ಲೋಕಾರ್ಪಣೆಯಾದ ಶ್ರೀ ವಿಶ್ವೇಶತೀರ್ಥ ಸ್ಮಾರಕ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ-ಬಡವರಿಗೆ ಸಿಗಲಿದೆ ವಿಶೇಷ ಸೌಲಭ್ಯ

ತಮ್ಮ ನೇರ ನಡೆ ನುಡಿ, ಮುಕ್ತ ಚಿಂತನೆಯ ಮೂಲಕ ಧರ್ಮಗುರುಗಳು ಹೀಗೂ ಇರಬಲ್ಲರಾ, ಸಾಮಾನ್ಯರೊಂದಿಗೂ ಸಂವಾದಿಸಿ ಸ್ಪಂದಿಸಬಲ್ಲರ ಎನ್ನುವ ರೀತಿಯಲ್ಲಿಯೇ ಇದ್ದ ಉಡುಪಿ ಪೇಜಾವರ ಮಠದ ಪದ್ಮವಿಭೂಷಣ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಕಾಲವಾಗಿ ಆರು ವರ್ಷಗಳೇ ಕಳೆದಿವೆ. ಅವರ ಚಿಂತನೆಗಳು, ಬದುಕಿನ ಆಶಯಗಳು ಜನರಲ್ಲಿ ಉಳಿದುಕೊಂಡಿವೆ. ತಮ್ಮ ವಿಚಾರ ಆಚಾರದ ಜತೆಯಲ್ಲಿ ಇತರೊಂದಿಗೆ ಬೆರೆಯುವ ಒಪ್ಪಿ ನಡೆಯುವ ಒಳಗೊಳ್ಳುವಿಕೆ ಮನೋಭಾವದಿಂದಲೇ ಇಷ್ಟವಾಗುತ್ತಿದ್ದ ವಾಮನಮೂರ್ತಿ ಶ್ರೀ ವಿಶ್ವೇಶತೀರ್ಥರು ಚಿರಸ್ಥಾಯಿಯಾಗಬಲ್ಲ ಹಲವು ಕೆಲಸಗಳನ್ನು ಮಾ ಹೋಗಿದ್ದಾರೆ. ಈಗ ಅವರ ಹೆಸರು ಚಿರಸ್ಥಾಯಿಯಾಗಿಸುವ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ಅವರದ್ದೇ ಹೆಸರಿನಲ್ಲಿ ಆಸ್ಪತ್ರೆಯೊಂದನ್ನು ತೆರೆಯಲಾಗಿದೆ.
ಬೆಂಗಳೂರಿನ ಮಾರತ್ತಹಳ್ಳಿಯಲ್ಲಿ ಶ್ರೀ ಕೃಷ್ಣ ಸೇವಾಶ್ರಮ ಟ್ರಸ್ಟ್ ನಿರ್ಮಿಸಿರುವ ಶ್ರೀ ವಿಶ್ವೇಶ ತೀರ್ಥ ಸ್ಮಾರಕ ಆಸ್ಪತ್ರೆಯನ್ನು ಲೋಕಾರ್ಪಣೆಗೊಳಿಸಲಾಗಿದೆ. 150 ಹಾಸಿಗೆಗಳನ್ನು ಹೊಂದಿರುವ ವಿಶಾಲ ಆಸ್ಪತ್ರೆಯಿದು. ಸಿಟಿ ಸ್ಕ್ಯಾನ್, ಎಂಆರ್ಐ, ಡಯಾಲಿಸಿಸ್ ಮತ್ತು ಅಲ್ವಾಸೌಂಡ್ನಂತಹ ಬಹುವಿಶೇಷ ಸೌಲಭ್ಯಗಳನ್ನು ಹೊಂದಿದೆ. ಶೇ. 60 ರಷ್ಟು ಹಾಸಿಗೆಗಳನ್ನು ಬಡ ವರ್ಗದ ಜನರಿಗೆ ಇಲ್ಲಿ ಮೀಸಲಿಡಲಾಗಿದೆ. 60 ಕೋಟಿ ರೂ. ವೆಚ್ಚದಲ್ಲಿ, ಎರಡು ಎಕರೆ ಜಾಗದಲ್ಲಿ ಆಸ್ಪತ್ರೆ ನಿರ್ಮಿಸಲಾಗಿದೆ.

ಸಮಾಜದ ಬಡವರು ಮತ್ತು ಹಿಂದುಳಿದ ವರ್ಗಗಳಿಗೆ ಉಚಿತ ಚಿಕಿತ್ಸೆ ನೀಡುವ ಈ ಆಧುನಿಕ ಕೇಂದ್ರವು ಮುಂಬರುವ ಹಲವು ವರ್ಷಗಳವರೆಗೆ ಜನರಿಗೆ ಸೇವೆ ಸಲ್ಲಿಸಲಿದೆ. ಈ ಆಸ್ಪತ್ರೆಯಲ್ಲಿ ಶೇ. 60 ರಷ್ಟು ಹಾಸಿಗೆಗಳನ್ನು ಬಡವರಿಗೆ ಕಾಯ್ದಿರಿಸಲಾಗಿದೆ ಮತ್ತು ಕೇಂದ್ರವು ಹಲವಾರು ಅತ್ಯಾಧುನಿಕ ಸೇವೆಗಳನ್ನು ಹೊಂದಿದೆ. ಶ್ರೀ ಕೃಷ್ಣ ಸೇವಾ ಆಶ್ರಮ ಟ್ರಸ್ಟ್ ಯಾವಾಗಲೂ ಸಮಾಜದ ಬಡವರು ಮತ್ತು ಅಂಚಿನಲ್ಲಿರುವ ವರ್ಗಗಳ ಸೇವೆಗಾಗಿ ಕೆಲಸ ಮಾಡಿದೆ. ಈ ಟ್ರಸ್ಟ್ ಅನ್ನು ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಸ್ಥಾಪಿಸಿದ್ದಾರೆ. ಇಂದು ಅವರ ಉತ್ತರಾಧಿಕಾರಿ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಈ ಸಂಪ್ರದಾಯವನ್ನು ಮುಂದುವರೆಸುತ್ತಿದ್ದಾರೆ. ಶ್ರೀ ಕೃಷ್ಣ ವೈದ್ಯಕೀಯ ಕೇಂದ್ರ, ಶ್ರೀ ಕೃಷ್ಣ ನೇತ್ರಾಲಯ, ದಂತ ಕೇಂದ್ರ ಮತ್ತು ಶ್ರೀ ವಿಶ್ವೇಶತೀರ್ಥ ಸ್ಮಾರಕ ಚಿಕಿತ್ಸಾಲಯವನ್ನು ಸ್ಥಾಪಿಸಲಾಗಿದೆ ಎನ್ನುವುದು ಆಸ್ಪತ್ರೆ ಉದ್ಘಾಟಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿವರಣೆ.
60 ಕೋಟಿ ರೂ. ನಿಧಿಯ ಸಹಾಯದಿಂದ 2 ಎಕರೆ ಭೂಮಿಯಲ್ಲಿ ನಿರ್ಮಿಸಲಾದ ವಿಶ್ವೇಶತೀರ್ಥ ಸ್ಮಾರಕ ಆಸ್ಪತ್ರೆಯ ಉದ್ಘಾಟನೆಯು 150 ಹಾಸಿಗೆಗಳ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯೊಂದಿಗೆ ‘ಕೈಗೆಟುಕುವ ಆರೋಗ್ಯ ರಕ್ಷಣೆ’ಯ ಕೇಂದ್ರವಾಗಲಿದೆ.
ಸಬ್ಸಿಡಿಯೊಂದಿಗೆ ಬಡ ರೋಗಿಗಳಿಗೆ ಸೇವೆ ಸಲ್ಲಿಸುವ ಈ ಯೋಜನೆಯನ್ನು ಸಿಟಿ ಸ್ಕ್ಯಾನ್, ಎಂಆರ್ಐ, ಡಯಾಲಿಸಿಸ್, ಅಲ್ಟಾಸೌಂಡ್ನಂತಹ ಅನೇಕ ಸೌಲಭ್ಯಗಳೊಂದಿಗೆ ಸಂಯೋಜಿಸಲಾಗಿದೆ. ಒಂದೇ ಸೂರಿನಡಿ ಬಡ ರೋಗಿಗಳಿಗೆ ಉತ್ತಮ ಸೇವೆಯನ್ನು ನೀಡುವ ಕೆಲಸ ಶ್ಲಾಘನೀಯ ಎಂದರು ಅಮಿತ್ ಶಾ
ವಿಶ್ವೇಶ ತೀರ್ಥ ಸ್ವಾಮೀಜಿ ಯಾವಾಗಲೂ ರಾಷ್ಟ್ರೀಯ ಏಕತೆಗಾಗಿ ಶ್ರಮಿಸಿದ್ದಾರೆ. ದಕ್ಷಿಣ ಭಾರತದಲ್ಲಿ ಹಿಂದೂ ಸಮಾಜವನ್ನು ಜಾತಿಗಳಾಗಿ ವಿಭಜಿಸುವುದನ್ನು ತಡೆಯುವಲ್ಲಿ ಸ್ವಾಮೀಜಿ ಮಹತ್ವದ ಪಾತ್ರ ವಹಿಸಿದ್ದಾರೆ ಸ್ವಾಮೀಜಿ ತಮ್ಮ ಇಡೀ ಜೀವನವನ್ನು ಶಿಕ್ಷಣ, ಸೇವೆ, ಆರೋಗ್ಯ ರಕ್ಷಣೆ ಮತ್ತು ವೇದಗಳ ಪ್ರಚಾರಕ್ಕೆ ಮುಡಿಪಾಗಿಟ್ಟರು. ಸ್ವಾಮೀಜಿ ಧಾರ್ಮಿಕ ಬೋಧನೆಗಳನ್ನು ಆಧುನಿಕ ಶಿಕ್ಷಣದೊಂದಿಗೆ ಸಂಯೋಜಿಸಲು ಶ್ರಮಿಸಿದ್ದಾರೆ ಎಂದು ನೆನಪಿಸಿಕೊಂಡರು.
ಕಳೆದ 10 ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಜನರ ಆರೋಗ್ಯ ಮತ್ತು ಯೋಗಕ್ಷೇಮದ ಮೇಲೆ ಹೆಚ್ಚಿನ ಗಮನ ಹರಿಸಿದ್ದಾರೆ. ಸ್ವಚ್ಛ ಭಾರತ ಅಭಿಯಾನ, ಫಿಟ್ ಇಂಡಿಯಾ ಆಂದೋಲನ, ಪೌಷ್ಟಿಕಾಂಶ ಮಿಷನ್, ಮಿಷನ್ ಇಂದ್ರಧನುಷ್, ಆಯುಷ್ಮಾನ್ ಭಾರತ್ ಯೋಜನೆ ಮತ್ತು ಜಲ ಜೀವನ್ ಮಿಷನ್ ಮುಂತಾದ ಅಭಿಯಾನಗಳು ಆರೋಗ್ಯಕರ ಭಾರತ ಅಭಿಯಾನದ ವಿಭಿನ್ನ ಅಂಶಗಳಾಗಿವೆ. ಸ್ವಚ್ಛತೆಯು ಆರೋಗ್ಯವನ್ನು ನಿರ್ವಹಿಸಬಹುದು, ಫಿಟೈಸ್ ಆರೋಗ್ಯವನ್ನು ಶಾಶ್ವತವಾಗಿಸುತ್ತದೆ ಮತ್ತು ಪೌಷ್ಟಿಕ ಮತ್ತು ಸಮತೋಲಿತ ಆಹಾರ ಮಾತ್ರ ಮಾನವ ದೇಹವನ್ನು ಆರೋಗ್ಯಕರವಾಗಿಡುತ್ತದೆ. ಆಯುಷ್ಮಾನ್ ಭಾರತ್ ಯೋಜನೆಯಡಿಯಲ್ಲಿ ಪ್ರಧಾನಿ ಮೋದಿ 60 ಕೋಟಿ ಜನರಿಗೆ 5 ಲಕ್ಷ ರೂ ವರೆಗೆ ಉಚಿತ ಚಿಕಿತ್ಸೆಯನ್ನು ಒದಗಿಸಿದ್ದಾರೆ . ಈಗ ಸ್ವಾಮೀಜಿಯ ಸ್ಮರಣಾರ್ಥ ನಿರ್ಮಿಸಲಾದ ಆಸ್ಪತ್ರೆಯು ಸಮಾಜವನ್ನು ಆರೋಗ್ಯಕರವಾಗಿಡುವಲ್ಲಿ ಮಹತ್ವದ ಪಾತ್ರ ವಹಿಸುವ ವಿಶ್ವಾಸವಿದೆ ಎಂದು ಅಮಿತ್ ಶಾ ಹೇಳಿದರು.
ಉಡುಪಿಯ ಪೇಜಾವರ ಅಧೋಕ್ಷಜ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಆಸ್ಪತ್ರೆ ಆರಂಭಿಸಿದ ಆಶಯ ವಿವರಿಸಿದರು.