ಸರ್ಕಾರದಿಂದ ಹಸಿರು ನಿಶಾನೆ; ಆರ್ಸಿಬಿ ಅಭಿಮಾನಿಗಳಲ್ಲಿ ಹೆಚ್ಚಿದ ಸಂಭ್ರಮ

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಅಭಿಮಾನಿಗಳಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದ ಬೆನ್ನಲ್ಲೇ, ಚಿನ್ನಸ್ವಾಮಿ ಕ್ರಿಕೆಟ್ ಮೈದಾನದ (Chinnaswamy Cricket Stadium) ಕಾಮಗಾರಿಯ ವೇಗವನ್ನ ಹೆಚ್ಚಿಸಲಾಗಿದೆ. ಕಾಲ್ತುಳಿತ ದುರಂತ ನಡೆದು ಸಾವು ಆದ ಜಾಗದಲ್ಲಿ ಗೋಡೆ ಒಡೆದು, ಎಂಟ್ರಿ ಎಕ್ಸಿಟ್ಗೆ ವಿಶಾಲವಾದ ಜಾಗದ ವ್ಯವಸ್ಥೆ ಮಾಡಲಾಗ್ತಿದೆ.

ಕಾಲ್ತುಳಿತ ದುರಂತದ ಬಳಿಕ ಮುಚ್ಚಲಾಗಿದ್ದ ಬೆಂಗಳೂರಿನ (Bengaluru) ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮತ್ತೆ ಅಂತಾರಾಷ್ಟ್ರೀಯ ಹಾಗೂ ಐಪಿಎಲ್ ಪಂದ್ಯಗಳನ್ನ (IPL Match) ನಡೆಸಲು ರಾಜ್ಯ ಸರ್ಕಾರ ಷರತ್ತುಬದ್ಧ ಅನುಮತಿ ನೀಡಿದೆ. ಈ ಬಾರಿಯ ಐಪಿಎಲ್ ಉದ್ಘಾಟನಾ ಪಂದ್ಯ ಚಿನ್ನಸ್ವಾಮಿಯಲ್ಲಿಯೇ ನಡೆಯುವ ಸಾಧ್ಯತೆಗಳಿದ್ದು, ಅದಕ್ಕಾಗಿ ಆರ್ಸಿಬಿ ಆಡಳಿತ ಮಂಡಳಿ, ಕೆಎಸ್ಸಿಎ (KSCA) ಸಿದ್ಧತೆ ಮಾಡಿಕೊಳ್ತಿದೆ

ಆರ್ಸಿಬಿ ವ್ಯವಸ್ಥಾಪನಾ ಮಂಡಳಿ ಜನ ದಟ್ಟಣೆ ನಿಯಂತ್ರಿಸಲು ಹಾಗೂ ನಿಗಾ ವಹಿಸಲು ಚಿಕ್ಕದಾದ ಗೋಡೆಗಳನ್ನ ಒಡೆದು, ಬೃಹತ್ ಗೇಟ್ ನಿರ್ಮಾಣಕ್ಕೆ ಮುಂದಾಗಿದೆ. ಅಲ್ಲದೇ 350 AI ಕ್ಯಾಮರಾ ಅಳವಡಿಕೆಗೆ ಮುಂದಾಗಿದೆ. ಕಳೆದ ವರ್ಷ ಕಾಲ್ತುಳಿತ ದುರಂತ ನಡೆದ ಗೇಟ್ನ ಬಳಿಯೇ ಗೋಡೆ ಒಡೆಯುವ ಕಾರ್ಯ ಶುರು ಮಾಡಿದೆ.
ಗೇಟ್ ನಂ.18, 19 ರ ಬಳಿ ಕಾಮಗಾರಿ ಶುರು ಮಾಡಿದ್ದು, ಎಂಟ್ರಿ- ಎಕ್ಸಿಟ್ಗೆ ಅಗಲವಾದ ಜಾಗದ ವ್ಯವಸ್ಥೆ ಮಾಡಲಾಗ್ತಿದೆ. ಮುಖ್ಯರಸ್ತೆಯಲ್ಲಿ ಈ ಗೇಟ್ಗಳು ಇರೋದ್ರಿಂದ ವಾಹನಗಳ ಸಂಚಾರಕ್ಕೆ ಸಮಸ್ಯೆಯಾಗದಂತೆ ಹಾಗೂ ಜನ ದಟ್ಟಣೆ ನಿಯಂತ್ರಿಸಲು ಬೇಕಾದ ಸ್ಥಳಾವಕಾಶ ಮಾಡಿಕೊಳ್ತಿದೆ. ಇನ್ನೂ ಬೆಂಗಳೂರಿನ ಪಂದ್ಯಗಳು ಬೆಂಗಳೂರಿನಲ್ಲೇ ನಡೆಯಬೇಕು. ಆದ್ರೆ ಪೊಲೀಸ್ ಇಲಾಖೆ, ಮೈದಾನದ ಆಡಳಿತ ಮಂಡಳಿತ ಮುಂಜಾಗೃತ ಕ್ರಮವಾಗಿ ತೆಗೆದುಕೊಳ್ಳಬೇಕೆಂದು ಆರ್ಸಿಬಿ ಅಭಿಮಾನಿಯೊಬ್ಬರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಫ್ರಾಂಚೈಸಿಯಿಂದಲೇ ಭದ್ರತಾ ಸಿಬ್ಬಂದಿ ವ್ಯವಸ್ಥೆ
IPL ಆರಂಭಕ್ಕೆ ಇನ್ನೂ 65 ದಿನ ಬಾಕಿಯಿದ್ದು, KSCA ತ್ವರಿತಗತಿಯಲ್ಲಿ ಸುರಕ್ಷತೆ, ಭದ್ರತೆಗೆ ಸಂಬಂಧಪಟ್ಟಂತೆ ಕ್ರಮಗಳನ್ನ ತೆಗೆದುಕೊಳ್ತಿದ್ದಾರೆ. ಅಗ್ನಿಶಾಮಕ, ಜಿಬಿಎ, ಲೋಕೋಪಯೋಗಿ, ಜಲಮಂಡಳಿ ಅಧಿಕಾರಿಗಳಿಗೆ ಸುರಕ್ಷತಾ ಕ್ರಮಗಳ ಅಳವಡಿಕೆ ಮಾಡಿಕೊಂಡಿರುವ ಕುರಿತು ರಿಪೋರ್ಟ್ ನೀಡಿದ್ದಾರೆ. ಇತ್ತ ನಾಲ್ಕುವರೆ ಕೋಟಿ ರೂಪಾಯಿ ವೆಚ್ಚದಲ್ಲಿ ಆರ್ಸಿಬಿ ಆಡಳಿತ ಮಂಡಳಿ ಎಐ ಕ್ಯಾಮರಾ ಅಳವಡಿಕೆ ಮಾಡಿ, ಜನ ದಟ್ಟಣೆಯಾಗದಂತೆ ಆಡಳಿತ ಮಂಡಳಿಯಿಂದಲೇ ಭದ್ರತಾ ಸಿಬ್ಬಂದಿಯನ್ನ ನಿಯೋಜಿಸಲು ಮುಂದಾಗಿದೆ.