ಮಾನವೀಯತೆ ಮೆರೆದ ಬಸ್ ಸಿಬ್ಬಂದಿ: ಕಳೆದುಹೋದ ಚಿನ್ನ, ಹಣ ಸುರಕ್ಷಿತವಾಗಿ ಹಸ್ತಾಂತರ

ಮಂಗಳೂರು : ಇತ್ತೀಚೆಗಿನ ದಿನಗಳಲ್ಲಿ ಮಾನವೀಯತೆ ಎಂಬುದು ಸತ್ತು ಹೋಗಿದೆ ಎಂದೇ ಹೇಳಲಾಗುತ್ತೆ. ಇದಕ್ಕೆ ಅಪವಾದ ಎಂಬಂತೆ ಅಲ್ಲೊಂದು ಇಲ್ಲೊಂದು ಮಾನವೀಯತೆ ಮೆರೆವ ಸುದ್ದಿಗಳು ಹರಿದಾಡುತ್ತಿರುತ್ತವೆ. ಅನೇಕ ಬಸ್ ಚಾಲಕ, ನಿರ್ವಾಹಕರು ಹೃದಯ ವೈಶಾಲ್ಯತೆ ತೋರಿದ ಅದೆಷ್ಟೋ ಘಟನೆಗಳು ಅವಾಗವಾಗ ಬೆಳಕಿಗೆ ಬರುತ್ತಿರುತ್ತವೆ.
ಇದೀಗ ಮತ್ತೊಂದು ಘಟನೆ ನಡೆದಿದ್ದು, ಮಂಗಳೂರಿನಿಂದ ಕಾರ್ಕಳಕ್ಕೆ ಸಂಚರಿಸುವ ಬಸ್ನ ಚಾಲಕ, ನಿರ್ವಾಹಕ ಮಾನವೀಯತೆ ಮೆರೆದು ಗಮನ ಸೆಳೆದಿದ್ದಾರೆ. ಬಸ್ನಲ್ಲಿ ಚಿನ್ನ ಹಾಗೂ ಹಣವಿದ್ದ ಪರ್ಸ್ ಒಂದು ಬಿದ್ದಿತ್ತು. ಅದರಲ್ಲಿದ್ದ ದಾಖಲೆಗಳನ್ನು ಪರಿಶೀಲಿಸಿದಾಗ ಪರ್ಸ್ ರೇಖಾ ಬೊಂಡಂತಿಲ ಎಂಬವರದು ಎಂಬುದಾಗಿ ತಿಳಿದುಬಂದಿದೆ. ಅವರಿಗೆ ಕರೆ ಮಾಡಿ ಮಾಹಿತಿ ನೀಡಿ ಸೊತ್ತುಗಳನ್ನು ಜೋಪಾನವಾಗಿ ತಲುಪಿಸುವಲ್ಲಿ ನಿಸಾರ್ ಹಾಗೂ ಹೈದರ್ ಸಫಲರಾಗಿದ್ದಾರೆ.
ನಿಸಾರ್ ಹಾಗೂ ಹೈದರ್ ಅವರಿಗೆ ರೇಖಾ ಧನ್ಯವಾದ ತಿಳಿಸಿದ್ದಾರೆ. ಬಸ್ ನಿರ್ವಾಹಕರ ಈ ಮಾನವೀಯತೆಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ.