ಅರಣ್ಯ ಮಾನವ ಜಾದವ್ ಪಯೆಂಗ್ ಬೆಳೆಸಿದ ಕಾಡಿಗೆ ಬೆಂಕಿ

ಗೋಲಾಘಾಟ್: ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಜಾದವ್ ಪಯೆಂಗ್ ಅವರು ದಶಕಗಳ ಕಾಲ ಶ್ರಮವಹಿಸಿ ನಿರ್ಮಿಸಿದ ಅರಣ್ಯಕ್ಕೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ ಘಟನೆ ಅಸ್ಸಾಂನ ಗೋಲಾಘಾಟ್ನಲ್ಲಿ ನಡೆದಿದೆ.

ಜಾದವ್ ಪಯೆಂಗ್ ಅವರು ನಿರ್ಮಿಸಿದ ಪ್ರಸಿದ್ಧ ‘ಮೊಲೈ ಕಟೋನಿ’ ಅರಣ್ಯಕ್ಕೆ ಭಾನುವಾರ ಸಂಜೆ ಬೆಂಕಿ ಹಚ್ಚಲಾಗಿದೆ ಎಂದು ವರದಿಯಾಗಿದೆ. ಈ ಘಟನೆಯಿಂದ ಸಾವಿರಾರು ಗಿಡಗಳು ಸುಟ್ಟು ಬೂದಿಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಬೆಂಕಿಯಿಂದ 2022ರಲ್ಲಿ ಪಯೆಂಗ್ ಮತ್ತು ಅವರ ಪುತ್ರಿ ನೆಟ್ಟಿದ್ದ ಸುಮಾರು 5,500 ಕ್ಕೂ ಹೆಚ್ಚು ಸಸಿಗಳು ಸುಟ್ಟು ಹೋಗಿವೆ ಎಂದು ತಿಳಿದು ಬಂದಿದೆ. ಆದಾಗ್ಯೂ ಯಾವುದೇ ಪ್ರಾಣಿ ಅಥವಾ ಮನುಷ್ಯ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆಯ ಕುರಿತು ಪ್ರತಿಕ್ರಿಯಿಸಿದ ಜಾದವ್ ಪಯೆಂಗ್, “ಈ ಘಟನೆಯಿಂದ ನಾನು ತೀವ್ರವಾಗಿ ನೊಂದಿದ್ದೇನೆ. ಸಸ್ಯಗಳು ಮತ್ತು ಜೀವವೈವಿಧ್ಯತೆಯ ನಷ್ಟ ತುಂಬಲಾರದ್ದು” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಪಯೆಂಗ್ ಅವರ ಪುತ್ರಿ ಮುನ್ಮುನಿ ಪೆಯಾಂಗ್ ಕೂಡ ಈ ಕೃತ್ಯದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದುಷ್ಕರ್ಮಿಗಳು ಉದ್ದೇಶಪೂರ್ವಕವಾಗಿ ಅರಣ್ಯಕ್ಕೆ ಬೆಂಕಿ ಹಚ್ಚಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಅಧಿಕಾರಿಗಳು ತನಿಖೆಗೆ ಆದೇಶಿಸಿದ್ದಾರೆ.

ಒಬ್ಬ ವ್ಯಕ್ತಿ ಬಂಜರು ಭೂಮಿಯನ್ನು ದಟ್ಟ ಅರಣ್ಯವನ್ನಾಗಿ ಪರಿವರ್ತಿಸಿದ ಜಾದವ್ ಪಯೆಂಗ್ ಅವರನ್ನು ಇಡೀ ದೇಶ ‘ಭಾರತದ ಅರಣ್ಯ ಮಾನವ’ (Forest Man of India) ಎಂದು ಕರೆಯುತ್ತದೆ.