ಕುಂಭಮೇಳದಲ್ಲಿ 30 ಕೋಟಿ ಆದಾಯ ಗಳಿಸಿದ್ದ ನಾವಿಕನಿಗೆ ತೆರಿಗೆ ಸಂಕಷ್ಟ

ಪ್ರಯಾಗ್ರಾಜ್ನ ಕುಂಭಮೇಳದಲ್ಲಿ 30 ಕೋಟಿ ರೂ. ಗಳಿಸಿದ ನಾವಿಕ ಪಿಂಟು ಮಲ್ಲಾಹ್ಗೆ ಈಗ 12.80 ಕೋಟಿ ರೂ. ತೆರಿಗೆ ಕಟ್ಟುವ ಸಂಕಷ್ಟ ಎದುರಾಗಿದೆ. ಈತನ ಯಶಸ್ಸಿನ ಕಥೆಯನ್ನು ಯೋಗಿ ಆದಿತ್ಯನಾಥ್ ವಿಧಾನಸಭೆಯಲ್ಲಿ ಹೇಳಿದ್ದರು.
ನವದೆಹಲಿ : ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆದ ಮಹಾಕುಂಭ ಮೇಳೆ ನೈನಿ ತಾಲೂಕಿನ ನಾವಿಕನ ಪಾಲಿಗೆ ಜೀವನ ಬದಲಿಸಿದ ಕ್ಷಣವಾಗಿ ಮಾರ್ಪಟ್ಟಿದೆ. ತಾಯಿಯ ಚಿನ್ನವನ್ನು ಅಡವಿಟ್ಟು ಸಾಕಷ್ಟು ಬೋಟ್ಗಳನ್ನು ಖರೀದಿ ಮಾಡಿದ್ದ ನಾವು ಪಿಂಟು ಮಲ್ಲಾಹ್ ಬರೀ 45 ದಿನಗಳ ಕುಂಭಮೇಳದಲ್ಲಿ ಬರೋಬ್ಬರಿ 30 ಕೋಟಿ ರೂಪಾಯಿ ಆದಾಯ ಗಳಿಸಿರುವ ಸುದ್ದಿ ವೈರಲ್ ಆಗಿತ್ತು. ಈ ಬಗ್ಗೆ ಸ್ವತಃ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿಧಾನಸಭೆಯಲ್ಲಿ ಮಾತನಾಡಿದ್ದರು. ಆದರೆ, ಈ ಯಶಸ್ಸಿನ ಕಥೆಯ ಹಿನ್ನಲೆಯಲ್ಲಿಯೇ ಅವರಿಗೆ ತೆರಿಗೆ ಸಂಕಷ್ಟ ಕೂಡ ಶುರುವಾಗಿದೆ. ಯೋಗಿ ಆದಿತ್ಯನಾಥ್ ಈತನ ಕಥೆಯನ್ನು ವಿಧಾನಸಭೆಯಲ್ಲಿ ಹೇಳಿದ ಬಳಿಕ ಉದ್ಯಮಿ ಮೋಹನ್ದಾಸ್ಪೈ ಸೇರಿದಂತೆ ಹಲವರು ಆದಾಯ ತೆರಿಗೆ ಇಲಾಖೆಗೆ ಟ್ಯಾಗ್ ಮಾಡಿ, ಕನಿಷ್ಠ ಇವರಿಂದ ತೆರಿಗೆ ಪಡೆಯುತ್ತೀರಿ ಎಂದು ಭಾವಿಸುತ್ತೇನೆ ಎಂದಿದ್ದರು.
ಈಗ ಕುಂಭಮೇಳದಲ್ಲಿ ನಾವಿಕ ಸಂಪಾದಿಸಿದ 30 ಕೋಟಿ ಆದಾಯ ಅವರನ್ನು ತೆರಿಗೆ ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ. ಮಹಾ ಕುಂಭಮೇಳದಲ್ಲಿ ₹30 ಕೋಟಿ ಗಳಿಸಿದ್ದ ನಾವಿಕ ಈಗ ₹12.80 ಕೋಟಿ ತೆರಿಗೆ ಕಟ್ಟಬೇಕಾಗಿದೆ. ತೆರಿಗೆ ಅಧಿಕಾರಿಗಳು ತಮ್ಮ ಪಾಲನ್ನು ಕೇಳುತ್ತಿರುವುದರಿಂದ ಅವರ ಅನಿರೀಕ್ಷಿತ ಸಂಪತ್ತು ಆರ್ಥಿಕ ಸವಾಲಾಗಿ ಪರಿಣಮಿಸಿದೆ. ಈ ಪರಿಸ್ಥಿತಿಯನ್ನು ನಿಭಾಯಿಸಲು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಮಧ್ಯಸ್ಥಿಕೆಗೆ ಈಗ ಅನೇಕರು ಮನವಿ ಮಾಡಿದ್ದಾರೆ.