ಪೂಜೆ ಹೆಸರಲ್ಲಿ ವಿಷವಿಕ್ಕಿ ಲೂಟಿ: ದೆಹಲಿಯ ತ್ರಿವಳಿ ಕೊಲೆಗಾರ ‘ಲಡ್ಡು ಬಾಬಾ’ ಅರೆಸ್ಟ್!

ದೆಹಲಿ: ರಾಷ್ಟ್ರ ರಾಜಧಾನಿಯ ಪೀರಗಢಿ ಫ್ಲೈಓವರ್ ಮೇಲೆ ನಿಲ್ಲಿಸಲಾಗಿದ್ದ ಕಾರಿನಲ್ಲಿ ಇಬ್ಬರು ಪುರುಷರು ಮತ್ತು ಓರ್ವ ಮಹಿಳೆಯ ಶವವಾಗಿ ಪತ್ತೆಯಾದ ಪ್ರಕರಣಕ್ಕೆ ಈಗ ಹೊಸ ತಿರುವು ಸಿಕ್ಕಿದೆ. ಘಟನೆಗೂ ಮುನ್ನ ಮೃತರೊಂದಿಗೆ ಕಾರಿನಲ್ಲಿ ಕುಳಿತಿದ್ದರು ಎನ್ನಲಾದ ಸ್ವಯಂ ಘೋಷಿತ ‘ಬಾಬಾ’ನನ್ನು ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.

ಕಳೆದ ಭಾನುವಾರ ಪೀರಗಢಿ ಫ್ಲೈಓವರ್ ಬಳಿ ನಿಂತಿದ್ದ ಕಾರಿನೊಳಗೆ ರಣಧೀರ್ (76), ಶಿವ ನರೇಶ್ (42) ಮತ್ತು ಲಕ್ಷ್ಮಿ (40) ಎಂಬುವವರ ಶವಗಳು ಪತ್ತೆಯಾಗಿದ್ದವು. ದೇಹದ ಮೇಲೆ ಯಾವುದೇ ಗಾಯದ ಗುರುತುಗಳಿಲ್ಲದ ಕಾರಣ, ಪೊಲೀಸರು ಇದನ್ನು ಆರಂಭದಲ್ಲಿ ಆತ್ಮಹತ್ಯೆ ಎಂದು ಶಂಕಿಸಿದ್ದರು. ಆದರೆ ತಾಂತ್ರಿಕ ತನಿಖೆ ಮತ್ತು ಕುಟುಂಬಸ್ಥರ ಹೇಳಿಕೆಗಳು ಈ ಪ್ರಕರಣವನ್ನು ವ್ಯವಸ್ಥಿತ ಕೊಲೆ ಎಂದು ಸಾಬೀತುಪಡಿಸಿವೆ.

ತನಿಖೆ ವೇಳೆ ಹೊರಬಿದ್ದ ಸತ್ಯ:
ಬಂಧಿತ ಆರೋಪಿ ಕಮ್ರುದ್ದೀನ್ ಅಲಿಯಾಸ್ ‘ಬಾಬಾ’ ತಾಂತ್ರಿಕ ವಿದ್ಯೆಯ ಮೂಲಕ ಹಣದ ಮಳೆ (ಧನವೃಷ್ಟಿ) ಸುರಿಸುವುದಾಗಿ ಈ ಮೂವರನ್ನು ನಂಬಿಸಿದ್ದ. ಇವನ ಮಾತು ನಂಬಿದ ಸಂತ್ರಸ್ತರು ಪೂಜೆಗಾಗಿ 2 ಲಕ್ಷ ರೂಪಾಯಿ ಹಣ ಮತ್ತು ಮದ್ಯದೊಂದಿಗೆ ಬಾಬಾನನ್ನು ಭೇಟಿಯಾಗಿದ್ದಾರೆ. ಇದಾದ ಬಳಿಕ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಕಮ್ರುದ್ದೀನ್ ತಾನು ಮೊದಲೇ ಸಿದ್ಧಪಡಿಸಿಕೊಂಡು ಬಂದಿದ್ದ ವಿಷ ಬೆರೆಸಿದ ಲಡ್ಡುಗಳನ್ನು ಇವರಿಗೆ ತಿನ್ನಿಸಿದ್ದಾನೆ. ಲಡ್ಡು ತಿಂದ ಮೂವರು ಪ್ರಜ್ಞೆ ತಪ್ಪುತ್ತಿದ್ದಂತೆ, ಅವರ ಬಳಿಯಿದ್ದ ಲಕ್ಷಾಂತರ ರೂಪಾಯಿ ನಗದನ್ನು ದೋಚಿದ ಬಾಬಾ ಅಲ್ಲಿಂದ ಪರಾರಿಯಾಗಿದ್ದ.
ಘಟನಾ ಸ್ಥಳದಲ್ಲಿದ್ದ ಮೊಬೈಲ್ ಕರೆಗಳ ವಿವರ ಮತ್ತು ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದಾಗ, ಕಾರಿನಲ್ಲಿ ಈ ಮೂವರ ಜೊತೆಗೆ ನಾಲ್ಕನೇ ವ್ಯಕ್ತಿಯೊಬ್ಬರ ಉಪಸ್ಥಿತಿ ಕಂಡುಬಂದಿತ್ತು. ಈ ಸುಳಿವಿನ ಆಧಾರದ ಮೇಲೆ ಉತ್ತರ ಪ್ರದೇಶದ ಫಿರೋಜಾಬಾದ್ ನಿವಾಸಿಯಾದ ಕಮ್ರುದ್ದೀನ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯಾಂಶ ಬೆಳಕಿಗೆ ಬಂದಿದೆ.
ಸದ್ಯ ಪೊಲೀಸರು ಆರೋಪಿಯನ್ನು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದು ಈತನ ಜೊತೆಗೆ ಬೇರೆ ಯಾರಾದರೂ ಇದ್ದಾರೆಯೇ ಎಂಬ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.