ವರ್ತೂರು ಇನ್ಸ್ಪೆಕ್ಟರ್ ಯೋಗಾನಂದ್ ವಿರುದ್ಧ ಗಂಭೀರ ಆರೋಪ: ರೌಡಿಗಳ ಜೊತೆ ಸೇರಿ ಕೊಲೆ ಕೇಸ್ ಹಳ್ಳ ಹಿಡಿಸುವ ಪ್ಲಾನ್!

ಬೆಂಗಳೂರು : ನಗರದ ವರ್ತೂರು ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಯೋಗಾನಂದ್ ಅವರು ರೌಡಿಶೀಟರ್ಗಳೊಂದಿಗೆ ಕೈಜೋಡಿಸಿ, ಕೊಲೆ ಪ್ರಕರಣವೊಂದನ್ನು ಹಳ್ಳ ಹಿಡಿಸುತ್ತಿದ್ದಾರೆ ಎಂಬ ಆತಂಕಕಾರಿ ಆರೋಪ ಕೇಳಿಬಂದಿದೆ. ಎಲ್ ಎಲ್ ಬಿ ವಿದ್ಯಾರ್ಥಿ ರೇವಂತ್ ಕೊಲೆ ಪ್ರಕರಣದ ತನಿಖೆಯಲ್ಲಿ ಉದ್ದೇಶಪೂರ್ವಕ ನಿರ್ಲಕ್ಷ್ಯ ವಹಿಸಿರುವ ಬಗ್ಗೆ ಸಂತ್ರಸ್ತ ಕುಟುಂಬ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. 2024ರ ಸೆಪ್ಟೆಂಬರ್ 18ರಂದು ತಮಿಳುನಾಡಿನ ಬಾಗಲೂರಿನಲ್ಲಿ 24 ವರ್ಷದ ಎಲ್ ಎಲ್ ಬಿ ವಿದ್ಯಾರ್ಥಿ ರೇವಂತ್ನನ್ನು ರೌಡಿಶೀಟರ್ ರೇವಾ ಮತ್ತು ಗ್ಯಾಂಗ್ ಭೀಕರವಾಗಿ ಹತ್ಯೆ ಮಾಡಿತ್ತು.ರೇವಂತ್ ತನ್ನ ಸ್ನೇಹಿತ ಸ್ಟಾಲಿನ್ ಮೇಲೆ ನಡೆದಿದ್ದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಸ್ ದಾಖಲಿಸಲು ಸಹಕರಿಸಿದ್ದ. ಈ ಕೇಸ್ ವಾಪಸ್ ಪಡೆಯುವಂತೆ ರೇವಾ ಗ್ಯಾಂಗ್ ರೇವಂತ್ ಮೇಲೆ ಒತ್ತಡ ಹೇರಿತ್ತು. ರಾಜಿ ಮಾಡಿಕೊಳ್ಳೋಣ ಎಂದು ನಂಬಿಸಿ ಕರೆಸಿಕೊಂಡ ದುಷ್ಕರ್ಮಿಗಳು, ರೇವಂತ್ನ ಚಿಕ್ಕಪ್ಪನ ಕಣ್ಣೆದುರೇ ಆತನನ್ನು ಕೊಚ್ಚಿ ಕೊಂದಿದ್ದರು.

ತಮಿಳುನಾಡು ಪೊಲೀಸರಿಂದ ವರ್ಗಾವಣೆಯಾದ ಈ ಪ್ರಕರಣದ ತನಿಖೆ ನಡೆಸಿದ ವರ್ತೂರು ಪೊಲೀಸರು, ನಿಯಮದಂತೆ 90 ದಿನಗಳೊಳಗೆ ಚಾರ್ಜ್ಶೀಟ್ ಸಲ್ಲಿಸಿಲ್ಲ. ಜೈಲಿನಲ್ಲಿದ್ದ ರೌಡಿಶೀಟರ್ ರೇವಾ ಸೇರಿದಂತೆ ಏಳು ಮಂದಿ ಆರೋಪಿಗಳು ಸುಲಭವಾಗಿ ಜಾಮೀನು ಪಡೆದು ಹೊರಬಂದಿದ್ದಾರೆ. ಜಾಮೀನಿನ ಮೇಲೆ ಹೊರಬಂದ ರೌಡಿಶೀಟರ್ ರೇವಾಗೆ ಪ್ರತಿದಿನ ಠಾಣೆಗೆ ಬಂದು ಸಹಿ ಹಾಕುವಂತೆ ನ್ಯಾಯಾಲಯ ಆದೇಶಿಸಿತ್ತು. ಆದರೆ, ಇನ್ಸ್ಪೆಕ್ಟರ್ ಯೋಗಾನಂದ್ ಪ್ರಭಾವದಿಂದ ರೇವಾ ಠಾಣೆಗೆ ಬರುತ್ತಿಲ್ಲ. ಬದಲಾಗಿ, ಪೊಲೀಸರೇ ರೇವಾನ ಅಪಾರ್ಟ್ಮೆಂಟ್ಗೆ ಹೋಗಿ ಸಹಿ ಮಾಡಿಸಿಕೊಂಡು ಬರುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಕೊಲೆಯಾದ ರೇವಂತ್ ಕುಟುಂಬದವರಿಗೆ ಮತ್ತು ಸಾಕ್ಷಿಗಳಿಗೆ ರೌಡಿಗಳಿಂದ ಜೀವ ಬೆದರಿಕೆ ಇತ್ತು. ಈ ಬಗ್ಗೆ ರಕ್ಷಣೆ ಕೋರಿದರೂ ಇನ್ಸ್ಪೆಕ್ಟರ್ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿದ್ದಾರೆ ಎನ್ನಲಾಗಿದೆ. ನ್ಯಾಯ ಸಿಗಬೇಕಿದ್ದ ಠಾಣೆಯೇ ಆರೋಪಿಗಳ ಪರವಾಗಿ ನಿಂತಿರುವುದು ಕುಟುಂಬದವರನ್ನು ಕಂಗಾಲಾಗಿಸಿದೆ. ರೌಡಿಶೀಟರ್ ಜೊತೆ ಸಖ್ಯ ಬೆಳೆಸಿರುವ ಇನ್ಸ್ಪೆಕ್ಟರ್ ವಿರುದ್ಧ ಹಿರಿಯ ಅಧಿಕಾರಿಗಳು ತನಿಖೆ ನಡೆಸಿ, ನ್ಯಾಯ ಒದಗಿಸಬೇಕೆಂದು ರೇವಂತ್ ಪೋಷಕರು ಒತ್ತಾಯಿಸಿದ್ದಾರೆ.