ವರುಣ್ ಎಂಬ ಯುವಕನನ್ನು ಅಪಹರಿಸಿ ಎರಡು ದಿನಗಳ ಕಾಲ ನಿರಂತರವಾಗಿ ಹಲ್ಲೆ ನಡೆಸಿ ಕೊಲೆ ಮಾಡಿರುವ ಪ್ರಕರಣದಲ್ಲಿ ಸತೀಶ್, ಉಮರ್, ವಿಜಯ ನಾಯಕ್, ದಾಸರಕೊಪ್ಪಲು ಚೇತನ್ ಹಾಗೂ ಮನು ಎಂಬಾತರನ್ನು ಬಂಧಿಸಲಾಗಿದೆ.
ಪ್ರಮುಖ ಆರೋಪಿ ಶಶಾಂಕ್ ಸಹಿತ ಇನ್ನಿತರ ಆರೋಪಿಗಳಿಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.
ಪ್ರಾಥಮಿಕ ತನಿಖೆ ಪ್ರಕಾರ, ಶಶಾಂಕ್, ವರುಣ್ಗೆ 7 ಸಾವಿರ ರೂಪಾಯಿ ನೀಡಿದ್ದನು. ಹಣ ಮರಳಿ ನೀಡದ ಹಿನ್ನೆಲೆಯಲ್ಲಿ ಉಂಟಾದ ವೈಮನಸ್ಸು ದ್ವೇಷಕ್ಕೆ ತಿರುಗಿ ಕೊಲೆಗೆ ಕಾರಣವಾಗಿದೆ. ಮಾರ್ಚ್ 10ರಂದು ‘ಬೈಕ್ ರಿಪೇರಿ’ ಎಂದು ಹೇಳಿ ಮನೆಯಿಂದ ಹೊರಟಿದ್ದ ವರುಣ್, ನಂತರ ಮನೆಗೆ ಮರಳಿರಲಿಲ್ಲ. ಇದೇ ದಿನ ವರುಣ್ ಹಾಗೂ ಆತನ ಸ್ನೇಹಿತ ಲೋಹಿತ್ ಅವರನ್ನು ಆರೋಪಿಗಳು ಕರೆದುಕೊಂಡು ಹೋಗಿ ಹಂಗರಹಳ್ಳಿ ಗ್ರಾಮದ ತೋಟದ ಮನೆಯಲ್ಲಿ ಬಂಧಿಸಿ ಹಲ್ಲೆ ನಡೆಸಿದ್ದಾರೆ.
ಮಾರ್ಚ್ 11ರಂದು ನೀರು ತರಲು ಕಳುಹಿಸಿದ ವೇಳೆ ಲೋಹಿತ್ ಆರೋಪಿಗಳ ಕೈಯಿಂದ ತಪ್ಪಿಸಿಕೊಂಡು ಪಾರಾಗಿ ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದಾನೆ. ಆದರೆ ನಿರಂತರ ಹಲ್ಲೆಯಿಂದಾಗಿ ವರುಣ್ ಮೃತಪಟ್ಟಿದ್ದಾನೆ ಎಂದು ಎಸ್ಪಿ ವಿವರಿಸಿದರು.
ಘಟನೆ ಬಳಿಕ ಆರೋಪಿಗಳು ತಮ್ಮ ಕೃತ್ಯ ಮುಚ್ಚಿಹಾಕಲು ಮೃತದೇಹವನ್ನು ಹಂಗರಹಳ್ಳಿಯಿಂದ ಗುಂಡೇಗೌಡನಕೊಪ್ಪಲಿಗೆ ಸಾಗಿಸಿ ಎರಡು ದಿನಗಳ ಕಾಲ ಇಟ್ಟು ನಂತರ ಮಾರ್ಚ್ 13ರಂದು ಸುಟ್ಟುಹಾಕಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
