ಸಚಿವರ ಮಾಧ್ಯಮಗೋಷ್ಠಿಗೆ ರಾಹುಲ್ ಗಾಂಧಿ ‘ಅನಿರೀಕ್ಷಿತ’ ಭೇಟಿ; ವಿಡಿಯೋ ವೈರಲ್.

ಹೊಸದಿಲ್ಲಿ: ಸಂಸತ್ ಹೊರಗೆ ಬುಧವಾರ ನಡೆದ ಸ್ವಾರಸ್ಯಕರ ಘಟನೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸಂಸತ್ ಮುಂದೆ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದಂತೆ ರಾಹುಲ್ ಗಾಂಧಿ ಬರುತ್ತಿದ್ದಂತೆ ಗಲಿಬಿಲಿಗೊಂಡು ಸಚಿವರಾದ ಪ್ರಹ್ಲಾದ್ ಜೋಶಿ, ಅಶ್ವಿನಿ ವೈಷ್ಣವ್ ತೆರಳಿರುವುದು ಜನರ ಗಮನ ಸೆಳೆದಿದೆ.

ವೈರಲ್ ಆಗಿರುವ ವೀಡಿಯೊದಲ್ಲಿ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಮತ್ತು ಅಶ್ವಿನಿ ವೈಷ್ಣವ್ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿರುವುದು ಕಾಣಿಸುತ್ತದೆ. ಈ ವೇಳೆ “ರಾಹುಲ್ ಗಾಂಧಿ ಆರೋಪ ಮಾಡುವ ಮೊದಲು ದೃಢೀಕರಿಸಬೇಕು” ಎಂಬ ಮಾತು ಕೇಳಿಸುತ್ತದೆ. ಅದೇ ಸಮಯದಲ್ಲಿ ರಾಹುಲ್ ಗಾಂಧಿ ಅಲ್ಲಿಗೆ ಬಂದು ನಗುತ್ತಾ “ಬನ್ನಿ, ಒಟ್ಟಿಗೆ ಮಾತನಾಡೋಣ”, “ವ್ಯಾಪಾರ ಒಪ್ಪಂದದ ಬಗ್ಗೆ ಒಟ್ಟಿಗೆ ಚರ್ಚಿಸೋಣ” ಎಂದು ಹೇಳುವ ದೃಶ್ಯ ಗೋಚರಿಸುತ್ತದೆ. ಈ ಸಂದರ್ಭದಲ್ಲೇ ರಾಹುಲ್ ಗಾಂಧಿ ಪ್ರಹ್ಲಾದ್ ಜೋಶಿ ಅವರ ಕೈ ಹಿಡಿಯಲು ಮುಂದಾಗುವ ಕ್ಷಣವೂ ವೀಡಿಯೊದಲ್ಲಿ ಕಾಣುತ್ತದೆ.
ಆ ಕ್ಷಣದಲ್ಲಿ ಸಚಿವರು ಸ್ವಲ್ಪ ಗೊಂದಲಕ್ಕೊಳಗಾದಂತೆ ತೋರುತ್ತಾರೆ. ವೀಡಿಯೊದಲ್ಲಿ ಪ್ರಹ್ಲಾದ್ ಜೋಶಿ ತಮ್ಮ ಕೈಯನ್ನು ಎಳೆದುಕೊಂಡು ಸ್ಥಳದಿಂದ ತೆರಳುವುದು ಕಂಡುಬಂದಿದೆ. ಅದೇ ವೇಳೆ ಅಶ್ವಿನಿ ವೈಷ್ಣವ್ ಕೂಡ ಅಲ್ಲಿಂದ ತೆರಳುವ ದೃಶ್ಯ ದಾಖಲಾಗಿದೆ. ಹತ್ತಿರದಲ್ಲಿದ್ದ ಕೆಲವರು ನಗುತ್ತಿರುವ ಕ್ಷಣಗಳೂ ಗೋಚರಿಸುತ್ತವೆ.
ಈ ಘಟನೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಜನರಿಂದ ವಿಭಿನ್ನ ಅಭಿಪ್ರಾಯಗಳು ವ್ಯಕ್ತವಾಗಿವೆ. ಕೆಲವರು ಇದನ್ನು ರಾಹುಲ್ ಗಾಂಧಿಯ ಆತ್ಮವಿಶ್ವಾಸದ ಪ್ರದರ್ಶನವೆಂದು ವ್ಯಾಖ್ಯಾನಿಸಿದರೆ, ಇನ್ನು ಕೆಲವರು ಸಚಿವರ ನಡೆಗೆ ಬೇರೆ ಬೇರೆ ಅರ್ಥಗಳನ್ನು ನೀಡಿದ್ದಾರೆ. ಹಾಸ್ಯ ಟೀಕೆ ಹಾಗೂ ರಾಜಕೀಯ ವಿಶ್ಲೇಷಣೆಗಳ ಮಿಶ್ರಣವಾಗಿ ಅನೇಕ ಪೋಸ್ಟ್ಗಳು ಸಾಮಾಜಿಕ ಜಾಲತಾಣಗಳಲ್ಲಿ ಕಂಡು ಬಂದಿದೆ.

ಒಬ್ಬರು ಬಳಕೆದಾರರು, “ಬಿಜೆಪಿ ಮಂತ್ರಿಗಳು ಮಾತನಾಡುತ್ತಿದ್ದಾಗ ರಾಹುಲ್ ಗಾಂಧಿ ಬಂದ ತಕ್ಷಣ, ಇಬ್ಬರೂ ವಂದೇ ಭಾರತ್ ವೇಗದಲ್ಲಿ ತೆರಳಿದರು ಎಂದು ಪೋಸ್ಟ್ ಮಾಡಿದ್ದಾರೆ.
ಇನ್ನೊಬ್ಬರು, “ರಾಹುಲ್ ಗಾಂಧಿ ಇತ್ತೀಚಿನ ದಿನಗಳಲ್ಲಿ ಆಕ್ರಮಣಕಾರಿ ಮನಸ್ಥಿತಿಯಲ್ಲಿದ್ದಾರೆ. ಬಿಜೆಪಿ ನಾಯಕರಿಗೆ ನಿರಂತರವಾಗಿ ಸವಾಲು ಹಾಕುತ್ತಿದ್ದಾರೆ. ಒಂದು ಹಂತದಲ್ಲಿ ಪ್ರಹ್ಲಾದ್ ಜೋಶಿ ಅವರ ಕೈ ಹಿಡಿದು ಚರ್ಚೆಗೆ ಕರೆದರು, ಆದರೆ ಅವರು ತಪ್ಪಿಸಿಕೊಂಡು ಹೊರಟರು”, ಎಂದು ತಿಳಿಸಿದ್ದಾರೆ.
ಮತ್ತೊಬ್ಬರು, ರಾಹುಲ್ ಗಾಂಧಿ ಬಿಜೆಪಿ ನಾಯಕರನ್ನು ನಿದ್ದೆಯಿಂದ ಎಬ್ಬಿಸಿದಂತಾಯಿತು. ಬಿಜೆಪಿ ಸಚಿವರಾದ ಪ್ರಹ್ಲಾದ್ ಜೋಶಿ ಮತ್ತು ಅಶ್ವಿನಿ ವೈಷ್ಣವ್ ಅವರು ಮಾಧ್ಯಮಗಳೊಂದಿಗೆ ಮಾತನಾಡುತ್ತಾ, “ರಾಹುಲ್ ಗಾಂಧಿ ಆರೋಪ ಮಾಡುವ ಮೊದಲು ಅವನ್ನು ದೃಢೀಕರಿಸಬೇಕು” ಎಂದು ಹೇಳುತ್ತಿದ್ದರು. ಅವರ ಬಳಿಗೆ ರಾಹುಲ್ ಗಾಂಧಿ ಸ್ವತಃ ಬಂದು, “ನಾವು ಈ ವಿಷಯವನ್ನು ಒಟ್ಟಿಗೆ ಚರ್ಚಿಸೋಣ” ಎಂದು ಹೇಳಿದಾಗ, ಇಬ್ಬರು ಸಚಿವರು ಒಮ್ಮೆಲೇ ತಬ್ಬಿಬ್ಬಾದರು. ಇದು ರಾಹುಲ್ಸಿ ಗಾಂಧಿ ಶೈಲಿ”, ಎಂದು ಹೇಳಿದ್ದಾರೆ.

ಇನ್ನೊಬ್ಬ ಬಳಕೆದಾರರು,” ಬ್ರೇಕಿಂಗ್: ಬಿಜೆಪಿ ಸಚಿವರು ರಾಹುಲ್ ಗಾಂಧಿಯನ್ನು ಎದುರಿಸಲು ಹಿಂಜರಿದರು
ಎಂಬ ಆರೋಪ ಕೇಳಿ ಬಂದಿದೆ. ಪ್ರಹ್ಲಾದ್ ಜೋಶಿ ಹಾಗೂ ಅಶ್ವಿನಿ ವೈಷ್ಣವ್ ಅವರು ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದ ವೇಳೆ ರಾಹುಲ್ ಗಾಂಧಿ ಅಲ್ಲಿಗೆ ಆಗಮಿಸಿದರು. ವ್ಯಾಪಾರ ಒಪ್ಪಂದದ ಕುರಿತು ಚರ್ಚಿಸಲು ತಮ್ಮೊಂದಿಗೆ ಬರಲು ಅವರು ಆಹ್ವಾನಿಸಿದರು. ಈ ವೇಳೆ ಪ್ರಹ್ಲಾದ್ ಜೋಶಿ ಓಡಿಹೋದರು” ಎಂದು ವ್ಯಂಗ್ಯವಾಡಿದ್ದಾರೆ.