ರಸ್ತೆ ಗುಂಡಿಗೆ ಮಗು ಬಲಿ; ಕೆ.ಆರ್.ಪುರಂನಲ್ಲಿ ಪೋಷಕರ ಆಕ್ರಂದನ

ಬೆಂಗಳೂರು ಪೂರ್ವ ತಾಲೂಕಿನ ಹಾಲೆಹಳ್ಳಿ ರಸ್ತೆಯಲ್ಲಿ ಸಂಭವಿಸಿದೆ. ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಮಗುವಿನೊಂದಿಗೆ ದೇವಸ್ಥಾನಕ್ಕೆ ಹೋಗಿ ಬರುತ್ತಿದ್ದ ದಂಪತಿಗೆ ವಿಧಿ ಕ್ರೂರವಾಗಿ ಎರಗಿದೆ. ಕಿತ್ತಗನೂರು ಪಂಚಾಯತ್ ವ್ಯಾಪ್ತಿಯ ಹಾಲೆಹಳ್ಳಿ ರಸ್ತೆಯಲ್ಲಿ ಪಿಡಬ್ಲ್ಯೂಡಿ ವತಿಯಿಂದ ನಡೆಯುತ್ತಿದ್ದ ರಸ್ತೆ ಕಾಮಗಾರಿ ಅರ್ಧಕ್ಕೆ ನಿಂತಿದ್ದು, ರಸ್ತೆಯುದ್ದಕ್ಕೂ ಹರಡಿದ್ದ ಕಲ್ಲು-ಮಣ್ಣಿನಿಂದಾಗಿ ಬೈಕ್ ಸ್ಕಿಡ್ ಆಗಿದೆ. ಈ ವೇಳೆ ತಾಯಿ ಮಡಿಲಲ್ಲಿದ್ದ ಎರಡು ವರ್ಷದ ತ್ರಿಶೂಲ್ ಎಂಬ ಮಗು ಕೆಳಗೆ ಬಿದ್ದಿದೆ. ದುರದೃಷ್ಟವಶಾತ್ ಅದೇ ಸಮಯದಲ್ಲಿ ಬಂದ ಕಾರು ಮಗುವಿನ ತಲೆ ಮೇಲೆ ಹರಿದ ಪರಿಣಾಮ, ಮಗು ಸ್ಥಳದಲ್ಲೇ ಪ್ರಾಣ ಬಿಟ್ಟಿದೆ.


ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬಲಿಯಾದ ತ್ರಿಶೂಲ್
ಮಾರ್ಗೊಂಡನಹಳ್ಳಿ ದೇವಸ್ಥಾನಕ್ಕೆ ಹೋಗಿ ವಾಪಸ್ ಆಗುತ್ತಿದ್ದ ಈ ಕುಟುಂಬದ ಪಾಲಿಗೆ ಶಿವರಾತ್ರಿಯೇ ಕರಾಳ ರಾತ್ರಿಯಾಗಿದೆ. ‘ರಸ್ತೆ ಕಾಮಗಾರಿ ಸರಿಯಾಗಿ ಮಾಡದ ಕಾರಣವೇ ಬೈಕ್ ಸ್ಕಿಡ್ ಆಗಿದೆ, ಇದಕ್ಕೆ ಇಲಾಖೆಯೇ ನೇರ ಹೊಣೆ’ ಎಂದು ಸ್ಥಳೀಯರು ಕಿಡಿಕಾರಿದ್ದಾರೆ. ಅಪಘಾತದ ಭೀಕರ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ನೋಡುಗರ ಕಣ್ಣಾಲಿಗಳನ್ನು ತೇವಗೊಳಿಸುತ್ತಿವೆ. ಕೆ.ಆರ್.ಪುರಂ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ನಗರವಾಸಿಗಳ ಆಕ್ರೋಶದ ಕಟ್ಟೆ
ಬೆಂಗಳೂರಿನ ರಸ್ತೆ ಗುಂಡಿಗಳ ಬಗ್ಗೆ ಹೈಕೋರ್ಟ್ ಪದೇ ಪದೇ ಎಚ್ಚರಿಕೆ ನೀಡುತ್ತಿದ್ದರೂ ಅಧಿಕಾರಿಗಳು ಮಾತ್ರ ಎಚ್ಚೆತ್ತುಕೊಳ್ಳುತ್ತಿಲ್ಲ. ‘ನಮ್ಮ ತೆರಿಗೆ ಹಣಕ್ಕೆ ಪ್ರತಿಯಾಗಿ ನಮಗೆ ಸಿಗುತ್ತಿರುವುದು ಸಾವುಗಳೇ?’ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. ಅಮಲಾ ಮತ್ತು ಪುಟ್ಟ ತ್ರಿಶೂಲ್ ಸಾವಿಗೆ ಕಾರಣರಾದ ಅಧಿಕಾರಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ಕೂಡಲೇ ಹದಗೆಟ್ಟ ರಸ್ತೆಗಳನ್ನು ಸರಿಪಡಿಸಬೇಕು ಎಂಬ ಆಗ್ರಹ ಕೇಳಿಬಂದಿದೆ.