ಬಾರಾಮತಿ ವಿಮಾನ ದುರಂತ: ವಿಎಸ್ಆರ್ ವೆಂಚರ್ಸ್ ಮಾಲೀಕನ ಬಂಧನಕ್ಕೆ ಜಯ್ ಪವಾರ್ ಆಗ್ರಹ.

ಪುಣೆ : ಬಾರಾಮತಿ ವಿಮಾನ ದುರಂತದಲ್ಲಿ ಮೃತ ಮಾಜಿ ಡಿಸಿಎಂ ಅಜಿತ್ ಪವಾರ್ ಅವರ ಪುತ್ರ ಜಯ್ ಪವಾರ್ ವಿಎಸ್ಆರ್ ವೆಂಚರ್ಸ್ ಮಾಲಕ ರೋಹಿತ್ ಸಿಂಗ್ ವಿರುದ್ಧ ಗಂಭೀರವಾದ ಆರೋಪವನ್ನು ಮಾಡಿದ್ದಾರೆ. ರೋಹಿತ್ ಸಿಂಗ್ ವಿಮಾನ ಹಾರಾಟದ ಸಮಯದಲ್ಲಿ ಮುಖ್ಯ ಪೈಲಟ್ ಸೀಟಿನಲ್ಲಿ ಕುಳಿತು ನಿದ್ರಿಸುತ್ತಿರುವುದನ್ನು ತೋರಿಸುವ ವೀಡಿಯೊವೊಂದನ್ನು ಹಂಚಿಕೊಂಡು ಅವರನ್ನು ತಕ್ಷಣ ಬಂಧಿಸುವಂತೆ ಒತ್ತಾಯಿಸಿದ್ದಾರೆ.
ಬಾರಾಮತಿ ವಿಮಾನ ದುರಂತದ ಬಗ್ಗೆ ತನಿಖೆ ಪೂರ್ಣಗೊಳ್ಳುವವರೆಗೆ ವಿಎಸ್ಆರ್ ವೆಂಚರ್ಸ್ನ ಎಲ್ಲಾ ವಿಮಾನಗಳ ಹಾರಾಟ ಸ್ಥಗಿತಗೊಳಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.ಜನವರಿ 28 ರಂದು ಪುಣೆ ಜಿಲ್ಲೆಯ ಬಾರಾಮತಿಯಲ್ಲಿ ಪತನವಾದ ಲಿಯರ್ಜೆಟ್ 45 ವಿಮಾನವನ್ನು ವಿಎಸ್ಆರ್ ವೆಂಚರ್ಸ್ ನಿರ್ವಹಿಸುತ್ತಿತ್ತು. ಘಟನೆಯಲ್ಲಿ ಅಜಿತ್ ಪವಾರ್ ಮತ್ತು ಇತರ ನಾಲ್ವರು ಮೃತಪಟ್ಟಿದ್ದರು.
ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೊ ಹಂಚಿಕೊಂಡಿರುವ ಜಯ್ ಪವಾರ್, ನಾವು ನಮ್ಮ ತಂದೆಯನ್ನು ಕಳೆದುಕೊಂಡೆವು, ಈ ನೋವು ನಮ್ಮೊಂದಿಗೆ ಜೀವನವಿಡೀ ಇರುತ್ತದೆ. ಈ ವೀಡಿಯೊದಲ್ಲಿ ವಿಎಸ್ಆರ್ ಮಾಲಕ ರೋಹಿತ್ ಸಿಂಗ್ ಹಾರಾಟದ ಸಮಯದಲ್ಲಿ ಮುಖ್ಯ ಪೈಲಟ್ ಸೀಟಿನಲ್ಲಿ ನಿದ್ರಿಸುತ್ತಿರುವುದನ್ನು ಕಾಣಬಹುದು. ವಿಮಾನ ಹಾರಾಟದ ವೇಳೆ ಇಂತಹ ನಿರ್ಲಕ್ಷ್ಯ ಸ್ವೀಕಾರಾರ್ಹವಲ್ಲ. ಇದು ಅತ್ಯಂತ ಗಂಭೀರ ಮತ್ತು ಆಘಾತಕಾರಿ ಘಟನೆ ಎಂದು ಹೇಳಿದ್ದಾರೆ.ನಾಗರಿಕ ವಿಮಾನಯಾನ ನಿರ್ದೇಶನಾಲಯ ಈ ವಿಷಯದಲ್ಲಿ ತಕ್ಷಣ ಮತ್ತು ಕಠಿಣ ಕ್ರಮ ಕೈಗೊಳ್ಳಬೇಕು. ರೋಹಿತ್ ಸಿಂಗ್ ಅವರನ್ನು ತಕ್ಷಣ ಬಂಧಿಸಬೇಕು. ಇದು ನನ್ನ ತಂದೆ ಮತ್ತು ಪ್ರತಿಯೊಬ್ಬ ಪ್ರಯಾಣಿಕರ ಸುರಕ್ಷತೆಗಾಗಿರುವ ಮನವಿಯಾಗಿದೆ ಎಂದು ಹೇಳಿದ್ದಾರೆ.
AAIB ವರದಿಯ ಬಗ್ಗೆ ನಿರಾಶೆ ವ್ಯಕ್ತಪಡಿಸಿದ ಜಯ್ ಪವಾರ್, ಪ್ರಾಥಮಿಕ ವರದಿಯನ್ನು ನಾನು ಓದಿದ್ದೇನೆ. ವರದಿಯು ವಿವರವಾಗಿ ಮತ್ತು ಪೂರ್ಣವಾಗಿಲ್ಲದಿರುವುದು ನನಗೆ ನೋವುಂಟು ಮಾಡಿದೆ ಮತ್ತು ನಿರಾಶೆಗೊಂಡಿದ್ದೇನೆ. ಮಹಾರಾಷ್ಟ್ರದ ಜನರು ಮತ್ತು ಅಪಘಾತದಲ್ಲಿ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರ ಕುಟುಂಬಕ್ಕೆ ವಿಮಾನ ಅಪಘಾತದ ಬಗ್ಗೆ ಪಾರದರ್ಶಕ ಮಾಹಿತಿ ದೊರೆಯಬೇಕು. ನಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಗಬೇಕು ಎಂದು ಜಯ್ ಪವಾರ್ ಹೇಳಿದ್ದಾರೆ.
