ದೆಹಲಿಯ ವಿಷಗಾಳಿಗೆ ನಿತಿನ್ ಗಡ್ಕರಿ ಕಳವಳ: ಎರಡು ದಿನಕ್ಕೆ ಗಂಟಲು ಸೋಂಕು ಎಂದ ಸಚಿವ; ಪರ್ಯಾಯ ಇಂಧನವೇ ‘ನೈಜ ರಾಷ್ಟ್ರೀಯತೆ’ ಎಂದು ಪ್ರತಿಪಾದನೆ!

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯು ಗುಣಮಟ್ಟ ಸೂಚ್ಯಂಕ (AQI) 413ಕ್ಕೆ ಏರಿಕೆಯಾಗಿ ಪರಿಸ್ಥಿತಿ ತೀರಾ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. ‘ಮೈ ಐಡಿಯಾ ಆಫ್ ನೇಷನ್ ಫರ್ಸ್ಟ್’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಕೇವಲ ಎರಡು ದಿನಗಳ ಕಾಲ ದೆಹಲಿಯಲ್ಲಿದ್ದ ತಮಗೆ ಮಾಲಿನ್ಯದ ಕಾರಣದಿಂದ ಗಂಟಲು ಸೋಂಕು ಉಂಟಾಗಿದೆ ಎಂದು ವೈಯಕ್ತಿಕ ಅನುಭವ ಹಂಚಿಕೊಂಡಿದ್ದಾರೆ.


ನಗರದ ಶೇ. 40 ರಷ್ಟು ಮಾಲಿನ್ಯಕ್ಕೆ ಪಳೆಯುಳಿಕೆ ಇಂಧನಗಳಾದ ಪೆಟ್ರೋಲ್ ಮತ್ತು ಡೀಸೆಲ್ ಬಳಕೆಯೇ ಪ್ರಮುಖ ಕಾರಣ ಎಂದು ಬೆಟ್ಟು ಮಾಡಿದ ಅವರು, ಕಚ್ಚಾ ತೈಲ ಆಮದಿಗೆ ದೇಶವು ವರ್ಷಕ್ಕೆ 22 ಲಕ್ಷ ಕೋಟಿ ರೂಪಾಯಿಗಳನ್ನು ವ್ಯಯಿಸುತ್ತಿರುವುದು ಆರ್ಥಿಕತೆ ಮತ್ತು ಪರಿಸರ ಎರಡಕ್ಕೂ ಮಾರಕವಾಗಿದೆ ಎಂದು ಎಚ್ಚರಿಸಿದ್ದಾರೆ.

ಆಮದು ಕಡಿಮೆ ಮಾಡಿ ರಫ್ತು ಹೆಚ್ಚಿಸುವುದು ಹಾಗೂ ಜೈವಿಕ ಇಂಧನ ಬಳಕೆಯಲ್ಲಿ ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡುವುದೇ ಇಂದಿನ ನೈಜ ‘ರಾಷ್ಟ್ರೀಯತೆ’ ಎಂದು ಕರೆ ನೀಡಿದ ಗಡ್ಕರಿ, ತಾವು ಸ್ವತಃ ಶೇ. 100 ರಷ್ಟು ಎಥೆನಾಲ್ ಚಾಲಿತ ವಾಹನದಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿದ್ದನ್ನು ಉಲ್ಲೇಖಿಸಿ ಪರ್ಯಾಯ ಇಂಧನದ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದರು. ದೆಹಲಿ-ಎನ್ಸಿಆರ್ ಪ್ರದೇಶದ ರಸ್ತೆ ಅಭಿವೃದ್ಧಿ ಯೋಜನೆಗಳಲ್ಲಿ ಸರ್ಕಾರ 1.5 ಲಕ್ಷ ಕೋಟಿ ರೂಪಾಯಿ ಹೂಡಿಕೆ ಮಾಡುತ್ತಿದೆ ಎಂದು ಮಾಹಿತಿ ನೀಡಿದ ಅವರು, ಹಸಿರು ಹೈಡ್ರೋಜನ್ ಮತ್ತು ಎಥೆನಾಲ್ ಬಳಕೆಯಿಂದ ಮಾತ್ರ ಮಾಲಿನ್ಯ ಮುಕ್ತ ಭಾರತ ನಿರ್ಮಿಸಲು ಸಾಧ್ಯ ಎಂದು ಪ್ರತಿಪಾದಿಸಿದರು.
