ಕೋಲ್ಕತ್ತಾ: ಐ-ಪಿಎಸಿ ಕಚೇರಿ ಮೇಲೆ ಇಡಿ ದಾಳಿ; ಕಡತ ಹಿಡಿದು ಓಡಿದ ಸಿಎಂ ಮಮತಾ ಬ್ಯಾನರ್ಜಿ!

ಕೋಲ್ಕತ್ತಾ: ವಿಧಾನಸಭಾ ಚುನಾವಣೆಯ ದಿನಗಳು ಹತ್ತಿರವಾಗುತ್ತಿದ್ದಂತೆ ಪಶ್ಚಿಮ ಬಂಗಾಳದಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. ಜಾರಿ ನಿರ್ದೇಶನಾಲಯವು ಇಂದು (ಗುರುವಾರ) ಕೋಲ್ಕತ್ತಾದ (Kolkata) ಹಲವು ಕಡೆಗಳಲ್ಲಿ ದಾಳಿ (ED Raid) ನಡೆಸಿದೆ.

ಜಾರಿ ನಿರ್ದೇಶನಾಲಯವು ಕೋಲ್ಕತ್ತಾದ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (I-PAC) ಕಚೇರಿ ಮತ್ತು ಅದರ ಹಿರಿಯ ಅಧಿಕಾರಿ ಪ್ರತೀಕ್ ಜೈನ್ ನಿವಾಸ ಸೇರಿದಂತೆ ಹಲವು ಸ್ಥಳಗಳಲ್ಲಿ ದಾಳಿ ನಡೆಸಿದೆ. ನಗರದಾದ್ಯಂತ ಕನಿಷ್ಠ 5 ಸ್ಥಳಗಳಲ್ಲಿ ಇಡಿ ತಂಡ ದಾಳಿ ನಡೆಸಿದೆ. ಆದ್ರೆ ಈವರೆಗೆ ಯಾವುದೇ ಮಾಹಿತಿಯನ್ನ ಬಹಿರಂಗಪಡಿಸಿಲ್ಲ.

ವಿಷಯ ತಿಳಿಯುತ್ತಿದ್ದಂತೆ ಐ-ಪಿಎಸಿ ಕಚೇರಿಗೆ ಬಂದ ಸಿಎಂ ಮಮತಾ ಬ್ಯಾನರ್ಜಿ Mamata Banerjee), ಪ್ರಮುಖ ಮಾಹಿಯುಳ್ಳ ಫೈಲ್ವೊಂದನ್ನ ಹೊತ್ತೊಯ್ದಿದ್ದಾರೆ. ಹಸಿರು ಬಣ್ಣದ ಕಡತ ಹಿಡಿದು ಹೋಗುತ್ತಿರುವ ಫೋಟೋ & ವಿಡಿಯೋ ಕ್ಯಾಮೆರಾದಲ್ಲೂ ಸೆರೆಯಾಗಿದೆ.

ಇದಕ್ಕೂ ಮುನ್ನ ಇಡಿ ದಾಳಿಯನ್ನುದ್ದೇಶಿಸಿ ಮಾತನಾಡಿದ ದೀದಿ, ಇದು ಉದ್ದೇಶಪೂರ್ವಕ ಮತ್ತು ರಾಜಕೀಯ ಪ್ರೇರಿತ ದಾಳಿ. ಜೊತೆಗೆ ಬಿಜೆಪಿಯು ಅನೈತಿಕ ವಿಧಾನಗಳ ಮೂಲಕ ಬಂಗಾಳವನ್ನ ವಶಪಡಿಸಿಕೊಳ್ಳಲು ಮಾಡುತ್ತಿರುವ ಪ್ರಯತ್ನದ ಭಾಗವಾಗಿದೆ. ಪ್ರಜಾಸತ್ತಾತ್ಮಕವಾಗಿ ಹೋರಾಡಲು ಸಾಧ್ಯವಾಗದ ಬಿಜೆಪಿ ಈಗ ಇ.ಡಿ. ಯನ್ನ ಅಸ್ತ್ರವಾಗಿ ಬಳಸಿಕೊಂಡು, ಪಕ್ಷದ ದಾಖಲೆಗಳು, ಕಾರ್ಯತಂತ್ರಗಳು, ಅಭ್ಯರ್ಥಿಗೆ ಸಂಬಂಧಿಸಿದ ವಿವರಗಳು ಮತ್ತು ನಿರ್ಣಾಯಕ ದಾಖಲೆಗಳನ್ನ ಬಲವಂತವಾಗಿ ವಶಪಡಿಸಿಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ಆಕ್ರೋಶ ಹೊರಹಾಕಿದ್ರು.
ಈ ದಾಳಿಯು ಸರ್ವಾಧಿಕಾರಿ ಗೃಹ ಸಚಿವರ ನಿರ್ದೇಶನದ ಅಡಿಯಲ್ಲಿ ಇಡಿಯ ಮೂಲಕ ಆಯೋಜಿಸಲಾದ ದೊಡ್ಡ ಪಿತೂರಿ. ಈ ಪಿತೂರಿಯನ್ನ ಪ್ರತಿ ಹಂತದಲ್ಲೂ ವಿರೋಧಿಸಲಾಗುವುದು. ನಾನು ಬಿಜೆಪಿ ಕಚೇರಿ ಮೇಲೆ ದಾಳಿ ಮಾಡಿದ್ರೆ ಅದ್ರ ಫಲಿತಾಂಶ ಏನಾಗುತ್ತದೆ? ಒಂದ್ಕಡೆ ಸರ್ ಅಭಿಯಾನ ನಡೆಸುವ ಮೂಲಕ ಎಲ್ಲಾ ಮತದಾರರ ಹೆಸರುಗಳನ್ನ ಅಳಿಸುತ್ತಿದ್ದಾರೆ. ಚುನಾವಣೆ ಸಮೀಪ ಇರೋದ್ರಿಂದ ಅವರು ಎಲ್ಲಾ ಮಾಹಿತಿಗಳನ್ನ ಸಂಗ್ರಹ ಮಾಡ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ.