ವಾಟ್ಸಾಪ್ ಸ್ಟೇಟಸ್ನಲ್ಲಿ ನೋವು ಹಂಚಿಕೊಂಡ ಮರುಕ್ಷಣವೇ ಆತ್ಮಹ*ತ್ಯೆ: ಉನ್ನಾವೋದಲ್ಲಿ ಮನಕಲಕುವ ಘಟನೆ

ಮಹಿಳೆಯೊಬ್ಬರು, ತಮ್ಮ ನೋವನ್ನು ವಾಟ್ಸಾಪ್ ಸ್ಟೇಟಸ್ ವಿಡಿಯೋದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಪೋಸ್ಟ್ ಮಾಡಿದ ತಕ್ಷಣವೇ ಅವರು ಆತ್ಮ*ಹತ್ಯೆ ಮಾಡಿಕೊಂಡಿದ್ದು, ಸಂಬಂಧಿಕರು ಪೊಲೀಸರಿಗೆ ತಿಳಿಸುವಷ್ಟರಲ್ಲಿ ದುರಂತ ಸಂಭವಿಸಿತ್ತು.

ಮಹಿಳೆ ಆತ್ಮ*ಹತ್ಯೆಗೂ ಮುನ್ನ ವಾಟ್ಸಾಪ್ ಸ್ಟೇಟಸ್ನಲ್ಲಿ ವಿಡಿಯೋ ಹಾಕಿಕೊಂಡಿದ್ದು, ತಮ್ಮ ಜೀವನದ ನೋವು ಹಾಗೂ ಒಂಟಿತನದ ಬಗ್ಗೆ ಹೇಳಿಕೊಂಡಿದ್ದಾರೆ.
ಈ ಸ್ಟೇಟಸ್ ನೋಡಿದ ಸಂಬಂಧಿಕರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆದರೆ ಅಷ್ಟರಲ್ಲಾಗಲೇ ಎಲ್ಲವೂ ಮುಗಿದು ಹೋಗಿತ್ತು. ಸ್ಟೇಟಸ್ ಹಾಕಿದ ಮರುಕ್ಷಣವೇ ಮಹಿಳೆ ನೇಣು ಬಿಗಿದುಕೊಂಡಿದ್ದಾರೆ.
ಉನ್ನಾವೋದ ಸದರ್ ಕೋತ್ವಾಲಿ ವ್ಯಾಪ್ತಿಯ ಪ್ರಿಯದರ್ಶಿನಿ ನಗರ ಬಡಾವಣೆಯಲ್ಲಿ ಈ ಘಟನೆ ನಡೆದಿದೆ. ಪೊಲೀಸರ ಪ್ರಕಾರ, ಮಹಿಳೆ ಮನೆಯಲ್ಲಿ ಒಬ್ಬರೇ ಇದ್ದರು. ಕುಟುಂಬಸ್ಥರು ಹೇಳುವಂತೆ, ಕಳೆದ ಕೆಲವು ವರ್ಷಗಳಿಂದ ಅವರ ಜೀವನದಲ್ಲಿ ಒಂದರ ಹಿಂದೆ ಒಂದರಂತೆ ದುರಂತಗಳು ನಡೆದಿದ್ದವು. ಸುಮಾರು ಒಂದು ವರ್ಷದ ಹಿಂದೆ ಅವರ ತಂದೆ-ತಾಯಿ ತೀರಿಕೊಂಡಿದ್ದರು. ಮಹಿಳೆ ಪೋಷಕರಿಗೆ ಒಬ್ಬಳೇ ಮಗಳಾಗಿದ್ದರಿಂದ, ಪತಿ ಅಲೋಕ್ ಜೊತೆ ತವರು ಮನೆಯಲ್ಲೇ ವಾಸವಾಗಿದ್ದರು.
ಮಾರ್ಚ್ 2 ರಂದು ಮಹಿಳೆ ಪತಿಯೂ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಈ ಘಟನೆಯಿಂದ ಮಹಿಳೆ ತೀವ್ರ ಆಘಾತಕ್ಕೆ ಒಳಗಾಗಿದ್ದರು. ಮನೆಯಲ್ಲಿ 13ನೇ ದಿನದ ಕಾರ್ಯ ಮುಗಿಯುವವರೆಗೂ ಸಂಬಂಧಿಕರು ಬಂದು ಹೋಗುತ್ತಿದ್ದರು. ಹಾಗಾಗಿ, ಆಗ ಹೇಗೋ ಸಮಾಧಾನವಾಗಿದ್ದರು. ಆದರೆ ಸಂಬಂಧಿಕರೆಲ್ಲಾ ತಮ್ಮ ತಮ್ಮ ಮನೆಗೆ ವಾಪಸ್ ಹೋದ ಮೇಲೆ, ಅವರಿಗೆ ವಿಪರೀತ ಒಂಟಿತನ ಕಾಡಲು ಶುರುವಾಗಿತ್ತು.
ಒಂಟಿತನದಿಂದ ಬೇಸತ್ತು, ಆ ಮಹಿಳೆ ತಮ್ಮ ಮೊಬೈಲ್ನಲ್ಲೇ ಒಂದು ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದಾರೆ. ಅದರಲ್ಲಿ ತಮ್ಮ ಮನಸ್ಸಿನ ನೋವನ್ನು ಹಂಚಿಕೊಂಡಿದ್ದಾರೆ. “ಒಬ್ಬ ಹೆಣ್ಣಿಗೆ ಜೀವನದಲ್ಲಿ ಮೂರು ಆಸರೆಗಳಿರುತ್ತವೆ, ತಾಯಿ, ತಂದೆ ಮತ್ತು ಗಂಡ. ಆದರೆ ಈಗ ನನಗೀಗ ಇವರಲ್ಲಿ ಯಾರೂ ಇಲ್ಲ. ಮುಂದೆ ಎಲ್ಲವೂ ಸರಿಹೋಗುತ್ತೆ ಅಂತಾ ಜನ ಸಮಾಧಾನ ಮಾಡ್ತಾರೆ, ಆದ್ರೆ ಇದಕ್ಕಿಂತ ಕೆಟ್ಟದ್ದು ನನಗೇನಾಗಲು ಸಾಧ್ಯ?” ಅಂತಾ ವಿಡಿಯೋದಲ್ಲಿ ನೋವಿನಿಂದ ಹೇಳಿಕೊಂಡಿದ್ದಾರೆ.
ಈ ವಿಡಿಯೋವನ್ನು ತಮ್ಮ ವಾಟ್ಸಾಪ್ ಸ್ಟೇಟಸ್ಗೆ ಹಾಕಿದ ಬಳಿಕ, ಅವರು ಕೋಣೆಯಲ್ಲಿದ್ದ ಫ್ಯಾನ್ಗೆ ನೇಣು ಬಿಗಿದುಕೊಂಡು ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ. ಸ್ವಲ್ಪ ಸಮಯದ ನಂತರ, ಅವರ ಸೋದರ ಸಂಬಂಧಿ ನಿಕೇತ್ ಈ ಸ್ಟೇಟಸ್ ನೋಡಿ ಗಾಬರಿಗೊಂಡಿದ್ದಾರೆ. ಅವರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿ, ತಾವೂ ಕೂಡ ಆಕೆಯ ಮನೆಗೆ ಧಾವಿಸಿದ್ದಾರೆ. ಆದರೆ ಅಷ್ಟರಲ್ಲಾಗಲೇ ಮಹಿಳೆ ಪ್ರಾಣ ಬಿಟ್ಟಿದ್ದರು.
ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು, ಮೃತದೇಹವನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ. ಸದ್ಯ, ಇಡೀ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಈ ಘಟನೆ, ದಿಢೀರ್ ದುಃಖ ಮತ್ತು ಒಂಟಿತನದಿಂದ ಬಳಲುತ್ತಿರುವವರಿಗೆ ಸಕಾಲದಲ್ಲಿ ಬೆಂಬಲ ಮತ್ತು ಸಹಾಯ ಸಿಗುವುದು ಎಷ್ಟು ಮುಖ್ಯ ಅನ್ನೋ ಪ್ರಶ್ನೆಯನ್ನು ಮತ್ತೊಮ್ಮೆ ಎತ್ತಿದೆ.