ಆನಂದಪುರ: ಬೆಳ್ಳಿ-ಬಂಗಾರ ಕ್ಲೀನ್ ಮಾಡುವ ಸೋಗಿನಲ್ಲಿ ಬಂದ ಕಳ್ಳರಿಂದ 2 ಲಕ್ಷದ ಚಿನ್ನದ ಸರ ಲೂಟಿ!

ಆನಂದಪುರ: ವ್ಯಾಪರ ಸೋಗಿನಲ್ಲಿ ಬಂದ ಕಳ್ಳರು ಹಾಡುಹಗಲೇ ಚಿನ್ನದ ಸರವನ್ನು ಎಗರಿಸಿ ಪರಾರಿಯಾದ ಘಟನೆ ತಾಲ್ಲೂಕಿನ ಚೆನ್ನಕೊಪ್ಪ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ನಿವಾಸಿ ರತ್ನಾವತಿ ಎಂಬುವವರೇ ಮೋಸಹೋದ ಮಹಿಳೆ. ಇವರ 2 ಲಕ್ಷ ರೂಪಾಯಿ ಮೌಲ್ಯದ ಸುಮಾರು 31 ಗ್ರಾಂ ತೂಕದ ಚಿನ್ನದ ಸರವನ್ನು ಕಳ್ಳರು ಸಿನಿಮೀಯ ರೀತಿಯಲ್ಲಿ ಎಗರಿಸಿದ್ದಾರೆ.

ನಡೆದಿದ್ದೇನು?
ಜ.20 ಮಂಗಳವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ರತ್ನಾವತಿ ಎಂಬುವರ ಮನೆ ಬಾಗಿಲಿಗೆ ಬಂದಂತಹ 35 ರಿಂದ 40 ವರ್ಷ ವಯಸ್ಸಿನ ವ್ಯಕ್ತಿಯೊಬ್ಬ ಪಾತ್ರೆ ತೊಳೆಯುವ ಪೌಡರ್ ಎಂದು ಹೇಳಿ ಬಿಳಿ ಪೌಡರ್ ಅನ್ನು ಸ್ಯಾಂಪಲ್ ನೀಡುತ್ತಾನೆ. ಅಷ್ಟರಲ್ಲಿ ಬಂದ ಮತ್ತೊಬ್ಬ ವ್ಯಕ್ತಿ ಬೆಳ್ಳಿ ಬಂಗಾರ ತೊಳೆಯುವ ಪೌಡರ್ ಅಂತ ಹೇಳಿ ಕೆಂಪು ಪೌಡರ್ ನೀಡುತ್ತಾನೆ. ನಂತರ ಕೊರಳಲ್ಲಿದ್ದ ಸರವನ್ನು ತೆಗೆಯಲು ಹೇಳುತ್ತಾನೆ. ಆದರೆ ನಾನು ಕೊರಳಲ್ಲಿದ್ದ ಸರವನ್ನು ತೆಗೆಯಲು ನಿರಾಕರಿಸಿದಾಗ , ಅವರು ಆ ಪೌಡರ್ ಅನ್ನು ಚಿನ್ನದ ಸರಕ್ಕೆ ಹಚ್ಚಲು ಹೇಳಿದರು. ನಾನು ಆ ಪೌಡರ್ ಅನ್ನು ಚಿನ್ನದ ಸರಕ್ಕೆ ಹಚ್ಚಿದಾಗ ಸರ ಕಪ್ಪು ಬಣ್ಣಕ್ಕೆ ತಿರುಗಿತು.ಕಳ್ಳರು ಒಂದು ಬೌಲ್ ತರಲು ಹೇಳುತ್ತಾರೆ. ಅದಕ್ಕೆ ನೀರು ಮತ್ತು ಅರಿಶಿಣ ಪುಡಿ ಹಾಕುತ್ತಾರೆ. ನಂತರ ಅದಕ್ಕೆ ಕಪ್ಪಾದ ಚಿನ್ನದ ಸರವನ್ನು ಮಹಿಳೆ ಹಾಕುತ್ತಾರೆ. ನಂತರ ಕಳ್ಳರು ಆ ಬೌಲ್ ಗೆ ಪೌಡರ್ ಹಾಕಿ ಸ್ವಲ್ಪ ಸಮಯದಲ್ಲಿ ಸರಿಯಾಗುತ್ತದೆ ಅಂತ ಹೇಳಿ ಬೈಕನ್ನು ಹತ್ತಿ ಹೊರಟು ಹೋಗುತ್ತಾರೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಮಾಯವಾದ ಚಿನ್ನದ ಸರ
ಕಳ್ಳರು ಹೋದ ನಂತರ ಮಹಿಳೆ ಬೌಲ್ ನಲ್ಲಿ ಇದ್ದ ನೀರು ಚೆಲ್ಲಿ ನೋಡಿದಾಗ ಚಿನ್ನದ ಸರ ಮಾಯವಾಗಿತ್ತು. 4 ವರ್ಷಗಳ ಹಿಂದೆ ಮಾಡಿದ 31 ಗ್ರಾಂ ತೂಕದ ಸುಮಾರು 2 ಲಕ್ಷ ಬೆಲೆ ಬಾಳುವ ಚಿನ್ನದ ಸರ ಕಳ್ಳರ ಪಾಲಾಗಿದೆ.
ಸ್ಥಳಕ್ಕೆ ಭೇಟಿ ನೀಡಿದ ಪೋಲಿಸ್ ಅಧಿಕಾರಿಗಳು
ಕೃತ್ಯ ನಡೆದ ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ರಮೇಶ್ ಕುಮಾರ್ ಎಸ್, ಆನಂದಪುರ ಪೊಲೀಸ್ ಠಾಣೆಯ ಪಿಎಸ್ಐ ಪ್ರವೀಣ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆನಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ